ಸಚಿವ ಸಂಪುಟ ವಿಸ್ತರಣೆ ಮತ್ತೆ ಮುಂದಕ್ಕೆ

ಬೆಂಗಳೂರು

          ನೆನೆಗುದಿಗೆ ಬಿದ್ದಿರುವ ಸಚಿವ ಸಂಪುಟ ವಿಸ್ತರಣೆ ಮತ್ತೆ ಮುಂದಕ್ಕೆ ಹೋಗುವ ಲಕ್ಷಣಗಳು ಕಾಣುತ್ತಿವೆ. ಪ್ರತಿಬಾರಿ ಒಂದಿಲ್ಲೊಂದು ನೆಪದಿಂದ ಸಂಪುಟ ವಿಸ್ತರಣೆಗೆ ತಡೆ ಬಿದ್ದಿದ್ದು ಈ ಬಾರಿ `ಧನುರ್ಮಾಸ’ ಅಡ್ಡಬಂದಿದೆ.

       ಇತ್ತೀಚಿಗೆ ಕಾಂಗ್ರೆಸ್ ನಾಯಕರು ಸಂಪುಟ ವಿಸ್ತರಣೆ ಕುರಿತು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರೊಂದಿಗೆ ಚರ್ಚೆ ನಡೆಸಿದ್ದರು ಹಾಗೂ ಸಂಪುಟ ವಿಸ್ತರಣೆ ದಿನಾಂಕ ನಿಗದಿ ಮಾಡುವ ಜವಾಬ್ದಾರಿಯನ್ನು ದೇವೇಗೌಡರ ಹೆಗಲಿಗೆ ಹೊರಿಸಿದ್ದರು.

      ಕಾಂಗ್ರೆಸ್ ಪಕ್ಷದಲ್ಲಿನ ಸಚಿವಾಕಾಂಕ್ಷಿಗಳು ಸಂಪುಟ ಸೇರಲು ತುದಿಗಾಲ ಮೇಲೆ ನಿಂತಿದ್ದು ಈಗಾಗಲೇ ಕರ್ನಾಟಕದ ಉಸ್ತುವಾರಿ ಕೆ.ಸಿ. ವೇಣುಗೋಪಾಲ ಅವರನ್ನು ಭೇಟಿಯಾಗಿ ತಮ್ಮ ಅವಹಾಲು ತೋಡಿಕೊಂಡಿದ್ದಾರೆ. ಇದೀಗ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರಿಗೆ ದುಂಬಾಲು ಬಿದ್ದಿದ್ದಾರೆ.

      ಡಿಸೆಂಬರ್ 10 ರಿಂದ ಹತ್ತು ದಿನಗಳ ಕಾಲ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ನಂತರ ಧನುರ್ಮಾಸ ಆರಂಭವಾಗುತ್ತಿದ್ದು ಈ ಸಂದರ್ಭದಲ್ಲಿ ಸಂಪುಟ ವಿಸ್ತರಣೆಗೆ ಕೈ ಹಾಕುವ ಗೊಡವೆಗೆ ಹೋಗುವುದಿಲ್ಲ. ಜನೆವರಿಯಲ್ಲಿ ಸಂಕ್ರಮಣ, ಅದು ಮುಗಿಯುತ್ತಿದ್ದಂತೆ ಲೋಕಸಭೆ ಚುನಾವಣೆ ತಯಾರಿ ಹೀಗೆ ಸಂಪುಟ ವಿಸ್ತರಣೆಗೆ ಸಾಲು ಸಾಲಾಗಿ ಅಡ್ಡಿಗಳು ಬಂದಿವೆ. ಇದನ್ನೆಲ್ಲವನ್ನೂ ಮೀರಿ ಸಂಪುಟ ವಿಸ್ತರಣೆಗೆ ಕೈ ಹಾಕಿದರೆ ಮುಂದೆ ಅಡ್ಡಪರಿಣಾಮಗಳು ಎದುರಾಗುತ್ತವೆ ಎಂದು ಕಾಂಗ್ರೆಸ್‍ನ ರಾಜ್ಯನಾಯಕರಿಗೆ ಮನವರಿಕೆಯಾಗಿದೆ. ಹಾಗಾಗಿ ರಾಜ್ಯದ ನಾಯಕರು ಸಂಪುಟ ವಿಸ್ತರಣೆಯ ಗೊಂದಲದಲ್ಲಿರುವುದು ಸ್ಪಷ್ಟ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap