ಬಳ್ಳಾರಿ:
ನಗರದ ಸತ್ಯನಾರಾಯಣ ಪೇಟೆಯ ಪ್ರಸಿದ್ಧ ದೇವಾಲಯ ಶ್ರೀ ವೆಂಕಟೇಶ್ವರ ದೇವಾಲಯದಲ್ಲಿ ಶರನ್ನವರಾತ್ರಿ ಹಬ್ಬದ ನಿಮಿತ್ತ ಶುಕ್ರವಾರ ವಿವಿಧ ಪೂಜೆಗಳು ವಿಜೃಂಭಣೆಯಿಂದ ನಡೆದವು.
ಶರನ್ನವರಾತ್ರೊತ್ಸವ ನಿಮಿತ್ತ ದೇವಾಲಯದಲ್ಲಿ ಬೆಳಿಗ್ಗೆ ಶ್ರೀ ವೆಂಕಟೇಶ ಸ್ತೋತ್ರ ಪಾರಾಯಣ, ಪಂಚಾಮೃತಾಭಿಷೇಕ, ವಿವಿಧ ಹೂಗಳಿಂದ ಅಲಂಕಾರ, ಮಹಾಮಂಗಳಾರತಿ ಸೇರಿದಂತೆ ವಿವಿಧ ಪೂಜೆಗಳು ನಡೆದವು. ದೇವಾಲಯದ ಅರ್ಚಕ ವಾದಿರಾಜ್ ಆಚಾರ್ಯ ಅವರ ನೇತೃತ್ವದಲ್ಲಿ ಪೂಜೆಗಳು ಜರುಗಿದವು. ಶುಕ್ರವಾರ ಸಂಜೆ ಕಲ್ಪವೃಕ್ಷವಾಹನ ಉತ್ಸವ ಸಾವಿರಾರು ಜನರ ಗಮನಸೆಳೆಯಿತು. ಈ ವೇಳೆ ನಗರದ ಶ್ರೀಮಧ್ವ ಸದನ ಭಜನಾ ಮಂಡಳಿ ಎಲ್ಲ ಸದಸ್ಯರು ಶ್ರೀವೆಂಕಟೇಶನ ನಾಮಸ್ಮರಣೆ ಮಾಡುವ ಮೂಲಕ ಸಾಮೋಹಿಕ ಭಜನೆ ನಡೆಸಿದರು. ದೇವಾಲಯದ ಸಮೀತಿ ಎಲ್ಲ ಪದಾಧಿಕಾರಿಗಳು, ಅರ್ಚಕರು, ನೂರಾರು ಭಕ್ತರು ಈ ಉತ್ಸವದಲ್ಲಿ ಭಾಗವಹಿಸಿ ಶ್ರೀವೆಂಕಟೇಶ್ವರ ದೇವರಿಗೆ ಭಕ್ತಿ ಸಮರ್ಪಿಸಿದರು. ನಂತರ ಎಲ್ಲ ಭಕ್ತರಿಗೆ ತೀರ್ಥ, ಪ್ರಸಾದ ವಿತರಿಸಲಾಯಿತು.
ಉತ್ಸವಗಳು: ಆಶ್ವೀಜ ಶುದ್ದ ಪ್ರತಿಪದದಿಂದ ಆಶ್ವೀಜ ಶುದ್ದ ದಶಮಿ ವರೆಗೆ ಶ್ರೀವೆಂಕಟೇಶ್ವರ ದೇವಾಲಯದಲ್ಲಿ ಪ್ರತಿ ವರ್ಷದಂತೆ ಪ್ರಸಕ್ತ ವರ್ಷವೂ ಶರನ್ನವರಾತ್ರೋತ್ಸವ ನಿಮಿತ್ತ ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯಲಿದ್ದು, ಕಳೆದ ಬುಧವಾರ ಧ್ವಜಾರೋಹಣ, ರಜತ ಕವಚ, ಶೇಷವಾಹನ ಉತ್ಸವ, ಗುರುವಾರ ವೆಂಕಟೇಶ್ವರ ದೇವರಿಗೆ ಬೆಣ್ಣೆ ಅಲಂಕಾರ, ಸಂಜೆ ಸಿಂಹವಾಹನ ಉತ್ಸವ, ಶುಕ್ರವಾರ ವಸ್ತ್ರಾಲಂಕಾರ, ಸಂಜೆ ಕಲ್ಪವೃಕ್ಷವಾಹನ ಉತ್ಸವ, ಶನಿವಾರ ಪುಷ್ಪಾಲಂಕಾರ, ಸಂಜೆ ಹನುಮಂತವಾಹನ ಉತ್ಸವ ವಿಜೃಂಭಣೆಯಿಂದ ನಡೆದಿದ್ದು, ಭಾನುವಾರ ಶ್ರೀಗಂಧದ ಅಲಂಕಾರ ಸಂಜೆ ಗರುಡ ವಾಹನ ಉತ್ಸವ, ಸೋಮವಾರ ನಾಣ್ಯಗಳಿಂದ ಅಲಂಕಾರ, ಸಂಜೆ ಗಜವಾಹನ ಉತ್ಸವ, ಮಂಗಳವಾರ ಹಣ್ಣಿನ ಅಲಂಕಾರ ಸಂಜೆ ಹಂಸವಾಹನ ಉತ್ಸವ, ಬುಧವಾರ ಮೋಹಿನಿ ಅಲಂಕಾರ ಸಂಜೆ ಗಜವಾಹನ ಉತ್ಸವ, ಗುರುವಾರ ಕೊರವಂಜಿ ಅಲಂಕಾರ, ಬೆಳಿಗ್ಗೆ ಸೂರ್ಯಪ್ರಭ ವಾಹನ ಉತ್ಸವ ಹಾಗೂ ಸಂಜೆ ಚಂದ್ರಪ್ರಭ ವಾಹನ ಉತ್ಸವ ನಡೆಯಲಿದೆ ಎಂದು ದೇವಾಲಯದ ಸಮೀತಿ ಆಡಳಿತ ಮಂಡಳಿ ಸದಸ್ಯರು ತಿಳಿಸಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
