ಹೊಸಪೇಟೆ :
ನಮ್ಮ ದೇಶದ ಸಂವಿಧಾನ ಅಪಾಯದಲ್ಲಿದೆ. ಹೊಸ ಸಂವಿಧಾನ ಬರೆಯಲು ಸಿದ್ಧತೆ ನಡೆಯುತ್ತಿದೆ ಎಂದು ಸಾರ್ವಜನಿಕ ನೀತಿ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ಪ್ರೊ. ಬಾಬು ಮ್ಯಾಥೀವ್ ಕಳವಳ ವ್ಯಕ್ತಪಡಿಸಿದರು.
ಇಲ್ಲಿನ ಮಂಟಪ ಸಭಾಂಗಣದಲ್ಲಿ ಕನ್ನಡ ವಿಶ್ವವಿದ್ಯಾಲಯ, ಹಂಪಿ ಹಾಗೂ ಕರ್ನಾಟಕ ಸಮಾಜಶಾಸ್ತ್ರ ಸಂಘದ ಸಹಯೋಗದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ 12ನೇ ರಾಷ್ಟ್ರೀಯ ಸಮಾಜಶಾಸ್ತ್ರ ಸಮ್ಮೇಳನದ ಮುಖ್ಯ ವಿಷಯವಾದ ಸಾಮಾಜಿಕ ಸ್ಥಿತ್ಯಂತರ: ಸವಾಲು ಮತ್ತು ಸಾಧ್ಯತೆಗಳು ಅನ್ಮ್ನವ ವಿಷಯದ ಕುರಿತು ಮಾತನಾಡಿದರು.
ನಮ್ಮ ದೇಶದ ಸಂವಿಧಾನದಲ್ಲಿ ದಲಿತರು, ಬುಡಕಟ್ಟು, ಹಿಂದುಳಿದ ವರ್ಗ, ಅಲ್ಪಸಂಖ್ಯಾತರಿಗೆ ವಿಶೇಷ ಸ್ಥಾನಮಾನಗಳಿವೆ. ಪ್ರಪಂಚದಲ್ಲಿ ಎಲ್ಲೂ ಈ ವ್ಯವಸ್ಥೆ ಇಲ್ಲ. ಅಂಬೇಡ್ಕರ್ ಇಲ್ಲದಿದ್ದರೆ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವಗಳು ನಮ್ಮ ಸಂವಿಧಾನದಲ್ಲಿ ಇರುತ್ತಿರಲಿಲ್ಲ. ಈ 3 ಸಂಗತಿಗಳು ಸಂವಿಧಾನದ ಶಕ್ತಿಯಾಗಿವೆ. ಮೂಲಭೂತ ಬದಲಾವಣೆ ತರುವ ಸಾಮಥ್ರ್ಯ ಇರುವ ಸಂವಿಧಾನಗಳು ಎಂದರೆ ದಕ್ಷಿಣ ಆಫ್ರಿಕಾ, ಬ್ರೆಜಿಲ್ ಹಾಗೂ ಭಾರತದ ಸಂವಿಧಾನಗಳು. ಭಾರತದಲ್ಲಿ 100 ವರ್ಷ ಸ್ವಾತಂತ್ರಕ್ಕಾಗಿ ದೀರ್ಘಕಾಲ ಹೋರಾಟ ನಡೆಸಲಾಗಿದೆ.
ನೇಪಾಳವು ತನ್ನ ಸಂವಿಧಾನಕ್ಕೆ ದಕ್ಷಿಣ ಆಫ್ರಿಕಾ, ಭಾರತದ ಸಂವಿಧಾನಗಳಿಂದ ಹಲವು ಸಂಗತಿಗಳನ್ನು ಬಳಸಿಕೊಂಡಿದೆ. ಇಂದು ಭಾರತದಲ್ಲಿ ಸಣ್ಣ ಉದ್ದಿಮೆಗಳು, ಮಧ್ಯಮ ಪ್ರಮಾಣದ ಉದ್ದಿಮೆಗಳು ಮುಚ್ಚಿ ಹೋಗಿವೆ. ಸಾರ್ವಜನಿಕ ಉದ್ದಿಮೆಗಳಲ್ಲಿ ಸಂವಿಧಾನ ಬದ್ಧವಾದ ಉದ್ಯೋಗ ಸೃಷ್ಟಿಸಲು ಅವಕಾಶಗಳಿದ್ದರೂ ಎಂದೂ ಇಲ್ಲದ ರೀತಿಯಲ್ಲಿ ಅಸಮಾನತೆ, ನಿರುದ್ಯೋಗ ಬೆಳೆದು ಬಂದಿದೆ. ಶ್ರೀಮಂತರೇ ಬೆಳೆಯುತ್ತಿದ್ದಾರೆ ಎಂದು ತಿಳಿಸಿದರು.
ಇಂದು ಬಹಳ ದೊಡ್ಡ ಮಟ್ಟದಲ್ಲಿ ನ್ಯಾಯಾಂಗ ವ್ಯವಸ್ಥೆಗೆ ಅಪಾಯ ಬಂದಿದೆ. ಪ್ರಜಾಪ್ರಭುತ್ವಕ್ಕೆ ಅಪಾಯ ಬಂದಿದೆ ಎಂದು ಸ್ವತಃ ನ್ಯಾಯಾಂಗವೇ ಹೇಳುತ್ತಿದೆ. ನ್ಯಾಯಾಂಗಕ್ಕೆ ವಿಪತ್ತು ಬಂದರೆ ಪ್ರಜಾಪ್ರಭುತ್ವ ಉಳಿಯುತ್ತದೆಯೇ? ಕೊಲ್ಲುವ ವಿಧಾನದಿಂದ ಭಾರತ ಕಟ್ಟಲು ಸಾಧ್ಯವೇ ಎಂದು ಪ್ರಶ್ನಿಸುತ್ತ, ಇಂತಹ ಸಂದರ್ಭದಲ್ಲಿ ಸಮಾಜಶಾಸ್ತ್ರ ಸಮ್ಮೇಳನದ ವಿಷಯ ಬಹಳ ಪ್ರಸ್ತುತವಾಗಿದೆ ಎಂದು ಬಾಬು ಮ್ಯಾಥೀವ್ ಅವರು ನುಡಿದರು.
ನವದೆಹಲಿ ಭಾರತೀಯ ಸಮಾಜಶಾಸ್ತ್ರ ಸಂಘದ ಅಧ್ಯಕ್ಷೆ ಪ್ರೊ.ಆರ್.ಇಂದಿರಾ ಮಾತನಾಡಿ, ಜ್ಞಾನ ಅರ್ಥಪೂರ್ಣವಾಗುವುದು ಜನರಿಗೆ ತಲುಪಿದಾಗ ಮಾತ್ರ. ಅಧ್ಯಯನ ಅಂತರಶಿಸ್ತಿನ ಅಂತಃಸ್ಸತ್ವ ಹಾಗೂ ಕೃತಿಯ ಮೂಲ ಆಶಯಕ್ಕೆ ಧಕ್ಕೆ ಆಗದಂತೆ ಮಾಡುವ ಭಾಷಾಂತರ ಕ್ರಿಯೆ ಜವಾಬ್ದಾರಿಯುತ ಕೆಲಸವಾಗಿದೆ. ಸುಲಭ ಗ್ರಾಹ್ಯವಾದ ಅರ್ಥವಾಗುವ ಭಾಷೆಯಲ್ಲಿರುವ ಬೇರೆ ಬೇರೆ ಭಾಷೆಯಲ್ಲಿ ಸೃಷ್ಟಿಯಾದ ಜ್ಞಾನವನ್ನು ಕನ್ನಡ ಭಾಷೆಗೆ ತರುವ ಅಗತ್ಯ ತುರ್ತಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ವಿಶ್ರಾಂತ ಕುಲಪತಿ ಡಾ. ಮಲ್ಲಿಕಾ ಎಸ್. ಘಂಟಿ ಅವರು ಮಾತನಾಡಿ, ಕನ್ನಡ ವಿಶ್ವವಿದ್ಯಾಲಯದಲ್ಲಿ ಹೊಸ ಹೊಸ ವಿಚಾರಧಾರೆಗಳು ಹರಿಯಲಿ ಎಂಬ ಉದ್ದೇಶದಿಂದ ಸಮ್ಮೇಳನವನ್ನು ಹಮ್ಮಿಕೊಂಡಿದೆ. ನಮ್ಮ ಸಮಾಜದ ಸ್ಥಿತ್ಯಂತರಗಳಿಗೆ ಸಾಮಾಜಿಕ ಆರ್ಥಿಕ, ರಾಜಕೀಯ ಕಾರಣಗಳು ಮಾತ್ರವಲ್ಲದೆ ಸಾಂಸ್ಕøತಿಕ ಸಂಗತಿಗಳು ಕಾರಣಗಳಾಗಿವೆ. ಆದರೆ ನಾವು ಸಾಂಸ್ಕೃತಿಕ ಸಂಗತಿಗಳು ಕಾಲಕಾಲಕ್ಕೆ ತಂದೊಡ್ಡುವ ಅಪಾಯಗಳನ್ನು ಮೇಲ್ಮುಖವಾಗಿ ನೋಡುತ್ತವೆಯೇ ಹೊರತು ತಲಸ್ಪರ್ಷಿಯಾಗಿ ಗಮನಿಸುವುದಿಲ್ಲ.
ಜಾತಿಗಳಿಂದ ಹುಟ್ಟಿದ ಸಮಾಜವನ್ನು ಮುರಿದು ಹೇಗೆ ಕಟ್ಟಬೇಕೆಂದು ಚಿಂತಿಸಬೇಕಾಗಿದೆ. ಸಾಮಾಜಿಕ ವೈವಿಧ್ಯತೆಗಳು ಸಮಾಜಶಾಸ್ತ್ರದ ವ್ಯಾಖ್ಯಾನಗಳಿಗೆ ನಿಲುಕುತ್ತಿಲ್ಲ. ಬಹುಸಮುದಾಯಗಳು ನ್ಯಾಯಾಂಗಕ್ಕೆ ಪ್ರವೇಶ ಪಡೆದರೆ ಆಯಾ ಸಮುದಾಯಗಳು ಪ್ರಗತಿ ಹೊಂದಲು ಸಾಧ್ಯವಾಗುತ್ತದೆ ಎಂದರು.
ವೇದಿಕೆಯಲ್ಲಿ ಕರ್ನಾಟಕ ಸಮಾಜಶಾಸ್ತ್ರ ಸಂಘದ ಕಾರ್ಯದರ್ಶಿಗಳಾದ ಡಾ. ಜಿ.ಡಿ.ನಾರಾಯಣ ಉಪಸ್ಥಿತರಿದ್ದರು. ಕನ್ನಡ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ಪಿ.ಮಹಾದೇವಯ್ಯ ಸ್ವಾಗತಿಸಿದರು. ಸಮ್ಮೇಳನದ ಸಂಘಟನಾ ಕಾರ್ಯದರ್ಶಿಗಳಾದ ಡಾ.ಎಚ್.ಡಿ. ಪ್ರಶಾಂತ್ ಮತ್ತು ಡಾ.ಕೆ.ಎಂ.ಮೇತ್ರಿ ಪ್ರಾಸ್ತಾವಿಕ ನುಡಿದು, ವಂದನಾರ್ಪಣೆ ಮಾಡಿದರು. ಡಾ.ಯರ್ರಿಸ್ವಾಮಿ ನಿರೂಪಿಸಿದರು. ಸಂಗೀತ ಮತ್ತು ನೃತ್ಯ ವಿಭಾಗದವರು ಪ್ರಾರ್ಥಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
