ತುರುವೇಕೆರೆ
ತಾಲ್ಲೂಕು ಅಭಿವೃದ್ಧಿಯ ವಿಚಾರದಲ್ಲಿ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪರ ಕೊಡುಗೆ ಅಪಾರ ಎಂದು ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಕೊಳಾಲಗಂಗಾಧರ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂ.ಟಿ.ಕೃಷ್ಣಪ್ಪ 15 ವರ್ಷ ಶಾಸಕರಾಗಿ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿ ಹೆಚ್ಚು ಜನಪ್ರಿಯತೆಯನ್ನು ಪಡೆದಿದ್ದಾರೆ. ಈ ಹಿಂದೆ ಶಾಸಕರಾಗಿದ್ದ ಅವಧಿಯಲ್ಲಿ ಅನೇಕ ಕಾಮಗಾರಿಗಳಿಗೆ ಮಂಜೂರು ಮಾಡಿದ್ದರು. ಪ್ರಸ್ತುತ ಎಲ್ಲ ಕಾಮಗಾರಿಗಳು ಟೆಂಡರ್ ಹಂತಕ್ಕೆ ಬಂದು ಕಾಮಗಾರಿಗಳು ಚಾಲನೆಯಾಗುತ್ತಿವೆ ಎಂಬುದನ್ನು ತಾಲ್ಲೂಕಿನ ಜನತೆ ತಿಳಿದಿದೆ. ಬಿಜೆಪಿಯವರು ಹಾಲಿ ಶಾಸಕರ ಅನುದಾನ ಎಂದು ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ.
ಬಿಜೆಪಿಯವರು ಸತ್ಯಾಸತ್ಯತೆಯನ್ನು ತಿಳಿದು ಮಾತನಾಡಬೇಕಿದೆ. ಹಾಲಿ ಶಾಸಕರು ಅನುದಾನ ತಂದಿದ್ದರೆ ಇದರ ಬಗ್ಗೆ ಸೂಕ್ತ ದಾಖಲೆಗಳನ್ನು ಜನರ ಮುಂದಿಟ್ಟು ಸಾರ್ವಜನಿಕವಾಗಿ ತಿಳಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಜೆಡಿಎಸ್ – ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಇದ್ದು ಹೆಚ್.ಡಿ.ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಗಳಾಗಿದ್ದು ತಾಲ್ಲೂಕಿನ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನವನ್ನು ತರುವ ಶಕ್ತಿ, ತಾಕತ್ತು ಎರಡು ಎಂ.ಟಿ.ಕೃಷ್ಣಪ್ಪರಿಗೆ ಇದೆ. ಮುಂದಿನ ಎರಡು ವರ್ಷಗಳು ಸಹ ಮಾಜಿ ಶಾಸಕ.ಎಂ.ಟಿ.ಕೃಷ್ಣಪ್ಪ ಹಾಕಿರುವ ಯೋಜನೆಗಳು, ಕಾಮಗಾರಿಗಳು ಮಂಜೂರಾಗುತ್ತಿರುತ್ತವೆ. ಯಾವುದೂ ಹೊಸ ಯೋಜನೆ, ಕಾಮಗಾರಿಗಳು ಅಲ್ಲ ಎಂದರು. ಗೋಷ್ಠಿಯಲ್ಲಿ ಮಾಚೇನಹಳ್ಳಿರವಿ, ಗೊಟ್ಟಿಕೆರೆ ದೇವರಾಜು, ಕೃಷ್ಣಮೂರ್ತಿ, ಚೇತನ್, ಪುನಿತ್ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








