ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಸಿಯೂಟ ನೌಕರರ ಪ್ರತಿಭಟನೆ

ತುಮಕೂರು
    ಕನಿಷ್ಠ ವೇತನ ಹೆಚ್ಚಳ ಮಾಡಬೇಕು. ನಿವೃತ್ತಿ ವೇತನ ನೀಡಬೇಕು. ಖಾಸಗಿಕರಣ ಕೈ ಬಿಡಬೇಕು. ಹೀಗೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೋಮವಾರ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಸಿಐಟಿಯು ರಾಜ್ಯ ಘಟಕದ ಅಧ್ಯಕ್ಷೆ ವರಲಕ್ಷ್ಮಿ ನೇತೃತ್ವದಲ್ಲಿ ಪ್ರತಿಭಟನೆಯನ್ನು ಏರ್ಪಡಿಸಲಾಗಿತ್ತು.
     ಈ ಪ್ರತಿಭಟನೆಗೆ ರಾಜ್ಯಾದ್ಯಂತ ಬಿಸಿಯೂಟ ನೌಕರರು ವಿವಿಧ ವಾಹನಗಳಲ್ಲಿ, ಕೆಲವು ಬಸ್ ಹಾಗೂ ರೈಲುಗಳ ಮುಖಾಂತರ ಬೆಂಗಳೂರಿಗೆ ಆಗಮಿಸುತ್ತಿದ್ದಾಗ ಅವರನ್ನು ಆಯಾ ಜಿಲ್ಲೆಗಳಲ್ಲಿ ಸ್ಥಳೀಯ ಪೊಲೀಸರು ತಡೆ ಹಿಡಿದಿದ್ದರೆ.
    ಪ್ರತಿಭಟನೆಯ ಕಿಚ್ಚು ಹೆಚ್ಚಾಗಿದ್ದು, ಬಿಸಿಯೂಟ ಕಾರ್ಯಕರ್ತೆಯರ ಆಕ್ರೋಶ ಮುಗಿಲು ಮುಟ್ಟಿದೆ. ಈ ಪ್ರತಿಭಟನೆ ಮಾಡಲು ಅನುಮತಿ ಕೋರಿದರೂ ಈ ವರೆಗೂ ಇಂದು ನಾಳೆ ಎಂದು ಸಬೂಬು ಹೇಳುತ್ತಲೇ ಕೊನೆಗೆ ಅನುಮತಿ ನಿರಾಕರಣೆ ಮಾಡಿದ್ದಾರೆ. ಇದರಿಂದ ಪ್ರತಿಭಟನೆಗೆ ಆಗಮಿಸುತ್ತಿದ್ದ ಬಿಸಿಯೂಟ ಕಾರ್ಯಕರ್ತರನ್ನು ಅಲ್ಲಲ್ಲಿಯೇ ತಡೆ ಹಿಡಿದಿದ್ದು ಕೆಲ ಕಡೆಗಳಲ್ಲಿ ಕೆಲವರನ್ನು ಬಂಧಿಸಲಾಗಿದೆ.
   ಉತ್ತರ ಕರ್ನಾಟಕದಿಂದ ಸುಮಾರು 3000ಕ್ಕೂ ಹೆಚ್ಚು ಮಂದಿ ಮಹಿಳೆಯರು ಪ್ರತಿಭಟನೆಗಾಗಿ ಆಗಮಿಸಿದ್ದು, ಅವರನ್ನು ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಕೂಡಿ ಹಾಕಲಾಗಿದೆ. ಬೆಳಗ್ಗೆ ಬಂದ ಅವರು ಪ್ರತಿಭಟನೆಗೆ ತೆರಳಲು ಮುಂದಾಗಿದ್ದು, ಪೊಲೀಸರು ಅವರನ್ನು ತಡೆಹಿಡಿದಿದ್ದಾರೆ. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಟಿ.ಜೆ.ಉದೇಶ್ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರ ಬಳಿ ಚರ್ಚೆ ಮಾಡಿ ಅವರನ್ನು ಎಲ್ಲಿಗೂ ಕಳುಹಿಸದೇ ಅಲ್ಲಿಯೇ ಕುಳಿತುಕೊಳ್ಳುವಂತೆ ತಿಳಿಸಿದ್ದಾರೆ. 
   ಪೊಲೀಸರೊಂದಿಗೆ ಚರ್ಚೆ ಮಾಡುವಾಗ ಜಮಖಂಡಿಯ ಮುಖಂಡರಾದ ಸುನಂದಮ್ಮ ಎಂಬುವವರು ಮಾತನಾಡಿ, ಕಳೆದ 18 ವರ್ಷಗಳಿಂದ ಕೇವಲ 300 ರೂಗಳ ವೇತನ ಪಡೆದು ಕೆಲಸ ಮಾಡುತ್ತಾ ಬಂದಿದ್ದೇವೆ. ಕಾಂಗ್ರೆಸ್ ಸರ್ಕಾರದಲ್ಲಿ ಕ್ಷೀರ ಭಾಗ್ಯ ಬಂದ ನಂತರ 500 ರೂಗಳನ್ನು ಹೆಚ್ಚುವರಿಯಾಗಿ ನೀಡಿದ್ದಾರೆ. ಹಲವು ಪ್ರತಿಭಟನೆಗಳ ಫಲವಾಗಿ ಇಂದು ನಮಗೆ 2600 ರೂಪಾಯಿ ವೇತನ ಸಿಗುತ್ತಿದೆ. ಅದು ಕೂಡ ಸರಿಯಾದ ಸಮಯಕ್ಕೆ ಬರುತ್ತಿಲ್ಲ. ಈ ನಿಟ್ಟಿನಲ್ಲಿ ಪ್ರತಿಭಟನೆಗೆ ಮುಂದಾಗಿದ್ದೇವೆ ನಮ್ಮ ಕಳುಹಿಸಿಕೊಡಿ ಎಂದು ಕೇಳಿಕೊಂಡರೂ ಪೊಲೀಸರು ಅದನ್ನು ಒಪ್ಪಲಿಲ್ಲ. ಬದಲಿಗೆ ಪ್ರತಿಭಟನೆ ಅನುಮತಿ ಪತ್ರ ಇದ್ದರೆ ತೋರಿಸಿ ಆಗ ನಿಮ್ಮನ್ನು ಕಳುಹಿಸುತ್ತೇವೆ. ಇಲ್ಲವಾದಲ್ಲಿ ಆದೇಶ ಬರುವವರೆಗೂ ಇಲ್ಲಿಯೇ ಕೂಳಿತುಕೊಳ್ಳಿ ಅಥವಾ ನಮ್ಮೊಂದಿಗೆ ಬಂದರೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡುತ್ತೇವೆ ಎಂದು ಎಎಸ್‍ಪಿ ಉದೇಶ್ ತಿಳಿಸಿದರು.
   ಇದಕ್ಕೆ ಆಲೋಚನೆ ಮಾಡಿದ ಬಿಸಿಯೂಟ ಕಾರ್ಯಕರ್ತೆಯರು ತಾವು ಎಲ್ಲಿಗೂ ಹೋಗದಂತೆ ಇಲ್ಲಿಯೇ ಕುಳಿತುಕೊಳ್ಳುತ್ತೇವೆ ಎಂದು ಸುಮಾರು 1 ಸಾವಿರಕ್ಕೂ ಹೆಚ್ಚು ಮಂದಿ ಬಿಸಿಯೂಟ ನೌಕರರು ಅಲ್ಲಿಯೇ ಕುಳಿತುಕೊಂಡರು. 
    ಬಿಸಿಯೂಟ ನೌಕರರ ಮುಖಂಡರಾದ ಶೋಭಾ ಹೊಸಮನಿ ಮಾತನಾಡಿ ದಿನಗೂಲಿ ನೌಕರರಿಗೆ ನೀಡಬೇಕಾದ ಕನಿಷ್ಠ ವೇತನವನ್ನು ನೀಡುವಂತೆ ಒತ್ತಾಯಿಸುತ್ತಿದ್ದೇವೆ. ಕೇವಲ 300 ರೂಗಳ ವೇತನ ನೀಡುವಾಗಿನಿಂದಲೂ ದುಡಿಯುತ್ತಿದ್ದೇವೆ. ಈಗ ಕೇವಲ 2700 ರೂಗಳ ವೇತನ ನೀಡುತ್ತಿದ್ದಾರೆ. ಅದನ್ನು ಹೆಚ್ಚಳ ಮಾಡಬೇಕು ಎಂಬುದೇ ಪ್ರಮುಖ ಒತ್ತಾಯವಾಗಿದೆ. ಅದಕ್ಕಾಗಿ ಹೋರಾಟ ಮಾಡಲು ಮುಂದಾಗಿದ್ದೇವೆ. ಬಾಗಲಕೋಟೆ, ಜಮಖಂಡಿ, ಬಾದಾಮಿ, ಮುಧೋಳ್ ಸೇರಿದಂತೆ  ಇನ್ನಿತರ ಭಾಗಗಳಿಂದ ಆಗಮಿಸಿದ್ದೇವೆ. ನಮಗೆ ನ್ಯಾಯ ದೊರಕುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದರು.
   ಪ್ರಜಾಪ್ರಗತಿ ಪತ್ರಿಕೆಯೊಂದಿಗೆ ಮಾತನಾಡಿದ ಮುಖ್ಯಸ್ಥೆ ಸುನಂದಮ್ಮ, ಬಿಸಿಯೂಟ ಯೋಜನೆ ಖಾಸಗೀಕರಣ ಮಾಡಬಾರದು. ಬಿಸಿಯೂಟ ನೌಕರರಿಗೆ ಕನಿಷ್ಠ ಕೂಲಿ ನೀಡುವ ಆದೇಶವನ್ನ ಸರ್ಕಾರ ಮಾಡಬೇಕು. ನಿವೃತ್ತಿ ವೇತನ ನೀಡಬೇಕು. ಬಿಸಿಯೂಟ ನೌಕರರನ್ನ ಶಿಕ್ಷಣ ಇಲಾಖೆಯ ಅಡಿಯಲ್ಲಿ ಖಾಯಂ ಮಾಡಬೇಕು. ಮಕ್ಕಳ ಹಾಜರಾತಿ ಆಧಾರದ ಮೇಲೆ ಬಿಸಿ ಅಡುಗೆ ಕೆಲಸದವರನ್ನು ಕೆಲಸದಿಂದ ಕೈ ಬೀಡಬಾರದು.
   ಬಿಸಿಯೂಟ ನೌಕರರನ್ನ ನೇರವಾಗಿ ಶಿಕ್ಷಣ ಇಲಾಖೆಯಡಿಯಲ್ಲಿಯೇ ಮೇಲ್ವಿಚಾರಣೆ ನಡೆಸಬೇಕು. ಬಿಸಿಯೂಟ ಯೋಜನೆಯನ್ನ 12ನೇ ತರಗತಿವರೆಗೆ ವಿಸ್ತರಣೆ ಮಾಡಬೇಕು. ಪ್ರತಿ ಶಾಲೆಯಲ್ಲಿ ಕನಿಷ್ಠ 2 ಅಡುಗೆಯವರು ಇರಲೇಬೇಕು. ವಿಶೇಷ ಸಂದರ್ಭದಲ್ಲಿನ ಕೆಲಸಕ್ಕೆ ವಿಶೇಷ ಭತ್ಯ ನೀಡಬೇಕು.  ಸುರಕ್ಷಾ ಭತ್ಯ ಹಾಗೂ ಸ್ವಚ್ಛತಾ ಭತ್ಯ ಒದಗಿಸಬೇಕು. ಅಡುಗೆಯ ಸಂಪೂರ್ಣ ಜವಾಬ್ದಾರಿಯನ್ನ ಶಿಕ್ಷಕರಿಗೆ ಬಿಡಿಸಿ ಕಾರ್ಯಕರ್ತೆಯರಿಗೆ ನೀಡಬೇಕು. ಹೆರಿಗೆ ರಜಾ ಹೆರಿಗೆ ಭತ್ಯೆ ನಿಡಬೇಕು. ಸಾಮಾಜಿಕ ಭದ್ರತೆಗಾಗಿ ರಾಷ್ಟ್ರೀಯ ಭೀಮಾಯೋಜನೆ ಜಾರಿ ಮಾಡಬೇಕು. ಎಲ್ಲ ಬಿಸಿಯೂಟ ಕಾರ್ಯಕರ್ತೆಯರಿಗೆ ಬಿ.ಪಿ.ಎಲ್ ಕಾರ್ಡ್ ನೀಡಬೇಕು ಎಂದು ಒತ್ತಾಯಿಸಿದರು. 
     ಎಸ್‍ಡಿಎಂಸಿ ಅಧ್ಯಕ್ಷರು ಉಪಾಧ್ಯಕ್ಷರು 5 ವರ್ಷಕ್ಕೊಮ್ಮೆ ಬದಲಾಗುತ್ತಾರೆ. ಬದಲಾದ ನಂತರ ಅವರಿಗೆ ಬೇಕಾದವರನ್ನು ಅವರು ನೇಮಿಸಿಕೊಳ್ಳುತ್ತಾರೆ. ನಾವು ಉತ್ತಮವಾಗಿ ಅಡುಗೆ ಮಾಡಿದರೂ ಊಟ ಚೆನ್ನಾಗಿಲ್ಲ ಎಂದು ಹೇಳಿ ದಬ್ಬಾಳಿಕೆ ಮಾಡುತ್ತಾರೆ. ಹೊಸಬರನ್ನು ನೇಮಕ ಮಾಡಿಕೊಳ್ಳುತ್ತಾರೆ. ನಮಗೆ ಪಿಂಚಣಿ ಸಿಗುತ್ತಿಲ್ಲ. ಈಗ ಹೊಸದಾಗಿ ಸೇರಿಕೊಂಡವರಿಗೆ ಪಿಂಚಣಿ ನೀಡುತ್ತಾರೆ. ಪ್ರಾರಂಭದಲ್ಲಿ ನಮ್ಮನ್ನು ಕೆಲಸಕ್ಕೆ ಸೇರಿಸಿಕೊಳ್ಳುವಾಗ ವಯಸ್ಸಿನ ಮಿತಿ ಇರಲಿಲ್ಲ. ಆದರೆ ಈಗ 40 ವರ್ಷದೊಳಗಿನವರನ್ನು ಸೇರಿಸಿಕೊಂಡು ಅವರಿಗೆ ಪಿಂಚಣಿ ನೀಡುತ್ತಿದ್ದಾರೆ ಇದು ಎಷ್ಟರ ಮಟ್ಟಿಗೆ ನ್ಯಾಯ ಎಂದು ಪ್ರಶ್ನಿಸಿದರು.
    ಜಮಖಂಡಿಯಿಂದ ಸುಮಾರು 800 ಜನ ಸೇರಿದ್ದೇವೆ. 2001ರಿಂದ ಕೇವಲ 600 ರೂಪಾಯಿ ವೇತನ ನೀಡಲಾಗುತ್ತಿತ್ತು. ನಂತರ 2000 ಹೆಚ್ಚುವರಿ ಮಾಡಿ 2600 ನೀಡ್ತಾ ಇದ್ದಾರೆ. ಈ ಕೆಲಸ ಮಾಡುವವರು ವಿಧವೆಯರು, ಬಡವರು, ನಿರ್ಗತಿಕರು, ಆರ್ಥಿಕ ದುರ್ಬಲರು ಇದ್ದೇವೆ. ಕೇಂದ್ರ ಸರ್ಕಾರವು 600 ರೂ. ಹಾಗೂ ರಾಜ್ಯ ಸರ್ಕಾರವು 2000 ನೀಡುತ್ತಿದೆ. ಕನಿಷ್ಠ ವೇತನೆ 240 ರೂ.ಗಳನ್ನು ನೀಡಿದರೆ ಸಾಕು. ನಾವೆಲ್ಲರೂ ಕಡಿಮೆ ಶಿಕ್ಷಣ ಪಡೆದಿದ್ದೇವೆ. ನಮಗೆ ಬಿಸಿಯೂಟ ಮಾಡುವುದು ಬಿಟ್ಟು ಬೇರೆ ಏನು ಗೊತ್ತಿಲ್ಲ. 
ಸುರೇಖ, ಪ್ರಧಾನ ಕಾರ್ಯದರ್ಶಿ
 
ಬೆಂಗಳೂರಿನಲ್ಲಿ ರಾಜ್ಯ ಮುಖಂಡರಾದ ವರಲಕ್ಷ್ಮೀ ಅವರನ್ನು ಬಂಧಿಸಿಡಲಾಗಿದೆ. ತಿಪಟೂರಿನಿಂದ ಪ್ರತಿಭಟನೆಗೆ ಹೊರಟ 30ಜನರನ್ನು ಬಂಧಿಸಿದ್ದಾರೆ. ಕುಣಿಗಲ್‍ನಿಂದ ಹೊರಟ 10 ಟ್ರಕ್‍ಗಳನ್ನು ತಡೆಹಿಡಿದಿದ್ದಾರೆ. ಪಾವಗಡದ ತಾಲ್ಲೂಕು ಮುಖ್ಯಸ್ಥೆ ಕೆಂಚಮ್ಮ ಅವರನ್ನು ಪೊಲೀಸ್ ಠಾಣೆಯಲ್ಲಿ ಕೂರಿಸಲಾಗಿದೆ. ಬೇರೆ ಜಿಲ್ಲೆಗಳಿಂದ ಬಂದಂತಹ ಅನೇಕ ನೌಕರರನ್ನು ತುಮಕೂರಿನ ಸಿದ್ದಗಂಗಾ ಮಠದಲ್ಲಿ ತಡೆಹಿಡಿದಿದ್ದಾರೆ.
 ಸೈಯದ್ ಮುಜೀಬ್, ಸಿಐಟಿಯು ಮುಖಂಡರು
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link