ಕೊಯಮತ್ತೂರು:
ದ್ರಾವಿಡ ಚಳವಳಿಯ ನಾಯಕ ಪೆರಿಯಾರ್ ಅವರ ಪ್ರತಿಮೆಯನ್ನು ತಮಿಳುನಾಡಿನ ಕೊಯಮತ್ತೂರಿನಲ್ಲಿ ದುಷ್ಕರ್ಮಿಗಳು ವಿರೂಪಗೊಳಿಸಿದ್ದಾರೆ.ಕೊಯಮತ್ತೂರಿನ ಸುಂದರಪುರಂ ಪ್ರದೇಶದಲ್ಲಿರುವ ಪೆರಿಯಾರ್ ಪ್ರತಿಮೆಯ ಮೇಲೆ ಅಪರಿಚಿತ ವ್ಯಕ್ತಿಗಳು ಕೇಸರಿ ಬಣ್ಣ ಸುರಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೆರಿಯಾರ್ ಪ್ರತಿಮೆ ವಿರೂಪಗೊಳಿಸಿದ ಸುದ್ದಿ ಹರಡುತ್ತಿದ್ದಂತೆ ಪ್ರತಿಭಟನೆಗೆ ಇಳಿದ ಪೆರಿಯಾರ್ ಅನುಯಾಯಿಗಳು, ದುಷ್ಕರ್ಮಿಗಳ ಬಂಧನಕ್ಕೆ ಒತ್ತಾಯಿಸಿದ್ದಾರೆ.ಸ್ಥಳಕ್ಕೆ ಭೇಟಿ ನೀಡಿರುವ ಕೊಯಮತ್ತೂರು ಪೊಲೀಸ್ ಉಪ ಆಯುಕ್ತ ಜಿ. ಸ್ಟಾಲಿನ್ ಅವರು ದುಷ್ಕರ್ಮಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.ಪ್ರತಿಮೆ ವಿರೂಪಕ್ಕೆ ಸಾಮಾಜಿಕ ಜಾಲತಾಣ ಟ್ವಿಟರ್ನಲ್ಲಿಯೂ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
‘ನಿಧನಗೊಂಡ ದಶಕಗಳ ನಂತರವೂ ಪೆರಿಯಾರ್ ನಿರೂಪಣೆಯೊಂದನ್ನು ಕಟ್ಟಿಕೊಡುತ್ತಿದ್ದಾರೆ. ಅವರು ಕೇವಲ ಪ್ರತಿಮೆಯಲ್ಲ, ಬಣ್ಣ ಬಳಿದವರನ್ನೂ ಸೇರಿದಂತೆ ಎಲ್ಲರಿಗೂ ಸ್ವಾಭಿಮಾನ ಮತ್ತು ಸಾಮಾಜಿಕ ನ್ಯಾಯದ ಮಾರ್ಗವಾಗಿದ್ದಾರೆ’ ಎಂದು ಡಿಎಂಕೆ ನಾಯಕಿ, ಸಂಸದೆ ಕನ್ನಿಮೋಳಿ ಟ್ವೀಟ್ ಮಾಡಿದ್ದಾರೆ.’ಸಣ್ಣ ಮನಸ್ಸಿನ ದುಷ್ಕರ್ಮಿಗಳು ಕೊಯಮತ್ತೂರಿನಲ್ಲಿರುವ ಪೆರಿಯಾರ್ ಪ್ರತಿಮೆಯ ಮೇಲೆ ಬಣ್ಣವನ್ನು ಸುರಿದಿದ್ದಾರೆ. ಆ ಮನುಷ್ಯ ಬಣ್ಣಗಳಿಗಿಂತ ಮೇಲಿದ್ದಾರೆಂದು ಮರೆಯಬೇಡಿ’ ಎಂದು ಪ್ರಮೋದ್ ಮಾದವ್ ಎಂಬುವವರು ಟ್ವೀಟಿಸಿದ್ದಾರೆ.
‘ಪೆರಿಯಾರ್ ಕೇವಲ ಹೆಸರಲ್ಲ. ಅದು ಸ್ವಾಭಿಮಾನವನ್ನು ಕಲಿಸುವ ಒಂದು ಸಿದ್ಧಾಂತ ಮತ್ತು ತುಳಿತಕ್ಕೊಳಗಾದ ಜನರ ಸಂಕೇತವಾಗಿದೆ’ ಎಂದು ಪ್ರಭಾ ಎಂಬುವವರು ಹೇಳಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
