ಬೆಂಗಳೂರು
ವಿಚಾರವಾದಿ ಕಲಬುರ್ಗಿ ಅವರ ಹತ್ಯೆ ತನಿಖೆ ಬಗ್ಗೆ ಸುಪ್ರೀಂ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿರುವ ಬಗ್ಗೆ ಗೃಹ ಸಚಿವ ಜಿ.ಪರಮೇಶ್ವರ್ ಪ್ರತಿಕ್ರಿಯಿಸಿ ತನಿಖೆ ಸರಿಯಾಗಿಯೇ ನಡೆಯುತ್ತಿದೆ ಎಂದು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಬುರ್ಗಿ ತನಿಖೆಯನ್ನು ರಾಜ್ಯ ಪೊಲೀಸರು ಸರಿಯಾದ ದಾರಿಯಲ್ಲಿಯೇ ಮಾಡುತ್ತಿದ್ದಾರೆ, ಆದರೆ ನ್ಯಾಯಾಲಯಕ್ಕೆ ಯಾವ ಕಾರಣಕ್ಕೆ ಅಸಮಾಧಾನವಾಗಿದೆಯೋ ಗೊತ್ತಿಲ್ಲ ಎಂದರು.
ಕಲಬುರ್ಗಿ ಹತ್ಯೆಗೆ ಸಂಬಂಧಿಸಿದಂತೆ ಈಗಾಗಲೇ ಕೆಲವು ಆರೋಪಿಗಳನ್ನು ಬಂಧಿಸಲಾಗಿದೆ. ತನಿಖೆ ಸಹ ಸರಿಯಾದ ಮಾರ್ಗದಲ್ಲಿಯೇ ಇದೆ. ಈ ಬಗ್ಗೆ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲಾಗುವುದು. ಕಲಬುರ್ಗಿ ಹತ್ಯೆಯಲ್ಲಿ ಎರಡು ರಾಜ್ಯಗಳ ಹಂತಕರ ಕೈವಾಡ ಇರುವುದು ಗೊತ್ತಾಗಿದ್ದು, ಎರಡು ರಾಜ್ಯಗಳ ಪ್ರಕರಣವಾಗಿರುವ ಕಾರಣ ತನಿಖೆ ವಿಳಂಬವಾಗುತ್ತಿದೆ. ತನಿಖೆ ನಡೆಸಲು ಕೆಲವು ನಿಯಮ ಹಾಗೂ ವಿಧಾನಗಳಿರುತ್ತವೆ. ಆದ ಕಾರಣ ತನಿಖೆ ವಿಳಂಬವಾಗುತ್ತಿದೆ ಎಂದು ಅವರು ಹೇಳಿದರು.
ಪೊಲೀಸರಿಗೆ ಅಭಿನಂದನೆ: ಅಂಬರೀಶ್ ಅವರ ನಿಧನದ ನಂತರ ಹಾಗೂ ಅವರ ಅಂತ್ಯಕ್ರಿಯೆ ಬಹು ಶಾಂತಯುತವಾಗಿ ಆಗಿದ್ದು, ಇದಕ್ಕೆ ಕಾರಣಕರ್ತರಾದ ರಾಜ್ಯ ಪೊಲೀಸರಿಗೆ ಅಭಿನಂದನೆ ಸಲ್ಲಿಸಲಾಗುತ್ತದೆ. ಹಾಗೆಯೇ ಶಾಂತಿ ಕಾಪಾಡಿದ ರಾಜ್ಯದ ಜನರಿಗೂ ಕೃತಜ್ಞತೆ ಅರ್ಪಿಸುವುದಾಗಿ ಪರಮೇಶ್ವರ್ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2018/08/news-2-g-parameshwara.jpg)