ತುಮಕೂರು
ವಿಶೇಷ ವರದಿ: ರಾಕೇಶ್
ಸ್ಮಾರ್ಟ್ ಸಿಟಿ ಹೆಸರಿನಲ್ಲಿ ತುಮಕೂರು ಅಭಿವೃದ್ಧಿ ಆಗುತ್ತಿದೆ ಎನ್ನುವುದು ಸಂತೋಷದ ವಿಚಾರವಾದರೂ ತುಮಕೂರು ಸುತ್ತಮುತ್ತಲಿನ ಪ್ರದೇಶಗಳು ಅಭಿವೃದ್ಧಿಯಿಂದ ವಂಚಿತವಾಗಿವೆ ಎನ್ನುವುದಕ್ಕೆ ಉದಾಹರಣೆಯಾಗಿ ಹಳೇ ಭೀಮಸಂದ್ರ ಗ್ರಾಮವು ಸಮಸ್ಯೆಗಳ ಕೂಪವಾಗಿ ಪರಿಣಮಿಸಿದೆ.
ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಡುವ ಹಳೇ ಭೀಮಸಂದ್ರವು, 6ನೇ ವಾರ್ಡ್ಗೆ ಸೇರ್ಪಡೆಯಾಗಿದೆ. ಈ ಮುಂಚೆ ಹೆಗ್ಗೆರೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿದ್ದ ಈ ಪ್ರದೇಶವು 1996ರ ನಂತರ ನಗರ ಪಾಲಿಕೆ ವ್ಯಾಪ್ತಿಗೆ ಸೇರಿಸಲಾಗಿದೆ. ಈ ಪ್ರದೇಶದಲ್ಲಿ ಅಭಿವೃದ್ಧಿ ಎಂಬಂತೆ ಚರಂಡಿ, ರಸ್ತೆ ನಿರ್ಮಾಣ ಆಗಿದ್ದರೂ ಅದು ಕಳಪೆಯಾಗಿದೆ.
2015ರಲ್ಲಿ ಚರಂಡಿ ಕಾಮಗಾರಿ ಮಾಡಿಸಲಾಗಿದೆ. ನಂತರ 2017ರಲ್ಲಿ ರಸ್ತೆ ಕೆಲಸ ಮಾಡಿಸಿದ್ದಾರೆ. ಆದರೆ ಅಲ್ಲಲ್ಲಿ ಅದನ್ನು ಅರ್ಧಕ್ಕೆ ಬಿಟ್ಟಿದ್ದಾರೆ ಎಂಬುದು ಸ್ಥಳೀಯರ ಆರೋಪವಾಗಿದೆ. ಹಳೇ ಭೀಮಸಂದ್ರದ ನಿವಾಸಿಯಾಗಿ ನಿವೃತ್ತ ಶಿಕ್ಷಕ ಚಲುವಯ್ಯ ಅವರ ಮನೆ ಮುಂದೆ ಹಾದು ಹೋಗಿರುವ ಚರಂಡಿಗೆ ರಸ್ತೆ ಕಾಮಗಾರಿ ಮಾಡುವಾಗ ಮಣ್ಣು ಹಾಕಿ ಮುಚ್ಚಲಾಗಿದೆ. ಇದರಿಂದ ಚರಂಡಿ ನೀರು ಮುಂದಕ್ಕೆ ಹರಿಯದೆ ಅಲ್ಲಿಯೇ ನಿಂತು ದುರ್ವಾಸನೆ ಬೀರುತ್ತಿದೆ. ದುರ್ವಾಸನೆಯಲ್ಲಿಯೇ ಅನೇಕ ಮಂದಿ ವಾಸ ಮಾಡುತ್ತಾ ಕಾಯಿಲೆಗಳು ಬರುವ ಭೀತಿಯಲ್ಲಿದ್ದಾರೆ.
ಭೀಮಸಂದ್ರದ 6ನೇ ವಾರ್ಡ್ನಲ್ಲಿ ಸುಮಾರು 40 ರಿಂದ 60 ಮನೆಗಳಿವೆ. ಆದರೆ ಇಲ್ಲಿ ವಾಸಿಸುವ ಜನರಿಗೆ ಮಾತ್ರ ಮೂಲಭೂತ ಸೌಲಭ್ಯಗಳು ಮರೀಚಿಕೆಯಾದಂತಿದೆ. ಈ ಹಿಂದೆ ಇದ್ದಂತಹ ಪಾಲಿಕೆ ಸದಸ್ಯರು ತಮ್ಮ ಆಡಳಿತ ಅವಧಿಯಲ್ಲಿ ರಸ್ತೆ ಹಾಗೂ ಚರಂಡಿ ಕಾಮಗಾರಿಗಳನ್ನು ನಡೆಸಿದ್ದರು. ನಂತರದಲ್ಲಿ ಬಂದ ಸದಸ್ಯರು ಇದ್ದ ಚರಂಡಿಯನ್ನು ಮುಚ್ಚಿಹಾಕಿ, ಯುಜಿಡಿ ಹಾಗೂ ಸಿಸಿ ರಸ್ತೆಯನ್ನು ಅರ್ಧಭಾಗ ಮಾಡಿ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸದೆ ಸ್ಥಗಿತಗೊಂಡಿವೆ ಎಂಬುದು ಸ್ಥಳೀಯ ನಿವಾಸಿಗಳ ಆರೋಪವಾಗಿದೆ.
ಸ್ಥಳೀಯ ನಿವಾಸಿ ಕನಕಮ್ಮ ಪ್ರಜಾಪ್ರಗತಿಯೊಂದಿಗೆ ಮಾತನಾಡಿ, ನಮ್ಮ ಗ್ರಾಮದಲ್ಲಿ ರಸ್ತೆ, ಚರಂಡಿಗಳಿಲ್ಲದೇ ವೃದ್ದರು, ಮಕ್ಕಳು ಓಡಾಡಲು ಸಾದ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕೊಳಚೆ ನೀರು ನಿಂತು ಸೋಳ್ಳೆಗಳ ಉತ್ಪತ್ತಿ ಹೆಚ್ಚಾಗುತ್ತಿದೆ. ದಿನಬೆಳಗಾದರೆ ಆಸ್ಪತ್ರೆಯ ಬಾಗಿಲಿಗೆ ಹೋಗಬೇಕಾದ ಅನಿವಾರ್ಯತೆ ಬಂದೊದಗಿದೆ. ಈ ಬಗ್ಗೆ ಹಲವಾರು ಬಾರಿ ಆಯುಕ್ತರಿಗೆ, ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಗ್ರಾಮಸ್ತರು ಒಟ್ಟಾಗಿ ಸೇರಿ ಈ ಹಿಂದೆ ಪಾಲಿಕೆ ಆಯುಕ್ತ ಮಂಜುನಾಥಸ್ವಾಮಿಯವರಿಗೆ ಮನವಿ ಮಾಡಿದ್ದರೂ ಹಿಂದೆ ಇದ್ದ ಆಯುಕ್ತರಾದ ಮಂಜುನಾಥ್ರವರು ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂಬ ಭರವಸೆ ನೀಡಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಎಲ್ಲಾ ಕಡೆಗಳಲ್ಲೂ ಚರಂಡಿ, ರಸ್ತೆಗಳಿಲ್ಲದೇ ಪರದಾಡಿದರೆ ಭೀಮಸಂದ್ರ ಗ್ರಾಮದಲ್ಲಿ ಇದ್ದ ಚರಂಡಿಗೆ ಕೌನ್ಸಿಲರ್ ಮಣ್ಣಿನಿಂದ ಮುಚ್ಚಿರುವುದು ಶೋಚನೀಯ ಇದರಿಂದ ಪಾಪ ಬಡಜನರು ಅನುಭವಿಸುತ್ತಿರುವ ನರಕಯಾತನೆ ಬೇರ್ಯಾರಿಗೂ ಬೇಡ ಎಂಬಂತಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಕೋಡಲೇ ಈ ಬಗ್ಗೆ ಕ್ರಮ ಕೈಗೊಂಡು ಜನರಿಗೆ ಪರಿಹಾರ ಕಲ್ಪಿಸ್ತಾರಾ ಕಾದುನೋಡ್ಬೇಕಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
