ಉಪ ಸಮರದಲ್ಲಿ ಅನರ್ಹರಿಗೆ ತಕ್ಕ ಪಾಠ: ಎಚ್ ಆಂಜನೇಯ

ದಾವಣಗೆರೆ:

     ಅಧಿಕಾರ ದಾಹ ಹಾಗೂ ಹಣದ ಆಮಿಷಕ್ಕೆ ಬಲಿಯಾಗಿ ಶಾಸಕರ ಸ್ಥಾನಕ್ಕೆ ರಾಜೀನಾಮೆ ನೀಡಿ, ಮತ್ತೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅನರ್ಹ ಶಾಸಕರಿಗೆ 15 ಕ್ಷೇತ್ರಗಳ ಮತದಾರರು ತಕ್ಕ ಪಾಠ ಕಲಿಸಿ ಅನರ್ಹರನ್ನಾಗಿಯೇ ಮಾಡಲಿದ್ದಾರೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಎಚ್.ಆಂಜನೇಯ ತಿಳಿಸಿದ್ದಾರೆ.

     ಶುಕ್ರವಾರ ನಗದ ಬಾಪೂಜಿ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಸಬೇಕಾದ ಅವಶ್ಯಕತೆಯೇ ಇರಲಿಲ್ಲ. ಆದರೆ, ಈ ಕ್ಷೇತ್ರಗಳಿಂದಲೇ ಆಯ್ಕೆಯಾಗಿದ್ದವರು ತಮ್ಮ ಸ್ವಾರ್ಥ, ಅಧಿಕಾರ ದಾಹ, ಹಣದ ಆಸೆಯಿಂದ ಪಕ್ಷಕ್ಕೆ ದ್ರೋಹ ಬಗೆದು ಶಾಸಕರ ಸ್ಥಾನಕ್ಕೆ ರಾಜೀನಾಮೆ ನೀಡಿ, ಉಪ ಚುನಾವಣೆ ಬರಲು ಕಾರಣರಾಗಿ ಈಗ ಮತ್ತೆ ಶಾಸಕರಾಗಲು ಚುನಾವಣೆಗೆ ಸ್ಪರ್ಧಿಸಿರುವವರನ್ನು ಸೋಲಿಸಿ, ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

     ಅನರ್ಹ ಶಾಸಕರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಉತ್ತಮ ತೀರ್ಪನ್ನೇ ನೀಡಿದೆ. ಇಲ್ಲವಾಗಿದ್ದರೆ, ಅನರ್ಹ ಶಾಸಕರು ಸಚಿವರಾಗಿಯೇ ಚುನಾವಣೆಗೆ ಹೋಗುತ್ತಿದ್ದರು. ಪ್ರಜಾಪ್ರಭುತ್ವ ಉಳಿಯಬೇಕಾದರೆ, ಅನರ್ಹರನ್ನು ಅನರ್ಹರನ್ನಾಗಿಯೇ ಮಾಡಬೇಕಾಗಿದೆ. ಅಂತಹದ್ದೊಂದು ಕೆಲಸವನ್ನು ಉಪ ಚುನಾವಣೆ ನಡೆಯುತ್ತಿರುವ 15 ಕ್ಷೇತ್ರಗಳ ಮತದಾರರು ಮಾಡಲಿದ್ದಾರೆ ಎಂದರು.

     ಉಪ ಚುನಾವಣೆ ನಡೆಯುತ್ತಿರುವ ಎಲ್ಲಾ 15 ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಲಿದೆ. 15 ಕ್ಷೇತ್ರದಲ್ಲೂ ಕಾಂಗ್ರೆಸ್ ಪರ ಅಲೆ ಕಂಡು ಬರುತ್ತಿದ್ದು, ನಮ್ಮ ಅಭ್ಯರ್ಥಿಗಳ ಪರ ಒಲವು ವ್ಯಕ್ತವಾಗುತ್ತಿದೆ. ಪಕ್ಷಕ್ಕೆ ದ್ರೋಹ ಬಗೆದವರಿಗೆ, ತಮ್ಮ ಸ್ವಾರ್ಥ, ಹಣಕ್ಕಾಗಿ ಕ್ಷೇತ್ರದ ಜನರ ತೀರ್ಪಿಗೆ ವಿರುದ್ಧವಾಗಿ ನಡೆದು ಕೊಂಡಿರುವವರಿಗೆ ಮತದಾರರೇ ಉಪ ಚುನಾವಣೆಯಲ್ಲಿ ತಕ್ಕ ಶಾಸ್ತಿ ಮಾಡಲಿದ್ದಾರೆ ಎಂದು ಹೇಳಿದರು.

    ಸಿದ್ದರಾಮಯ್ಯನವರ ಅನ್ನಭಾಗ್ಯ ಯೋಜನೆಯ ಅನ್ನ ಉಂಡಂತಹ ಜನರು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸದೇ, ಬಿಜೆಪಿಯನ್ನು ಗೆಲ್ಲಿಸಿದರು. ಅನ್ನ ಭಾಗ್ಯ ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದ ಕಾಂಗ್ರೆಸ್ ಪಕ್ಷದ ಕೈ ಹಿಡಿಯಲಿಲ್ಲ. ಅನ್ನ ಭಾಗ್ಯದಂತಹ ಮಾನವೀಯ ಯೋಜನೆ ಮೂಲಕ ಬಡವರ ಹೊಟ್ಟೆ ತುಂಬಿಸುವ ಕೆಲಸವನ್ನು ತಮ್ಮ ಪಕ್ಷವು ಅಧಿಕಾರದಲ್ಲಿದ್ದಾಗ ಮಾಡಿತು. ಆದರೆ, ಜನರು ಮಾತ್ರ ಬಿಜೆಪಿಗೆ ಗೆಲ್ಲಿಸಿದರು ಎಂದು ಅವರು ವಿಷಾದಿಸಿದರು.

     ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ದಿನೇಶ ಗುಂಡೂರಾವ್ ಅವರನ್ನು ಬಫೂನ್ ಅಂದವರೇ ಬಫೂನ್ ಇರಬೇಕು. ಯಾರೇ ಆಗಲಿ ಯಾರ ಬಗ್ಗೆಯೇ ಆಗಿರಲಿ ಹಗುರವಾಗಿ ಟೀಕೆ ಮಾಡಬಾರದು ಎಂಬುದಾಗಿ ಹೊನ್ನಾಳಿ ಶಾಸಕ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಟೀಕೆಗೆ ಮಾಜಿ ಸಚಿವ ಎಚ್.ಆಂಜನೇಯ ತಿರುಗೇಟು ನೀಡಿದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link