ಚಿಕ್ಕನಾಯಕನಹಳ್ಳಿ
ಮಾಜಿ ಪ್ರಧಾನಿ ಎಂದು ಹೇಳಿಕೊಳ್ಳುವ ದೇವೇಗೌಡರ ಪಿತೂರಿಯಿಂದ ಅಂದು ಪ್ರಧಾನಿ ಸ್ಥಾನ ಪಡೆದರು. ಈಗ ಅದೇ ಕುತಂತ್ರವನ್ನು ಅನುಸರಿಸಿ ಆಸ್ತಿ ಹಂಚಿಕೊಂಡಂತೆ ಮೊಮ್ಮಕ್ಕಳಿಗೆ ತಮ್ಮ ಕ್ಷೇತ್ರವನ್ನು ಹಂಚಿ ನಮ್ಮೂರಿಗೆ ಬಂದಿದ್ದಾರೆ. ನಾವು ತುಮಕೂರು ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ಹೇಳಿದರು.
ತಾಲ್ಲೂಕಿನ ಕಂದಿಕೆರೆ ಹೋಬಳಿ ವ್ಯಾಪ್ತಿಯ ಸಿಂಗದಹಳ್ಳಿ, ಬರಶಿಡ್ಲಹಳ್ಳಿ, ತಿಮ್ಮನಹಳ್ಳಿ, ಕಂದಿಕೆರೆ ಹಾಗೂ ಸುತ್ತಮುತ್ತದ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಪರವಾಗಿ ಮತಯಾಚನೆ ಮಾಡಿ ಮಾತನಾಡಿದ ಅವರು, ಈ ಚುನಾವಣೆಯು ಪ್ರತಿಷ್ಠೆಯಾಗಿ ಮಾರ್ಪಡುತ್ತಿದೆ, ವಯಸ್ಸಾಗಿರುವ ದೇವೇಗೌಡರಿಗೆ ಶಕ್ತಿ ಇಲ್ಲ, ಮನೆಯ ವ್ಯಾಜ್ಯವೆನ್ನೆಲ್ಲಾ ತಂದು ತುಮಕೂರಿನ ಜನತೆಯ ಮುಂದಿಡುತ್ತಿದ್ದಾರೆ. ಚುನಾವಣಾ ಅಭ್ಯರ್ಥಿಯಾಗಿಯೂ ಸಹ ಒಂದು ದಿನ ಈ ಭಾಗದಲ್ಲಿ ಸಂಚರಿಸದ ದೇವೇಗೌಡರು ಚುನಾವಣೆ ನಂತರ ನಿಮಗೆ ಸಿಗಲು ಸಾಧ್ಯವೇ ಇಲ್ಲ ಎಂದರು.
ದೇವೇಗೌಡರು ಪ್ರತಿ ಬಾರಿಯೂ ತುಮಕೂರಿಗರ ಹಿತಾಸಕ್ತಿಗೆ ವಿರುದ್ಧವಾಗಿಯೇ ವರ್ತಿಸುತ್ತಾರೆ. ಅಪ್ಪರ್ಭದ್ರಾ ಯೋಜನೆಯಲ್ಲಿ ಚಿನಾಹಳ್ಳಿ ತಾಲ್ಲೂಕನ್ನು ಬಿಟ್ಟು ಹಿರಿಯೂರು, ಶಿರಾ, ಚಿಕ್ಕಬಳ್ಳಾಪುರ ಸೇರಿಸಿ ಎತ್ತಿನಹೊಳೆಯಲ್ಲಿ ನೀರು ಕೊಡುತ್ತೇವೆ ಎಂದರು. ಆದರೆ ತಿಪಟೂರು, ಚಿಕ್ಕನಾಯಕನಹಳ್ಳಿ, ಗುಬ್ಬಿ ಈ ಮೂರು ತಾಲ್ಲೂಕಿಗೆ ಎತ್ತಿನಹೊಳೆ ಯೋಜನೆಯಲ್ಲಿ ನೀರು ನೀಡಿಲ್ಲ ಎಂದು ಆರೋಪಿಸಿದ ಅವರು, ಜನತೆ ನಿಮ್ಮ ಪರವಾಗಿ ಕೆಲಸ ಮಾಡುವವರನ್ನು ಚುನಾವಣೆಯಲ್ಲಿ ಆಯ್ಕೆ ಮಾಡಿ, ನಮಗೆ ಶಕ್ತಿ ನೀಡಿ ಬಿಜೆಪಿ ಪಕ್ಷವನ್ನು ಬೆಂಬಲಿಸಿ ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಿಯಾಗಿ ಆಯ್ಕೆ ಮಾಡಿ ಎಂದರು.
ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಮಾತನಾಡಿ, ತುಮಕೂರಿನಲ್ಲಿ ಕೈಗಾರಿಕಾ ಪ್ರದೇಶ ಮಾಡುವುದು, ದಾವಣಗೆರೆ-ತುಮಕೂರಿನ ರೈಲ್ವೆ ಯೋಜನೆ, ಚಿತ್ರದುರ್ಗ-ಚಿಕ್ಕನಾಯಕನಹಳ್ಳಿ-ಹುಳಿಯಾರು-ಕಿಬ್ಬನಹಳ್ಳಿ ರೈಲ್ವೆ ಯೋಜನೆಯನ್ನು ಶೀಘ್ರ ಜಾರಿಗೊಳಿಸಲು ಶ್ರಮಿಸುವ ಕಾರ್ಯವನ್ನು ನನ್ನ ಆಯ್ಕೆಯ ನಂತರ ಶೀಘ್ರ ಮಾಡುತ್ತೇನೆ ಎಂದ ಅವರು, ಜನತೆ ಯಾವುದೇ ಕಾರಣಕ್ಕೂ ಜನತದಳಕ್ಕೆ ಮತ ಹಾಕಬೇಡಿ, ಮತ ಹಾಕಿದರೆ ಮುಂದಿನ ನಿಮ್ಮ ಮಕ್ಕಳಿಗೆ ವಿಷ ಹಾಕಿದಂತೆ ಎಂದು ದೂರಿದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿರಾಜ್ಕುಮಾರ್, ಮಾಜಿ ಜಿ.ಪಂ.ಸದಸ್ಯೆ ಲೋಹಿತಬಾಯಿ, ತಾ.ಪಂ.ಸದಸ್ಯರಾದ ಕೇಶವಮೂರ್ತಿ, ಇಂದ್ರಮ್ಮ ಹಾಗೂ ಕಾರ್ಯಕರ್ತರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/04/13.04.19-C.NH-p1.gif)