ಬೆಂಗಳೂರು
ಕುಡಿತದ ಚಟ ಬಿಡುವಂತೆ ತಂದೆ-ತಾಯಿ ಹೇಳಿದ ಬುದ್ಧಿ ಮಾತಿನಿಂದ ಬೇಸತ್ತ ನವ ವಿವಾಹಿತನೊಬ್ಬ ಹುಣಿಸೆಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಾಗಲೂರು ಗ್ರಾಮದ ಅನಿಲ್ ಕುಮಾರ್ (28)ಎಂದು ಆತ್ಮಹತ್ಯೆ ಮಾಡಿಕೊಂಡವರನ್ನು ಗುರುತಿಸಲಾಗಿದೆ. ಕೃಷಿ ಕೆಲಸ ಮಾಡಿಕೊಂಡಿದ್ದ ಅನಿಲ್ ಕುಮಾರ್, ಇತ್ತೀಚೆಗೆ ಕುಡಿತದ ಚಟ ಅಂಟಿಸಿಕೊಂಡಿದ್ದರು ಆತನ ಚಟ ಬಿಡಿಸಲು ಸಾಧ್ಯವಾಗದೇ ಮದುವೆ ಮಾಡಿದರೆ ಕುಡಿತ ಬಿಡುತ್ತಾನೆಂಬ ಕಾರಣಕ್ಕೆ 7 ತಿಂಗಳ ಹಿಂದೆ ತಂದೆ ಕೃಷ್ಣಾನಂದ ಅವರು ಅನಿಲ್ ಕುಮಾರ್ಗೆ ವಿವಾಹ ಮಾಡಿದರು.
ಆದರೂ ಆತ ಕುಡಿತದ ಚಟ ಬಿಟ್ಟಿರಲಿಲ್ಲ. ಮಂಗಳವಾರ ಸಂಜೆ ಕುಡಿದು ಬಂದ ಅನಿಲ್ಕುಮಾರ್ಗೆ ಕುಡಿತ ಬಿಟ್ಟು ಸರಿಯಾಗಿ ಸಂಸಾರ ನಡೆಸುವಂತೆ ತಂದೆ-ತಾಯಿ ಬೈದು ಬುದ್ಧಿ ಹೇಳಿದ್ದಾರೆ. ಇದರಿಂದ ನೊಂದ ಅನಿಲ್ ಕುಮಾರ್, ಗೋಪಾಲಪುರಂ ಮುಖ್ಯರಸ್ತೆಯ ಜಮೀನಿನಲ್ಲಿದ್ದ ಹುಣಿಸೆಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅನಿಲ್ ಕುಮಾರ್ ಪತ್ನಿ ಗರ್ಭಿಣಿಯಾಗಿದ್ದು, ದಿಕ್ಕೇ ತೋಚದಂತಾಗಿದೆ. ಪ್ರಕರಣ ದಾಖಲಿಸಿರುವ ಬಾಗಲೂರು ಪೆÇಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
