ದಾವಣಗೆರೆ
ದೇವದಾಸಿ ಮಹಿಳೆಯರಿಗೆ ಸರ್ಕಾರದ ಬಾಯಿ ಮಾತಿನ ಸೌಜನ್ಯಬೇಕಾಗಿಲ್ಲ. ಅನಿಷ್ಟ ದೇವದಾಸಿ ಪದ್ಧತಿಯನ್ನು ಮೂಲೋತ್ಪಾಟನೆ ಮಾಡುವ ನಿಟ್ಟಿನಲ್ಲಿ ಈ ಮಹಿಳೆಯರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಡಬೇಕೆಂದು ಕರ್ನಾಟಕ ರಾಜ್ಯ ದೇವದಾಸಿ ಮಹಿಳಾ ವಿಮೋಚನಾ ಸಂಘದ ರಾಜ್ಯ ಗೌರವಾಧ್ಯಕ್ಷ ಯು.ಬಸವರಾಜ ಆಗ್ರಹಿಸಿದ್ದಾರೆ.
ನಗರದ ರೋಟರಿ ಬಾಲ ಭವನದಲ್ಲಿ ಶನಿವಾರ ಕರ್ನಾಟಕ ರಾಜ್ಯ ದೇವದಾಸಿ ಮಹಿಳಾ ವಿಮೋಚನಾ ಸಂಘದ ಆಶ್ರಯದಲ್ಲಿ ನಡೆದ ದೇವದಾಸಿ ಮಹಿಳೆಯರ ಜಿಲ್ಲಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇವದಾಸಿ ಮಹಿಳೆಯರಿಗೆ ನೆರವು ನೀಡುವ ಕನಿಷ್ಠ ಸೌಜನ್ಯ ಸಹ ಸರ್ಕಾರಗಳಿಗಿಲ್ಲ. ಇವರ ಬಗ್ಗೆ ಸರ್ಕಾರ ಬಾಯಿ ಮಾತಿನ ಸೌಜನ್ಯವನ್ನು ಮಾತ್ರ ಹೊಂದಿದೆ. ಇದನ್ನು ಬಿಟ್ಟು ಸರ್ಕಾರ ಅನಿಷ್ಟ ದೇವದಾಸಿ ಪದ್ಧತಿಯನ್ನು ಮೂಲೋತ್ಪಾಟನೆ ಮಾಡುವ ನಿಟ್ಟಿನಲ್ಲಿ ದೇವದಾಸಿ ಮಹಿಳೆಯರ ಕುಟುಂಬಕ್ಕೆ ತಲಾ ಐದು ಎಕರೆ ಭೂಮಿ ನೀಡುವ ಮೂಲಕ ಸ್ವಾವಲಂಬಿಗಳನ್ನಾಗಿಸುವತ್ತ ಗಮನ ಹರಿಸಬೇಕೆಂದು ಒತ್ತಾಯಿಸಿದರು.
ದೌರ್ಜನ್ಯದ ದೇವದಾಸಿ ಪದ್ಧತಿಗೆ ತುತ್ತಾಗಿರುವ ಹಾಗೂ ಶೋಷಣೆಗೆ ಒಳಗಾಗಿರುವ ಮಹಿಳೆಯರನ್ನು ಸಂಘಟಿಸಿ, ಅವರಿಗೂ ಗೌರವಯುತ ಬದುಕು ಕಟ್ಟಿಕೊಡಬೇಕೆಂಬ ಉದ್ದೇಶದಿಂದ 2007ರಿಂದ ಸಂಘವನ್ನು ಕಟ್ಟಿ, ನಿರಂತರವಾಗಿ ಗಂಭೀರ ಹೋರಾಟ ನಡೆಸಿದರ ಪರಿಣಾಮವಾಗಿ ಇಂದು ಸರ್ಕಾರ 1500 ರೂ. ಮಾಸಾಶನವನ್ನು ನೀಡುತ್ತಿದೆ. ಆದರೆ, ಬೆಲೆ ಏರಿಕೆಯ ಯುಗದಲ್ಲಿ ಅಷ್ಟು ಕಡಿಮೆ ಮೊತ್ತದಲ್ಲಿ ಬದುಕು ನಡೆಸಲು ಸಾಧ್ಯವಿಲ್ಲ. ಆದ್ದರಿಂದ ಈ ಮಾಸಾಶನವನ್ನು 5 ಸಾವಿರ ರೂ.ಗೆ ಹೆಚ್ಚಿಸಬೇಕೆಂದು ಆಗ್ರಹಿಸಿದರು.
ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ಏಳು ದಶಕಗಳು ಕಳೆದರೂ ಸಹ ದೌರ್ಜನ್ಯದ ದೇವದಾಸಿ ಪದ್ಧತಿಯನ್ನು ನಿರ್ಮೂಲನೆ ಮಾಡಲು ಏನೂ ಕ್ರಮ ಕೈಗೊಳ್ಳದ ಸರ್ಕಾರ ಹಾಗೂ ಈ ಪದ್ಧತಿಯನ್ನು ಪೋಷಿಸುತ್ತಿರುವ ಸಮಾಜ ಈಗ ದೇವದಾಸಿ ಆಗಿರುವುದು ನಿಮ್ಮ ಪೂರ್ವಜನ್ಮದ ಪಾಪದ ಫಲ ಎಂಬುದಾಗಿ ದೇವದಾಸಿ ಮಹಿಳೆಯರನ್ನೇ ಅಪರಾಧಿಗಳ ಸ್ಥಾನದಲ್ಲಿ ನಿಲ್ಲಿಸುತ್ತಿರುವುದು ಅತ್ಯಂತ ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮ ಸುಭೀಕ್ಷವಾಗಿ ಇರಬೇಕಾದರೆ, ಗ್ರಾಮ ದೇವತೆಗೆ ದೇವದಾಸಿಯರನ್ನು ಬಿಟ್ಟು, ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗಳಲ್ಲಿ ಈ ದೇವದಾಸಿ ಮಹಿಳೆ ಬೆನ್ನಿಗ್ಗೆ ಹುಕ್ಕು ಹಾಕಿಕೊಂಡು ಸುಮಾರು 20 ಅಡಿ ಎತ್ತರದಲ್ಲಿ ತೂಗಾಡುತ್ತಾ ಸಿಡಿ ರಥದಲ್ಲಿ ಐದು ಸುತ್ತು ಸುತ್ತಬೇಕೆನ್ನುವವರು ಈ ದೇವದಾಸಿ ಪದ್ಧತಿಯ ಉಗಮಕ್ಕೆ ಕಾರಣ ಹೊರತು, ಏನೂ ಪಾಪ ಮಾಡದ ಈ ಮಹಿಳೆಯರಲ್ಲ. ಸಮಾಜ ತನ್ನ ಅಗತ್ಯಕ್ಕಾಗಿ ಹಾಗೂ ಶ್ರೀಮಂತರು ತಮ್ಮ ಲಾಭಕ್ಕಾಗಿ ದೌರ್ಜನ್ಯದ ದೇವದಾಸಿ ಪದ್ಧತಿಯನ್ನು ಇನ್ನೂ ಜೀವಂತವಾಗಿ ಇಟ್ಟಿದ್ದಾರೆಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಸುಮಾರು 1 ಲಕ್ಷ ದೇವದಾಸಿ ಕುಟುಂಬಗಳಿವೆ. ಆದರೆ, ರಾಜ್ಯ ಸರ್ಕಾರ ಕೇವಲ 13 ಜಿಲ್ಲೆಗಳಲ್ಲಿ ಮಾತ್ರ ದೇವದಾಸಿ ಪದ್ಧತಿ ಇದೆ ಎಂಬ ಸುಳ್ಳು ಅಂಕಿ ಅಂಶವನ್ನು ನೀಡುತ್ತಿದೆ. ಕಳೆದ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ದೇವದಾಸಿ ಮಹಿಳೆಯರಿಗೆ ತಲಾ 2 ಎಕರೆ ಭೂಮಿ ನೀಡಲು ನಿರ್ಧರಿಸಿತ್ತು. ಆದರೆ, ರಾಜ್ಯ ಸರ್ಕಾರ ವರ್ಷಕ್ಕೆ ಕೇವಲ 20ರಿಂದ 25 ಎಕರೆ ಭೂಮಿಯನ್ನು ಮಾತ್ರ ನೀಡುತ್ತಿದ್ದು, ಇದು ದೇವದಾಸಿ ಮಹಿಳೆಯರಿಗೆ ಸಿಗುತ್ತಿಲ್ಲ. ಬದಲಿಗೆ ಶಾಸಕರ ಚೇಲಾಗಳಾಗಿರುವ ಕೆಲ ದಲಿತ ಮುಖಂಡರಿಗೆ ಮಾತ್ರ ಸಿಗುತ್ತಿದೆ ಎಂದು ಆರೋಪಿಸಿದರು.
ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವಂತೂ ದೇವದಾಸಿ ಪದ್ಧತಿಯ ನಿರ್ಮೂಲನೆಗಾಗಿ ನಯಾ ಪೈಸೆ ಅನುದಾನ ನೀಡುತ್ತಿಲ್ಲ. ದೇಶದಲ್ಲಿ ಶೇ.27 ರಷ್ಟು ಜನಸಂಖ್ಯೆಯನ್ನು ದಲಿತರು ಹೊಂದಿದ್ದು, ಜನಸಂಖ್ಯೆಗೆ ಅನುಗುಣವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಅನುದಾನ ಮೀಸಲಿಟ್ಟರೇ ವರ್ಷಕ್ಕೆ ಐದೂವರೆ ಸಾವಿರ ಲಕ್ಷ ಕೋಟಿ ಅನುದಾನ ದೊರೆತು, ಎಲ್ಲರ ಅಭಿವೃದ್ಧಿಯೂ ಆಗಲಿದೆ. ಆದರೆ, ಸರ್ಕಾರಗಳು ಮಾತ್ರ ಒಂದಿಷ್ಟು ಅನುದಾನ ನೀಡಿ ಕೈ ತೊಳೆದುಕೊಳ್ಳುತ್ತಿವೆ ಎಂದು ಆರೋಪಿಸಿದರು.
ದೇವದಾಸಿ ಮಹಿಳೆಯರ ಮಕ್ಕಳ ಮದುವೆ ಅಂತೂ ಒಂದು ಗಂಭೀರ ಸಮಸ್ಯೆಯಾಗಿದ್ದು, ಸಾಂಸ್ಕತಿಕ ಬಿಕಟ್ಟಾಗಿ ಪರಿಣಮಿಸಿದೆ. ಆದ್ದರಿಂದ ಸರ್ಕಾರವು ದೇವದಾಸಿ ಮಹಿಳೆಯ ಮಕ್ಕಳಿಗೆ 5 ಲಕ್ಷ ರೂ. ಪ್ರೋತ್ಸಾಹಧನ ನೀಡಬೇಕು. ದೇವದಾಸಿ ಮಹಿಳೆಯರ ಮಾಸಾಶನವನ್ನು ಐದು ಸಾವಿರ ರೂ.ಗೆ ವಿಸ್ತರಿಸಬೇಕು. ಪ್ರಸ್ತುತ ಕಾಯ್ದೆಯ ಪ್ರಕಾರ ದೇವದಾಸಿಯರೇ ಅಪರಾಧಿಗಳ ಸ್ಥಾನದಲ್ಲಿದ್ದು, ಜೈಲಿಗೆ ಹೋಗುವ ಪರಿಸ್ಥಿತಿ ಇದೆ. ಆದ್ದರಿಂದ ಈ ಕಾಯ್ದೆಗೆ ತಿದ್ದು ಪಡಿ ತಂದು, ದೇವದಾಸಿ ಮಹಿಳೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ, ಮಕ್ಕಳ ಹುಟ್ಟಿಗೆ ಕಾರಣವಾಗಿರುವವರನ್ನು ತಂದೆ ಎಂಬುದಾಗಿ ಪರಿಗಣಿಸಿ, ಮಕ್ಕಳಿಗೆ ಭವಿಷ್ಯ ಕಟ್ಟಿಕೊಡದಿದ್ದರೆ, ಜೈಲಿಗೆ ಅಟ್ಟುವ ಕಾನೂನು ಜಾರಿಗೆ ತರಬೇಕೆಂದು ಆಗ್ರಹಿಸಿದರು.
ಸರ್ಕಾರದಿಂದ ತಮ್ಮ ಹಕ್ಕುಗಳನ್ನು ಪಡೆದುವ ಮೂಲಕ ದೇವದಾಸಿ ಮಹಿಳೆಯರು ಸ್ವಾವಲಂಬಿಯಾಗಿ ಜೀವನ ನಡೆಸಬೇಕಾದರೆ, ಸಂಘಟಿತ ಹೋರಾಟ ನಡೆಸುವ ಅವಶ್ಯಕತೆ ಇದ್ದು, ನಿಮ್ಮ ಮಕ್ಕಳು, ಕುಟುಂಬಸ್ಥರನ್ನು ಸಹ ಹೋರಾಟದಲ್ಲಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.
ಪ್ರಾಸ್ತಾವಿಕ ಮಾತನಾಡಿದ ಸಂಘದ ರಾಜ್ಯ ಕಾರ್ಯದರ್ಶಿ ಟಿ.ವಿ.ರೇಣುಕಮ್ಮ, ಹಿಂದೆ ಸಮಾಜ ದೇವದಾಸಿ ಮಹಿಳೆಯರನ್ನು ನಿಕೃಷ್ಟವಾಗಿ ನೋಡುತ್ತಿತ್ತು. ಆದರೆ, ನಮ್ಮ ಸಂಘದ ನಿರಂತರ ಹೋರಾಟದ ಫಲವಾಗಿ ಸಮಾಜ ನಮ್ಮನ್ನು ನೋಡುವ ದೃಷ್ಟಿಕೋನವು ಬದಲಾಗಿದೆ ಹಾಗೂ ಗೌರವವು ದಕ್ಕಿದೆ ಎಂದರು.
ಅಧ್ಯಕ್ಷತೆಯನ್ನು ಸಂಘದ ಜಿಲ್ಲಾ ಗೌರವಾಧ್ಯಕ್ಷ ಕೆ.ಎಲ್.ಭಟ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಬಿಎಸ್ಎನ್ಎಲ್ ನೌಕರರ ಒಕ್ಕೂಟದ ಈರಣ್ಣ, ಕರ್ನಾಟಕ ರಾಜ್ಯ ದೇವದಾಸಿ ಮಹಿಳಾ ವಿಮೋಚನಾ ಸಂಘದ ಕೆಂಚಮ್ಮ, ಚನ್ನಮ್ಮ ಉಪಸ್ಥಿತರಿದ್ದರು. ಕೆಪಿಆರ್ಎಸ್ನ ಇ.ಶ್ರೀನಿವಾಸ್ ಸ್ವಾಗತಿಸಿದರು. ದಲಿತ ಹಕ್ಕುಗಳ ಸಮಿತಿಯ ಭರಮಪ್ಪ ನಿರೂಪಿಸಿದರು. ನಂದೀಶ್ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
