ದಾವಣಗೆರೆ :
ಆಲೂರು ಚಂದ್ರಶೇಖರಪ್ಪ ಮೆಮೋರಿಯಲ್ ಟ್ರಸ್ಟ್ ಹಾಗೂ ಆಲೂರು ಚಂದ್ರಶೇಖರಪ್ಪ ಮೆಮೋರಿಯಲ್ ಆಸ್ಪತ್ರೆ ಇವುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಸಕ್ಕರೆ ಕಾಯಿಲೆ ದಿನಾಚರಣೆ ಪ್ರಯುಕ್ತ ನ.10 ಮತ್ತು 11ರಂದು ಮಧುಮೇಹ ಮೇಳ ಏರ್ಪಡಿಸಲಾಗಿದೆ ಎಂದು ಟ್ರಸ್ಟ್ನ ಉಪಾಧ್ಯಕ್ಷ ಡಾ. ಮಂಜುನಾಥ ಆಲೂರು ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ನಗರದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ನಡೆಯುವ ಮೇಳದಲ್ಲಿ ಸಕ್ಕರೆ ಕಾಯಿಲೆ ಹೇಗೆ ನಿರ್ವಹಣೆ ಮತ್ತು ಈ ರೋಗ ಬರುವ ಮುನ್ನ ತಡೆಗಟ್ಟಬಹುದಾದ ಅಂಶಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು. ವಿಶ್ವ ಸರ್ಕಾರ ಕಾಯಿಲೆ ದಿನಾಚರಣೆ ಅಂಗವಾಗಿ ಈ ವರ್ಷ ‘ಸಕ್ಕರೆ ಕಾಯಿಲೆ ಹಾಗೂ ಕುಟುಂಬ’ ಎಂಬ ಘೋಷಣೆ ಮಾಡಲಾಗಿದೆ. ಇದುವರೆವಿಗೂ ಸಕ್ಕರೆ ಕಾಯಿಲೆ ವ್ಯಕ್ತಿಗೆ ಮಾತ್ರ ಪ್ರಾಶಸ್ತ್ಯ ನೀಡಲಾಗುತ್ತಿತ್ತು. ಇನ್ನೂ ಆತನ ಕುಟುಂಬಕ್ಕೆ ಹೆಚ್ಚಿನ ಮಹತ್ವ ನೀಡಲಾಗುವುದು ಎಂದು ಹೇಳಿದರು.
ಎರಡು ದಿನಗಳ ಕಾಲ ನಡೆಯುವ ಈ ಮೇಳದಲ್ಲಿ ಸಕ್ಕರೆ ಕಾಯಿಲೆ ಬಗ್ಗೆ ಸಂವಾದ, ಅನಿಸಿಕೆ, ತಪಾಸಣೆ, ಪರೀಕ್ಷೆ ನಡೆಸಲಾಗುವುದು. ಅಷ್ಟೇ ಅಲ್ಲದೇ ಸಕ್ಕರೆ ಕಾಯಿಲೆ ರೋಗಿಯು ಯಾವ ಹಣ್ಣು, ಊಟ ಬಳಸಬೇಕು ಎನ್ನುವುದು ಮಾದರಿ ಊಟ ನೀಡುವುದರ ಮೂಲಕ ತಿಳಿಸಲಾಗುವುದು ಎಂದರು.
ನ.10ರ ಸಂಜೆ 5 ಗಂಟೆಗೆ ಮೇಳದ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ಮಹಾನಗರ ಪಾಲಿಕೆ ಮಹಾಪೌರರಾದ ಶೋಭಾ ಪಲ್ಲಾಗಟ್ಟಿ ಆಗಮಿಸಲಿದ್ದು, ಟ್ರಸ್ಟ್ ಅಧ್ಯಕ್ಷೆ ಸುನಂದಮ್ಮ ಚಂದ್ರಶೇಖರಪ್ಪ ಆಲೂರು ಅಧ್ಯಕ್ಷತೆ ವಹಿಸುವರು. ಉಪನ್ಯಾಸ ಕಾರ್ಯಕ್ರಮಗಳು ನಡೆಯಲಿವೆ. ನ.11ರ ಬೆಳಿಗ್ಗೆ 9 ಗಂಟೆಯಿಂದ ವಿವಿಧ ವಿಷಯಗಳ ಬಗ್ಗೆ ಚರ್ಚೆ ಸಂವಾದ ನಡೆಯಲಿವೆ. ಇದೇ ಸಂದರ್ಭದಲ್ಲಿ ಹಿರಿಯ ವೈದ್ಯ ಡಾ. ಹೆಚ್. ಗುರುಪಾದಪ್ಪ, ಸಮಾಜ ಸೇವಕಿ ಅಜ್ಜಂಪುರಶೆಟ್ರು ಸುಶೀಲಮ್ಮ, ಬಾಪೂಜಿ ಆಸ್ಪತ್ರೆಯ ಮೆಡಿಕಲ್ ಆಫೀಸರ್ ಡಾ. ಕೆ.ಹೆಚ್. ಪಂಚಾಕ್ಷರಪ್ಪ ಅವರುಗಳನ್ನು ಸನ್ಮಾನಿಸಲಾಗುವುದು ಎಂದು ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ಡಾ. ವರುಣ್ಚಂದ್ರ ಆಲೂರು, ಡಾ.ಕೆ. ರವೀಂದ್ರ. ಡಾ. ಕೆ.ಪಿ. ಬಸವರಾಜ್ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
