ಹುಳಿಯಾರು
ಹುಳಿಯಾರು ಹೋಬಳಿಯ ಯಳನಾಡು ಗ್ರಾಪಂ ವ್ಯಾಪ್ತಿಯ ಕಟ್ಟಳ್ಳ ಗೊಲ್ಲರಹಟ್ಟಿಯ ಬಳಿ ನಿಂಗಪ್ಪ ಎನ್ನುವವರ ಜಮೀನಿನಲ್ಲಿ ಹಾದು ಹೋಗಿರುವ ನಿರಂತರ ಜ್ಯೋತಿ ವಿದ್ಯುತ್ ತಂತಿ ಬದಲಿಗೆ ಎರಿಯಲ್ ಬಂಚ್ಡ್ ಕೇಬಲ್ ಅಳವಡಿಸುವಂತೆ ಮನವಿ ಮಾಡಲಾಗಿದೆ.
ತಮ್ಮಡಿಹಳ್ಳಿ ಗೊಲ್ಲರಹಟ್ಟಿಯಿಂದ ಕಟ್ಟಳ್ಳ ಗೊಲ್ಲರಹಟ್ಟಿಗೆ ನಿರಂತರ ಜ್ಯೋತಿ ವಿದ್ಯುತ್ ಸರಬರಾಜು ಮಾಡುವ ಸಲುವಾಗಿ ನಿಂಗಪ್ಪ ಅವರ ಜಮೀನಿನಲ್ಲಿ 1 ವರ್ಷಗಳ ಹಿಂದೆ ವಿದ್ಯುತ್ ಕಂಬಗಳನ್ನು ನೆಡಲಾಗಿತ್ತು. ಆ ಸಂದರ್ಭದಲ್ಲಿ ತೆಂಗಿನ ಸಸಿಗಳಿಗೆ ತೊಂದರೆ ಯಾಗುತ್ತದೆಂದು ವಿರೋಧ ಮಾಡಿದಾಗ ವಿದ್ಯುತ್ ತಂತಿಗಳನ್ನು ಅಳವಡಿಸದೆ ಕೇಬಲ್ ಅಳವಡಿಸುವುದಾಗಿ ಹೇಳಿ ಕಾಮಗಾರಿ ಪೂರೈಸಿದರು.
ಆದರೆ ವಿದ್ಯುತ್ ಲೈನ್ ಎಳೆಯುವಾಗ ಮಾತು ತಪ್ಪಿನ ಬೆಸ್ಕಾಂನವರು ಕೇಬಲ್ ಬದಲಿಗೆ ವಿದ್ಯುತ್ ತಂತಿಗಳನ್ನು ಎಳೆದರು. ಈಗ ಈ ತಂತಿಗಳ ಮೂಲಕ 11 ಸಾವಿರ ವೋಲ್ಟೇಜ್ ವಿದ್ಯುತ್ ಹರಿಯುತ್ತಿದ್ದು ಇದರ ಶಾಖಕ್ಕೆ ನಿಂಗಪ್ಪ ಅವರ ಸುಮಾರು 25 ತೆಂಗಿನ ಗಿಡಗಳ ಗರಿಗಳು ಶಾರ್ಟ್ ಆಗಿ ಆಗಾಗ ಸುಡುತ್ತಿವೆ.
ಈ ವಿದ್ಯುತ್ ಶಾರ್ಟ್ನಿಂದ ತೆಂಗಿನ ಗಿಡಗಳ ಬೆಳವಣಿಗೆ ಕುಂಠಿತವಾಗಿದೆಯಲ್ಲದೆ ಆಗಾಗ ವಿದ್ಯುತ್ ಶಾರ್ಟ್ ಆಗುತ್ತಿರುವುದರಿಂದ ಈ ಭಾಗದಲ್ಲಿ ಓಡಾಡಲು ಜನ ಹೆದರುವಂತ್ತಾಗಿದೆ. ಅಲ್ಲದೆ ಅಂಗೈಯಲ್ಲಿ ಜೀವ ಹಿಡಿದುಕೊಂಡು ಈ ಭಾಗದಲ್ಲಿ ಕೃಷಿ ಕೆಲಸಗಳನ್ನು ಮಾಡಬೇಕಿದೆ. ಹಾಗಾಗಿ ವಿದ್ಯುತ್ ತಂತಿ ತೆಗೆದು ಕೇಬಲ್ ಅಳವಡಿಸುವಂತೆ ಅನೇಕ ಬಾರಿ ಲಿಖಿತವಾಗಿ ಬೆಸ್ಕಾಂಗೆ ದೂರು ನೀಡಿದ್ದರೂ ಸ್ಪಂಧಿಸದೆ ನಿರ್ಲಕ್ಷ್ಯಿಸಿದ್ದಾರೆ.
ಇನ್ನಾದರೂ ಮೇಲಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಈ ಕಂಬಗಳಿಗೆ ಏರಿಯಲ್ ಬಂಚ್ಡ್ ಕೇಬಲ್ ಅಳವಡಿಸಿ ಶಾರ್ಟ್ ಆಗುವುದನ್ನು ತಪ್ಪಿಸಿ ಬರಗಾಲದಲ್ಲೂ ಕಷ್ಟಪಟ್ಟು ಕೃಷಿ ಮಾಡುತ್ತಿರುವ ರೈತನಿಗೆ ನೆರವಾಗುವಂತೆ ಮನವಿ ಮಾಡಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ