ಹರಿಹರ:
ತಾಲೂಕಿನ ಎಕ್ಕೆಗೊಂದಿಯಿಂದ ಭಾನುವಳ್ಳಿವರೆಗಿನ ರಸ್ತೆ ತೇಪೆ ಹಾಕುವ ಕಾಮಗಾರಿ ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿದೆ.
ಈ ಭಾಗದ ರಸ್ತೆಯಲ್ಲಿ ಎಷ್ಟೊಂದು ತೇಪೆಗಳಿವೆ ಎಂದರೆ ತೇಪೆ ಹಾಕುವ ಬದಲು ಹೊಸದಾಗಿ ಡಾಂಬರೀಕರಣ ಮಾಡುವುದೆ ಸೂಕ್ತ ಎನಿಸುತ್ತದೆ. ಕೇವಲ ತೇಪೆ ಹಾಕುವುದೆಂದರೆ ಎಲ್ಲಾ ಗುಂಡಿಗಳನ್ನು ಮುಚ್ಚಲಾಗುವುದಿಲ್ಲ.
ಏಕೆಂದರೆ ಬಿಡುಗಡೆಯಾಗಿರುವುದು ಸೀಮಿತ ಅನುದಾನ. ಅಷ್ಟರಲ್ಲಿ ಎಲ್ಲಾ ಗುಂಡಿಗಳನ್ನು ಮುಚ್ಚುವುದು ಅಸಾಧ್ಯವಾದದ್ದು ಎಂಬುದು ಗ್ರಾಮಸ್ಥರ ಅಭಿಪ್ರಾಯವಾಗಿದೆ. ಇದಕ್ಕಾಗಿಯೆ ಭಾನುವಳ್ಳಿ ಗ್ರಾಮದ ರೈತ ಸಂಘದ ಪದಾಧಿಕಾರಿಗಳು ತೇಪೆ ಕೆಲಸ ಬೇಡ, ಹೊಸದಾಗಿ ಡಾಂಬರೀಕರಣವಾಗಲಿ ಎಂದು ಪಿಡಬ್ಲ್ಯುಡಿ ಅಧಿಕಾರಿಗಳಿಗೆ ಮನವಿ ನೀಡಿದ್ದರು.
ಆದರೆ ಪಿಡಬ್ಲ್ಯುಡಿ ಇಲಾಖೆ ಅಧಿಕಾರಿಗಳ ಪ್ರಕಾರ ತೇಪೆ ಕಾಮಗಾರಿಗೆ 9 ಲಕ್ಷ ರೂ. ಬಿಡುಗಡೆಯಾಗಿ ಟೆಂಡರ್ ಆಗಿದೆ. ಹೀಗಾಗಿ ತೇಪೆ ಕಾಮಗಾರಿ ಮಾತ್ರ ಮಾಡಲು ಸಾಧ್ಯ. ಮುಂದಿನ ಹಂತದಲ್ಲಿ ಹೆಚ್ಚಿನ ಹಣ ಬಿಡುಗಡೆಯಾದರೆ ಹೊಸದಾಗಿ ಡಾಂಬರೀಕರಣ ಮಾಡಲಾಗುವುದೆನ್ನುತ್ತಾರೆ.ಆದರೂ ಕೂಡ ಕನಿಷ್ಠ ಶೇ.50 ರಷ್ಟಾದರು ಗುಂಡಿಗಳು ಕಡಿಮೆಯಾಗಬಹುದೆಂಬ ಅಭಿಪ್ರಾಯ ವ್ಯಕ್ತವಾಗಿದೆ.