ಹುಳಿಯಾರು
ಸಾರ್ವಜನಿಕರು ತಮ್ಮ ಕುಂದು ಕೊರತೆಯ ಬಗ್ಗೆ ದೂರು ನೀಡುವ ಸಲುವಾಗಿ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಏರ್ಪಡಿಸಿದ್ದ ಸಭೆಯಲ್ಲಿ ಉಪತಹಸೀಲ್ದಾರ್ ದೂರು ನೀಡುವ ಮೂಲಕ ಅಚ್ಚರಿ ಮೂಡಿಸಿದರು.ಹುಳಿಯಾರು ನಾಡಕಛೇರಿಯ ಉಪತಹಸೀಲ್ದಾರ್ ಮಲ್ಲಿಕಾರ್ಜುನಯ್ಯ ಅವರು ಕರ್ತವ್ಯವೇ ಕೈಲಾಸ ಎಂದು ನಿಷ್ಟೆ ಮತ್ತು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಿರುವ ನನ್ನ ಮೇಲೆ ಕೆಲವರು ಮೇಲಧಿಕಾರಿಗಳಿಗೆ ದೂರು ನೀಡಿ ಕಿರುಕುಳ ಕೊಡುತ್ತಾರೆ. ದೂರವಾಣಿಯಲ್ಲಿ ಕರೆ ಮಾಡಿ ದುಡ್ಡಿಗೆ ಡಿಮ್ಯಾಂಡ್ ಮಾಡುತ್ತಾರೆ. ಕಪಲೋಕಲ್ಪಿತ ಸುದ್ದಿಗಳನ್ನು ನಂಬಿ ಕಿರುಕುಳ ಕೊಡುತ್ತಾರೆ ಎಂದು ದೂರು ನೀಡಿದರು.
ಇದಕ್ಕೆ ಪ್ರತಿಯಾಗಿ ದೂರು ನೀಡುತ್ತಿರುವವರಾರು, ದುಡ್ಡು ಕೇಳುತ್ತಿರುವ ಬಗ್ಗೆ ರೆಕಾರ್ಡ್ ಮಾಡಿಕೊಂಡಿದ್ದರೆ ಕೊಡಿ, ಕಿರುಕುಳ ನೀಡುತ್ತಿರುವ ಬಗ್ಗೆ ಸಾಕ್ಷ್ಯಾಧಾರ ಇದ್ದರೆ ಹೇಳಿ ಎಂದು ದಾಖಲೆ ಕೇಳಿದರು. ನನಗೆ ಪೋನ್ ರೆಕಾರ್ಡ್ ಮಾಡಿಕೊಳ್ಳಲು ಬರೋದಿಲ್ಲ ಸಾರ್. ರಾಮಚಂದ್ರ ಎನ್ನುವವರು ಹಿಂದೆ ನಿಂತು ಬೇರೆಯವರಿಂದ ದೂರು ಕೊಡಿಸುತ್ತಿದ್ದಾರೆ ಎಂದರು.
ಉಪತಹಸೀಲ್ದಾರ್ ಅವರ ಪರವಾಗಿ ಅಲ್ಲೇ ಇದ್ದ ಯಳನಾಡು ಗ್ರಾಪಂ ಸದಸ್ಯ ಜೆಸಿಬಿ ದಯಾನಂದ್ ಸೇರಿದಂತೆ ಅನೇಕರು ಮಾತನಾಡಿ ಈ ವ್ಯಕ್ತಿ ಎಲ್ಲಾ ಅಧಿಕಾರಿಗಳಿಗೂ ಕಿರುಕುಳ ಕೊಡುತ್ತಿದ್ದಾರೆ. ಯಳನಾಡು ಗ್ರಾಪಂ ಅಧಿಕಾರಿಗಳ ಮೇಲೂ ದೂರು ನೀಡಿದ್ದಾರೆ. ಫಲಾನುಭವಿಗಳ ಆಯ್ಕೆ ಮಾಡಿ ಯೋಜನೆ ಅನುಷ್ಠಾನಗೊಳಿಸಲಾಗದಂತೆ ಹಿಂದಿ ಬೀಳುತ್ತಾರೆ ಎಂದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ತೇಜಸ್ವಿನಿ ಅವರು ಮಧ್ಯಪ್ರವೇಶಿಸಿ. ಈ ಬಗ್ಗೆ ಒಂದು ದಿನವೂ ನನಗೆ ಹೇಳಿಲ್ಲವಲ್ಲ. ನಮ್ಮ ಕೆಳಗಿನ ಅಧಿಕಾರಿಗಳ ರಕ್ಷಣೆ ನಮ್ಮ ಜವಾಬ್ದಾರಿ. ಹಾಗಾಗಿ ಇನ್ನು ಮುಂದೆ ಪೋನ್ ಮಾಡಿ ದುಡ್ಡು ಕೇಳಿದರೆ, ಅನಗತ್ಯ ದೂರು ನೀಡಿದರೆ ನನ್ನ ಗಮನಕ್ಕೆ ತನ್ನಿ. ಆ ವ್ಯಕ್ತಿಯ ಮೇಲೆ ನಾನೇ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ