ದಾವಣಗೆರೆ :
ತಳಸಮುದಾಯಗಳ ಬದುಕಿಗೆ ಧ್ವನಿಯಾಗಿ, ಶಕ್ತಿ ತುಂಬಿದ ಜಗಜ್ಯೋತಿ ಬಸವಣ್ಣನವರನ್ನು ಮರೆತರೆ ದಮನಿತ ಸಮುದಾಯಗಳ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಜಾನಪದ ವಿದ್ವಾಂಸ ಡಾ.ಹೆಚ್.ವಿಶ್ವನಾಥ್ ತಿಳಿಸಿದರು.
ಇಲ್ಲಿನ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ದಲಿತ ವಚನಕಾರರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಸವಣ್ಣನವರು 12ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿಯ ಮೂಲಕ ಎಲ್ಲಾ ಜಾತಿ, ವರ್ಗದ ಜನರು ಮುನ್ನೆಲೆಗೆ ಬಂದು ತಮ್ಮ ಅಭಿವ್ಯಕ್ತಿಪಡಿಸಲು ಮಾರ್ಗದರ್ಶನ ಮಾಡಿದ ಮಹನೀಯರಾಗಿದ್ದಾರೆ ಎಂದು ಸ್ಮರಿಸಿದರು.
ದಲಿತ ವಚನಕಾರರು ಸೇರಿದಂತೆ ಮಹಾನ್ ವ್ಯಕ್ತಿಗಳ ಜಯಂತಿಯು ಕೇವಲ ಸರಳವಾಗಿ ಆಚರಣೆಯಾಗದೆ ಮೆರವಣಿಗೆ ಮೂಲಕ ವಚನಗಳನ್ನು ಪ್ರತಿಯೊಬ್ಬರಿಗೂ ತಿಳಿಸುವ ಪ್ರಯತ್ನವನ್ನು ಜಿಲ್ಲಾಡಳಿತ ಮಾಡಬೇಕಾಗಿದೆ. 12ನೇ ಶತಮಾನದ ಅನುಭವ ಮಂಟಪ ಇಂದಿನ ಲೋಕಸಭಾ ಸಂಸತ್ತು ಮತ್ತು ವಿಧಾನಸಭೆಗೆ ಸಾಕ್ಷಿಯಾಗಿದೆ ಎಂದರು.
ದಲಿತ ವಚನಕಾರರಾದ ಮಾದಾರ ಚನ್ನಯ್ಯ, ಧೂಳಯ್ಯ, ಸಮಗಾರ ಹರಳಯ್ಯ, ಉರಲಿಂಗ ಪೆದ್ದಿ, ಡೊಹರ ಕಕ್ಕಯ್ಯ ಇವರು ಯಾವುದೇ ರಾಜಾಶ್ರಯವಿಲ್ಲದಿದ್ದರೂ ತಮ್ಮ ಮನಸಿನ ತುಮುಲಗಳನ್ನು, ಕ್ರಾಂತಿಕಾರಿ ನಿಲುವುಗಳನ್ನು, ವೈಚಾರಿಕತೆಯನ್ನು, ನಿರಾಡಂಭರ ಭಕ್ತಿಯನ್ನು ತಮ್ಮ ವಚನಗಳ ಮೂಲಕ ಜಗತ್ತಿಗೆ ನೀಡಿ ಬೆಳಕಾದವರು ಹಾಗೂ ದಮನಿತರು ಎಚ್ಚೆತ್ತುಕೊಳ್ಳಲಿಕ್ಕೆ ಅಕ್ಷರ ಕ್ರಾಂತಿಯಿಂದ ಸಾಧ್ಯವೆಂದು ತೋರಿಸಿಕೊಟ್ಟವರು ಎಂದು ಹೇಳಿದರು.
ಅನುಭವ ಮಂಟಪ ಎಲ್ಲಾ ವರ್ಗದ ಶರಣರ ಒಳಗೊಳ್ಳುವಿಕೆಗೆ ವೇದಿಕೆಯಾಗಿತ್ತು. ಆದರೆ, ಅದು ಇಂದು ಬದಲಾಗಿ ಮಠ ಸಂಸ್ಕøತಿಯಾಗಿ ಬೆಳೆಯುತ್ತಿದೆ. ಅನುಭವ ಮಂಟಪದಲ್ಲಿನ ಅಲ್ಲಮನ ವಚನಗಳು ಮರೆಯಲು ಸಾಧ್ಯವಿಲ್ಲ. ಚಕ್ಕಡಿಗೆ ಕೀಲು ಬಹಳ ಮುಖ್ಯ. ಇಲ್ಲದಿದ್ದರೆ ಗಾಡಿ ಹಳಿ ತಪ್ಪುತ್ತದೆ. ಹಾಗೆ ಮಾನವನಾಗಿ ಗುಣಭಕ್ತರ ಸವಿನುಡಿಯೇ ಆಧಾರ ಎಂದವರು ಶರಣರು. ಮಾದಾರ ಚನ್ನಯ್ಯ ಬಸವಣ್ಣನವರ ಸಮಕಾಲೀನ. ಕಳಚೂರಿ ವಂಶದವರು ಕುದುರೆ ಲಾಯದಲ್ಲಿ ಮೇವು ಹಾಕುವ ಕೆಲಸ ಮಾಡುತ್ತಿದ್ದರೂ ಅವರ ವಚನಗಳು ಸಮಾಜವನ್ನು ಬಡಿದೆಬ್ಬಿಸುವಂತಿದ್ದವು ಎಂದು ನುಡಿದರು.
ಹರಳಯ್ಯ ಶಿವನು ಮೆಚ್ಚಿದ ಒಬ್ಬ ನಿಜಶರಣ. ತಾನು ನೈವೇದ್ಯ ನೀಡಿದ ಅಂಬಲಿಯನ್ನು ಶಿವ ಸ್ವೀಕರಿಸಲಿಲ್ಲ ಎಂದು ಶೀರಚ್ಚೇದನ ಮಾಡಿಕೋಳ್ಳಲು ಹೋದಾಗ ಶಿವನು ಪ್ರತ್ಯಕ್ಷನಾಗಿ ಅಂಬಲಿ ಸ್ವೀಕರಿಸಿದನು. ಅಂದರೆ ಕಠೋರ ತಪಸ್ಸಿನ ಶರಣ ಹರಳಯ್ಯ. ಕಲ್ಯಾಣದಲ್ಲಿನ ಕ್ರಾಂತಿಯ ರೂವಾರಿಯೇ ಸಮಗಾರ ಹರಳಯ್ಯ. ಈತ ಮಹಾನ್ ದೈವಭಕ್ತ. ಅಂದು ಆ ಕಾಲಘಟ್ಟದಲ್ಲಿ ಜಾತಿ ವ್ಯವಸ್ಥೆಯನ್ನು ವಿರೋಧಿಸಿದವನು. ಅಂಬೇಡ್ಕರ್ರವರ ಆಶಯ ಕೂಡ ಅದೇ ಆಗಿತ್ತು. ದೇವರಿಗೆ ಕುರಿ ಕೋಳಿಗಳನ್ನು ಬಲಿ ಕೊಡುತ್ತೇವೆಯೆ ಹೊರತು ಹುಲಿ ಸಿಂಹಗಳನ್ನಲ್ಲ. ಹಾಗಾಗಿ ಕೆಳಜಾತಿಯವರು ಹುಲಿ ಸಿಂಹಗಳಾಗಬೇಕು. ಮತ್ತು ಜಾತಿ ವ್ಯವಸ್ಥೆ ಇರುವವರೆಗೂ ಮೀಸಲಾತಿ ಇರಬೇಕು ಎಂಬುದು ನನ್ನ ಅಭಿಪ್ರಾಯ ಎಂದರು.
ಅಕ್ಕಮಹಾದೇವಿ ಸುರಸುಂದರಿ. ಆ ರಾಜ್ಯದ ದೊರೆ ಕೌಶಿಕ ಮಹಾರಾಜ ಅವಳನ್ನು ಇಷ್ಟ ಪಡುತ್ತಾನೆ, ಆದರೆ ಅಕ್ಕನಿಗೆ ಸಾಮಾಜಿಕ ವೈರಾಗ್ಯ ಉಂಟಾಗುತ್ತದೆ. ಎಮ್ಮೆಗೊಂದು ಚಿಂತೆ, ಸಮಗಾರನಿಗೆ ಒಂದು ಚಿಂತೆ, ಕೌಶಿಕನಿಗೆ ಕಾಮದ ಚಿಂತೆ ಎಂದು ಖಡಾಖಂಡಿತವಾಗಿ ಮದುವೆ ಪ್ರಸ್ತಾಪವನ್ನು ವಿರೋಧಿಸಿ ಕಲ್ಯಾಣಕ್ಕೆ ಬಂದು ‘ಆದ್ಯ ಶರಣೆ’ ಎಂದು ಪ್ರಮುಖಳಾಗಿದ್ದಾಳೆ. ಈ ಎಲ್ಲ ಶರಣರ ನುಡಿ ವಿಚಾರಗಳನ್ನು ಓದಿ ತಿಳಿದು ಅರಗಿಸಿಕೊಂಡರೆ ಈ ಸಮಾಜ ಉತ್ತಮ ಮಾರ್ಗದಲ್ಲಿ ಸಾಗಲು ಸಾಧ್ಯ ಎಂದರು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ನಾನು ಮೂಲತಃ ಶರಣರ ನಾಡಿನಿಂದ ಬಂದಿದ್ದೇನೆ. ಧಾರವಾಡದ ಮ್ಯೂಸಿಯಂನಲ್ಲಿ ಎಲ್ಲ ವಚನಕಾರರ ಮೂರ್ತಿಗಳು ಹಾಗೂ ಪುಸ್ತಕಗಳು ಇವೆ. ದಾವಣಗೆರೆಯಲ್ಲಿ ಸಹ ಅದೇ ರೀತಿ ಮ್ಯೂಸಿಯಂ ಮಾಡುವ ಸಣ್ಣ ಪ್ರಯತ್ನ ಮಾಡುತ್ತೇನೆ ಎಂದರು.
ಎಲ್ಲಾ ಶರಣರ ವಚನಗಳಲ್ಲಿಯೂ ಸಮಾನತೆ, ಕಾಯಕವೇ ಕೈಲಾಸ, ದೇಹವೇ ದೇಗುಲ ಎಂಬ ಅಂಶಗಳಿವೆ. ಈ ಎಲ್ಲ ಅಂಶಗಳನ್ನು ಮೈಗೂಡಿಸಿಕೊಂಡು, ನಮ್ಮ ದಿನ ನಿತ್ಯದ ಜೀವನದಲ್ಲಿ ಆದರ್ಶ ತತ್ವಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.ದಲಿತ ಮುಖಂಡ ಹೆಗ್ಗೆರೆ ರಂಗಪ್ಪ ಮತ್ತು ರಾಜು ಗೀತ ಗಾಯನ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನೀರ್ದೆಶಕ ರವಿಚಂದ್ರ, ನಗರಾಭಿವೃದ್ದಿ ಕೋಶದ ಯೋಜನಾಧಿಕಾರಿ ನಜ್ಮಾ, ಮುಖಂಡರಾದ ಹನುಮಂತಪ್ಪ, ಪರಶುರಾಮ್, ಹಾಲೇಶ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
