ಚಿತ್ರದುರ್ಗ:
ಹಸಿರು ಕ್ರಾಂತಿಯ ಮೂಲಕ ಆಹಾರ ಭದ್ರತೆ ಒದಗಿಸಿದ್ದು ಸೇರಿದಂತೆ ದೇಶಕ್ಕೆ ಅನೇಕ ಕೊಡುಗೆಗಳನ್ನು ನೀಡಿದ ಬಾಬು ಜಗಜೀವನರಾಂ ಅವರಂತಹ ಮಹನೀಯರನ್ನು ಎಲ್ಲರೂ ನೆನಪಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಹೇಳಿದರು
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ನೀತಿ ಸಂಹಿತೆ ಕಾರಣ ಸರಳವಾಗಿ ಆಯೋಜಿಸಿದ್ದ ಡಾ. ಬಾಬು ಜಗಜೀವನ್ರಾಂ ರವರ 112ನೇ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಜಗಜೀವನರಾಂ ಅವರ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಭಾರತದ ಸ್ವಾತಂತ್ರಕ್ಕಾಗಿ ಮಹಾತ್ಮ ಗಾಂಧೀಜಿ ಸೇರಿದಂತೆ ಅಸಂಖ್ಯಾತ ಮಹನೀಯರು ಸಾಕಷ್ಟು ಹೋರಾಟಗಳನ್ನು ಮಾಡಿದ್ದಾರೆ, ಅವರಂತೆಯೆ ಜಗಜೀವನ್ರಾಂ ರವರು ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಬಾಲ್ಯದಿಂದಲೆ ಅಸ್ಪøಶ್ಯತೆ, ಜಾತಿ ವ್ಯವಸ್ಥೆಯನ್ನು ವಿರೋಧಿಸಿದ್ದರು. ದೇಶಕ್ಕೆ ಹಸಿರು ಕ್ರಾಂತಿಯ ಮೂಲಕ ಆಹಾರದ ಕೊರತೆಯನ್ನು ನೀಗಿಸಿದ ಇಂತಹ ಮಹಾನ್ ನಾಯಕರನ್ನು ಸದಾ ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಸಹಾಯಕ ಸಾಂಖ್ಯಿಕ ಅಧಿಕಾರಿ ಕಾವ್ಯಶ್ರೀ ವಿಶೇಷ ಉಪನ್ಯಾಸ ನೀಡಿ, ಸಮಾಜದಲ್ಲಿ ನಡೆಯುವ ಜಾತಿ ವ್ಯವಸ್ಥೆ, ದಲಿತರ ಮೇಲೆ ದಬ್ಬಾಳಿಕೆ ಹಾಗೂ ಅಸ್ಪøಶ್ಯತೆಯನ್ನು ಹೋಗಲಾಡಿಸಲು ಡಾ. ಬಾಬು ಜಗಜೀವನ್ರಾಂ ಬಹಳ ಶ್ರಮವಹಿಸಿದ್ದಾರೆ ಎಂದು ಹೇಳಿದರು.
ಬಾಬು ಜಗಜೀವನ್ರಾಂ ಪ್ರಾಥಮಿಕ ಶಿಕ್ಷಣ ಪಡೆಯುವ ಶಾಲೆಯಲ್ಲಿ ಮಡಿಕೆಯಲ್ಲಿ ಕುಡಿಯುವ ನೀರನ್ನು ಸೇವಿಸುವ ವೇಳೆ ದಲಿತ ಎಂಬ ಕಾರಣಕ್ಕಾಗಿ ಅವರು ಕುಡಿದ್ದಿದ ಮಡಿಕೆಯನ್ನು ಮೇಲು ವರ್ಗದವರು ಹೊಡೆದು ಹಾಕಿ, ಮೇಲ್ವರ್ಗ ಮತ್ತು ಕೆಳ ವರ್ಗದವರಿಗೆಂದು ಪ್ರತ್ಯೇಕ ನೀರಿನ ವ್ಯವಸ್ಥೆ ಮಾಡುವ ಮೂಲಕ ಅವರನ್ನು ಅವಮಾನಿಸುತ್ತಾರೆ.
ಈ ಘಟನೆಯಿಂದ ತೀವ್ರ ನೊಂದುಕೊಳ್ಳುವ ಅವರು, ಮುಂದೆ ಉನ್ನತ ಶಿಕ್ಷಣ ಪಡೆಯುವಾಗಲೆ ಜಾತಿ ವ್ಯವಸ್ಥೆ ಮತ್ತು ಅಸ್ಪøಶ್ಯತೆ ವಿರುದ್ದ ಹೋರಾಟ ಮಾಡಿದರು. ದೇಶದಲ್ಲಿ ಆಹಾರದ ಕೊರತೆ ಉಂಟಾದ ಸಂದರ್ಭದಲ್ಲಿ ಕೃಷಿ ಸಚಿವರಾಗಿದ್ದ ಇವರು ಹಸಿರು ಕ್ರಾಂತಿ ಕೈಗೊಳ್ಳುವ ಮೂಲಕ ಆಹಾರ ಕೊರತೆ ನೀಗಿಸುವಲ್ಲಿ ಶ್ರಮಿಸಿದರು. ಹೀಗಾಗಿ ಇವರನ್ನು ಹಸಿರು ಕ್ರಾಂತಿಯ ಹರಿಕಾರ ಎಂದೇ ದೇಶ ಗುರುತಿಸುತ್ತದೆ ಎಂದು ಹೇಳಿದರು.
ಸ್ವತಂತ್ರ ಪೂರ್ವ ಹೋರಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಅಸಹಾಕರ ಚಳುವಳಿ, ಭಾರತ ಬಿಟ್ಟು ತೊಲಗಿ ಹೋರಾಟಗಳಲ್ಲಿ ದೇಶಕ್ಕಾಗಿ ಸೇವೆ ಮಾಡಿ, ಸ್ವತಂತ್ರ ಭಾರತದ ಸಚಿವ ಸಂಪುಟದಲ್ಲಿ ಕೃಷಿ ಸಚಿವರಾಗಿ, ಕಾರ್ಮಿಕ ಸಚಿವರು ಹಾಗೂ ಉಪಪ್ರಧಾನಿಯಾಗಿ ಸೇವೆಯನ್ನು ಸಲ್ಲಿಸಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ. ಸತ್ಯಭಾಮ, ಅಪರ ಜಿಲ್ಲಾಧಿಕಾರಿ ಸಿ.ಸಂಗಪ್ಪ, ಉಪವಿಭಾಗಾಧಿಕಾರಿ ವಿಜಯಕುಮಾರ್, ನಗರಸಭೆ ಪೌರಾಯುಕ್ತೆ ಲಕ್ಷ್ಮೀ ಟಿ, ತಹಶೀಲ್ದಾರ್ ನಹೀದ, ಸಮಾಜ ಕಲ್ಯಾಣಾಧಿಕಾರಿ ನಾಗರಾಜ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಪಾಲಾಕ್ಷ, ಡಿ.ಎಸ್.ಪಿ ವಿಜಯಕುಮಾರ್ ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮ ಅಂಗವಾಗಿ ವಿದ್ಯಾರ್ಥಿಗಳು ತತ್ವಪದಗಳನ್ನು ಪ್ರಸ್ತುತಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
