ಬೆಂಗಳೂರು
ರಾಜಕೀಯ ಜೀವನದುದ್ದಕ್ಕೂ ನಾನು ಜಾತ್ಯಾತೀತ ತತ್ವಕ್ಕೆ ಬದ್ಧನಾಗಿ ನಡೆದುಕೊಂಡು ಬಂದವನು.ಆದರೆ ನಾನು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಲು ಕಾಂಗ್ರೆಸ್ ಜತೆ ಬಿಜೆಪಿಯೂ ಪೂರಕ ವಾತಾವರಣ ನಿರ್ಮಿಸಿದೆ ಎಂದು ಹೇಳಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಭಾವುಕರಾದ ಘಟನೆ ಇಂದಿಲ್ಲಿ ನಡೆಯಿತು.
ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದ ಇಂದು ವಿಧಾನಸೌಧಕ್ಕೆ ಬಂದು ಚುನಾವಣಾಧಿಕಾರಿಗಳಿಗೆ ತಮ್ಮ ನಾಮಪತ್ರ ಸಲ್ಲಿಸಿದ ಹೆಚ್.ಡಿ.ದೇವೇಗೌಡ ತದ ನಂತರ ಜೆಡಿಎಸ್ ಶಾಸಕಾಂಗ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಜಾತ್ಯಾತೀತ ತತ್ವಕ್ಕೆ ಬದ್ಧನಾಗಿ ನಾನು ನಿರಂತರವಾಗಿ ಹೋರಾಡಿಕೊಂಡು ಬಂದಿದ್ದೇನೆ.ನನಗಿರುವ ಬದ್ಧತೆಯ ಬಗ್ಗೆ ಇವತ್ತು ಪ್ರಶ್ನೆ ಮಾಡಲು ಹಿಂದೂಸ್ತಾನದಲ್ಲಿ ಯಾರಿಗೂ ಸಾಧ್ಯವಿಲ್ಲ.ಮುಂದೆಯೂ ನನ್ನ ನಿಲುವಿಗೆ ಪೂರಕವಾಗಿ ರಾಜಕಾರಣ ಮಾಡುತ್ತೇನೆ.ಜಾತ್ಯಾತೀತ ತತ್ವವನ್ನು ಯಾವ ಕಾರಣಕ್ಕೂ ಬಿಡುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.
ಆದರೆ ರಾಜ್ಯಸಭೆಗೆ ನಾನು ಅವಿರೋಧವಾಗಿ ಆಯ್ಕೆಯಾಗಲು ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಹೇಗೆ ಸಹಕಾರ ನೀಡಿದೆಯೋ?ಹಾಗೆಯೇ ಮತ್ತೊಂದು ರಾಷ್ಟ್ರೀಯ ಪಕ್ಷ ಬಿಜೆಪಿ ಕೂಡಾ ಮೌನವಾಗಿ ಸಹಕಾರ ನೀಡಿದೆ.ಇದು ನಾನು ಭಾವುಕನಾಗುವಂತೆ ಮಾಡಿದೆ ಎಂದರು.
ನನಗೆ ರಾಜ್ಯಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಚೆಯಿರಲಿಲ್ಲ.ಆದರೆ ಪಕ್ಷದ ಶಾಸಕಾಂಗ ಸಭೆ ನಾನೇ ರಾಜ್ಯಸಭೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯಬೇಕು ಎಂಬ ತೀರ್ಮಾನ ತೆಗೆದುಕೊಂಡಿತು.ಅದೇ ಕಾಲಕ್ಕೆ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಕೂಡಾ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮಾತ್ರವೇ ಕಣಕ್ಕಿಳಿಸಿತು.ಮತ್ತೊಂದು ಸ್ಥಾನಕ್ಕೆ ದೇವೇಗೌಡರು ಸ್ಪರ್ಧಿಸಬೇಕು ಎಂದು ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ಅವರು ಬಯಸಿದ್ದಾರೆ ಎಂದು ನನಗೆ ತಿಳಿಯಿತು.
ಹೀಗೆ ಜೆಡಿಎಸ್ ಶಾಸಕಾಂಗ ಸಭೆಯ ತೀರ್ಮಾನ ಮತ್ತು ಕಾಂಗ್ರೆಸ್ ಅಧ್ಯಕ್ಷರಾದ ಸೋನಿಯಾಗಾಂಧಿಯವರ ಇಚ್ಚೆಗೆ ಪೂರಕವಾಗಿ ಎಲ್ಲವೂ ನಡೆಯಿತು.ನಮ್ಮ ಪಕ್ಷದ ನಿರ್ಣಯವನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾದ ವೇಣುಗೋಪಾಲ್ ಅವರಿಗೆ ಹೆಚ್.ಡಿ.ಕುಮಾರಸ್ವಾಮಿಯವರು ತಿಳಿಸಿದರು.
ಇದಾದ ಮರುದಿನವೇ ವೇಣುಗೋಪಾಲ್ ಅವರು ಕುಮಾರಸ್ವಾಮಿಯವರಿಗೆ ದೂರವಾಣಿ ಕರೆ ಮಾಡಿ:ಸೋನಿಯಾಗಾಂಧಿ ಅವರ ಜತೆ ಮಾತನಾಡುವಂತೆ ತಂದೆಯವರಿಗೆ ಹೇಳಿ ಎಂಬ ಸಂದೇಶ ನೀಡಿದರು.ಅದರ ಪ್ರಕಾರ ನಾನು ಮೇಡಂ ಸೋನಿಯಾಗಾಂಧಿ ಅವರ ಜತೆ ಮಾತನಾಡಿದಾಗ ನೀವು ಸ್ಪರ್ಧಿಸಬೇಕು,ರಾಜ್ಯಸಭೆಗೆ ಬರಬೇಕು ಎಂಬುದು ನನ್ನ ಬಯಕೆ ಎಂದರು.
ಹಾಗೆಯೇ ಮೊದಲ ಅಭ್ಯರ್ಥಿಗೆ ಚಲಾವಣೆ ಮಾಡಿದ ನಂತರ ಕಾಂಗ್ರೆಸ್ನಲ್ಲಿ ಉಳಿಯುವ ಮತಗಳನ್ನು ನಿಮಗೆ ನೀಡುತ್ತೇವೆ ಎಂದು ಹೇಳಿದರು.ನಾನು ಅವರಿಗೆ ಆಭಾರಿಯಾಗಿದ್ದೇನೆ.ಇದು ಸಾಧ್ಯವಾಗಲು ಕಾರಣವಾದ ರಾಹುಲ್ಗಾಂಧಿಯವರು ಸೇರಿದಂತೆ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು. ರಾಜಕೀಯ ಜೀವನದಲ್ಲಿ ನಾನು ಬಹುವಾಗಿ ನೋವು ಉಂಡಿದ್ದೇನೆ.ಗೆದ್ದಂತೆಯೇ ಸೋತಿದ್ದೇನೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಲೋಕಸಭೆಯಲ್ಲೇ ಪ್ರಸ್ತಾಪ ಮಾಡಿದ್ದೆ.ಆದರೆ ಅನಿವಾರ್ಯ ಕಾರಣಗಳಿಂದ ಸ್ಪರ್ಧಿಸಿದೆ.ಸೋತೆ.ನನ್ನ ಸೋಲಿಗೆ ನಾನು ಯಾರನ್ನೂ ಹೊಣೆಗಾರರನ್ನಾಗಿ ಮಾಡುವುದಿಲ್ಲ ಎಂದರು.ಪ್ರತಿ ಹತ್ತು ವರ್ಷಕ್ಕೊಮ್ಮೆ ನನ್ನ ರಾಜಕೀಯ ಬೀಳು ನಡೆಯುತ್ತಿದೆ.ಇದು ವಿಧಿಯ ಆಟ. ಎಂಭತ್ತೊಂಭತ್ತರಲ್ಲಿ ,ತೊಂಭತ್ತೊಂಭತ್ತರಲ್ಲಿ ,2019 ರಲ್ಲಿ ಹೀಗೆ ಪ್ರತಿ ಹತ್ತು ವರ್ಷಗಳಿಗೊಮ್ಮೆ ಸೋಲು ಕಾಣುವುದು ನನಗೆ ಸಹಜವಾಗಿದೆ. ಆದರೆ ಇದೆಲ್ಲವೂ ವಿಧಿಯಾಟ.ನಾನು ಲೋಕಸಭಾ ಚುನಾವಣೆಯಲ್ಲಿ ಸೋಲಬೇಕು ಎಂಬುದೂ ವಿಧಿಯಾಟವಾಗಿತ್ತು.ಈಗ ರಾಜ್ಯಸಭೆಗೆ ನಾನು ಅವಿರೋಧವಾಗಿ ಆಯ್ಕೆಯಾಗಲು ಎರಡು ರಾಷ್ಟ್ರೀಯ ಪಕ್ಷಗಳು ಕಾರಣ.ಬಿಜೆಪಿ ನಾಯಕರನ್ನು ನಾನೇನೂ ಸಂಪರ್ಕಿಸಿರಲಿಲ್ಲ.
ಆದರೆ ನಾನು ಅವಿರೋಧವಾಗಿ ಆಯ್ಕೆಯಾಗಲು ಆ ಪಕ್ಷದ ತೀರ್ಮಾನ ಕಾರಣವಾಗಿದೆ.ಮುಂಚೆ ರಾಜ್ಯಸಭೆ ಚುನಾವಣೆಯ ಕಣಕ್ಕೆ ಮೂರು ಮಂದಿ ಸ್ಪರ್ಧಿಸುವಂತೆ ನೋಡಿಕೊಳ್ಳುವ ಮಾತು ಬಿಜೆಪಿಯಿಂದ ಕೇಳಿ ಬಂದಿತ್ತು.ಆದರೆ ಕೊನೆಗೆ ಎರಡೇ ಮಂದಿಯನ್ನು ಕಣಕ್ಕಿಳಿಸಲು ಬಿಜೆಪಿ ವರಿಷ್ಟರು ನಿರ್ಧರಿಸಿದರು.ನಾನು ಅವಿರೋಧವಾಗಿ ಆಯ್ಕೆಯಾಗಲು ಈ ನಿರ್ಣಯವೂ ಪೂರಕವಾಗಿದೆ ಎಂದ ದೇವೇಗೌಡರು,ಇವತ್ತಿನ ಸ್ಥಿತಿಯಲ್ಲಿ ನಾನು ನನ್ನ ಪಕ್ಷವನ್ನೂ ಉಳಿಸಿಕೊಳ್ಳಬೇಕಿದೆ.ಬಡ ಜನರ ಪರವಾಗಿ ಹೋರಾಡಬೇಕಿದೆ.ಈ ದಿಸೆಯಲ್ಲಿ ನನ್ನ ಪ್ರಯತ್ನ ನಡೆಯಲಿದೆ ಎಂದು ವಿವರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
