ಅಕ್ಷರ ಜಾತ್ರೆ: “ಕನ್ನಡ ಶಾಲೆಗಳ ಅಳಿವು-ಉಳಿವು” ಕುರಿತ ವಿಚಾರಗೋಷ್ಠಿ

ಧಾರವಾಡ

            ರಾಜ್ಯದಲ್ಲಿ ಒಂದು ಸಾವಿರ ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯುವ ನಿರ್ಧಾರವನ್ನು ಸರ್ಕಾರ ತಕ್ಷಣ ಕೈಬಿಡಬೇಕು. ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸಲು ಮುಂದಾಗಬೇಕು ಎಂದು ಶಿಕ್ಷಣ ತಜ್ಞ ಹಾಗೂ ಬರಹಗಾರ  ಜಿ.ಎಸ್.ಜಯದೇವ್ ಒತ್ತಾಯಿಸಿದ್ದಾರೆ.

          ಇಲ್ಲಿ ನಡೆಯುತ್ತಿರುವ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಇಂದು ಅಂಬಿಕಾತನಯದತ್ತ ಪ್ರಧಾನ ವೇದಿಕೆಯಲ್ಲಿ ಏರ್ಪಡಿಸಿದ್ದ “ಕನ್ನಡ ಶಾಲೆಗಳ ಅಳಿವು-ಉಳಿವು” ಕುರಿತ ವಿಚಾರಗೋಷ್ಠಿಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ ನಿಂದಲೇ ಕನ್ನಡ ಶಾಲೆಗಳನ್ನು ಸ್ಥಾಪಿಸುವ ಕೆಲಸವಾಗಬೇಕು. ಗ್ರಾಮ, ಹೋಬಳಿ ಮಟ್ಟದಲ್ಲಿಯೂ ಕನ್ನಡ ಶಾಲೆಗಳನ್ನು ತೆರಯುವ ಮೂಲಕ ಕಸಾಪ ಕೇವಲ ಸ್ಥಾವರ ಆಗದೆ ಕನ್ನಡದ ಜಂಗಮದ ಕೆಲಸ ಮಾಡಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

           ಖಾಸಗಿ ಶಾಲೆಗಳೊಂದಿಗೆ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವ ಪ್ರಕ್ರಿಯೆಯನ್ನು ಕೈಬಿಡಬೇಕು. ಸರ್ಕಾರಿ ಶಾಲೆಗಳನ್ನು ಸಬಲೀಕರಣಗೊಳಿಸುವ ಕೆಲಸ ನಡೆಯಬೇಕು. ಕನ್ನಡ ಬಾರದಿದ್ದರೆ ನಾಚಿಕೆಪಡುವಂತಹ ವಾತಾವರಣ ನಿರ್ಮಿಸಬೇಕು. ಇಂಗ್ಲಿಷ್ ಒಂದು ವ್ಯಾವಹಾರಿಕ ಭಾಷೆಯಾಗಬೇಕೇ ಹೊರತು, ರಾಜ್ಯದಲ್ಲಿ ಅದೆ ಪ್ರಮುಖ ಭಾಷೆಯಾಗಬಾರದು. ಕನ್ನಡದ ರಕ್ಷಣೆಗಾಗಿ ಈ ಎಲ್ಲಾ ಅಂಶಗಳುಳ್ಳ ಬೇಡಿಕೆಗಳನ್ನು ಮುಖ್ಯಮಂತ್ರಿ ಅವರಿಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

         ಸಾಹಿತಿ ನಾಗರತ್ನ ಬಂಜಗೆರೆ ಅವರು “ಸರ್ಕಾರಿ ಶಾಲೆಗಳು ಮತ್ತು ಆರ್‍ಟಿಇ ಪ್ರಲೋಭನೆ” ಎಂಬ ವಿಷಯ ಕುರಿತು ಮಾತನಾಡಿ, ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಜಾರಿಗೆ ತರಲಾಗಿರುವ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ – ಆರ್‍ಟಿಇಯಿಂದ ಮಕ್ಕಳು ಬೀದಿಪಾಲಾಗುವ ಜತೆಗೆ ಬಾಲಕಾರ್ಮಿಕರು ಹೆಚ್ಚಾಗಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ಸರ್ಕಾರ 16 ಸಾವಿರ ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿದೆ. ಇದು ಆತಂಕಕಾರಿ ಬೆಳವಣಿಗೆ. ಖಾಸಗಿ ಶಾಲೆಗಳಿಗೆ ಬೆಂಬಲ ನೀಡುವ ಜತೆಗೆ ಇಂಗ್ಲಿಷ್ ಶಾಲೆಗಳನ್ನು ಸರ್ಕಾರವೇ ಸಾಕಿ ಬೆಳೆಸುತ್ತಿದೆ ಎಂದು ಟೀಕಿಸಿದರು.

         ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಸರ್ಕಾರವೇ ಹಾಳುಮಾಡಲು ಮುಂದಾಗಿದೆ. ಪಟ್ಟಣ, ಅರೆಪಟ್ಟಣ ಗ್ರಾಮೀಣ ಪ್ರದೇಶಗಳ ಖಾಸಗಿ ಶಾಲೆಗಳಿಗೆ ಇತ್ತೀಚೆಗೆ ಆರ್‍ಟಿಇ ಅಡಿಯಲ್ಲಿ ದಾಖಲಾಗಿರುವವ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದವರನ್ನು ಬಿಡಿಸಿ ಪೋಷಕರು ಈ ಯೋಜನೆಯಡಿ ಖಾಸಗಿ ಶಾಲೆಗಳ, ಅದರಲ್ಲೂ ಪ್ರಮುಖವಾಗಿ ಇಂಗ್ಲಿಷ್ ಮಾಧ್ಯಮ ವ್ಯಾಮೋಹಕ್ಕೆ ಒಳಗಾಗಿ ದಾಖಲುಮಾಡುತ್ತಿದ್ದಾರೆ. ವಿದ್ಯಾರ್ಥಿಗಳಿಲ್ಲದೆ ಸರ್ಕಾರಿ ಶಾಲೆಗಳು ಮುಚ್ಚುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆರ್‍ಟಿಇ ಅಡಿಯಲ್ಲಿ ಸರ್ಕಾರ ಶುಲ್ಕವನ್ನು ಭರಿಸುವ ಮೂಲಕ ಪರೋಕ್ಷವಾಗಿ ಖಾಸಗಿ ಶಾಲೆಗಳನ್ನು ಬೆಳೆಸುತ್ತಿದೆ. ಈ ಮೂಲಕ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಸರ್ಕಾರವೇ ನಾಶ ಮಾಡಲು ಮುಂದಾಗಿದೆ ಎಂದು ಆರೋಪಿಸಿದರು.

             ಮುಂದಿನ 8 ವರ್ಷಗಳ ವರೆಗೆ ಮಾತ್ರ ಸರ್ಕಾರ ಆರ್‍ಟಿಇ ಶುಲ್ಕ ಭರಿಸುತ್ತದೆ. ನಂತರ ಬಡ ವಿದ್ಯಾರ್ಥಿಗಳ ಭವಿಷ್ಯವೇನು ? ಎಂದು ಪ್ರಶ್ನಿಸಿದ ಅವರು, ಇದೇ ಪರಿಸ್ಥಿತಿ ಮುಂದುವರೆದರೆ ಎಲ್ಲಾ ಸರ್ಕಾರಿ ಶಾಲೆಗಳು ಮುಚ್ಚಿರುತ್ತವೆ. ಶುಲ್ಕ ಕಟ್ಟಲಾಗದೆ ವಿದ್ಯಾರ್ಥಿಗಳು ಬೀದಿಪಾಲಾಗಿ ಬಾಲ ಕಾರ್ಮಿಕರು ಸೃಷ್ಟಿಯಾಗುವ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

             ದೆಹಲಿ ಸರ್ಕಾರ ಬಜೆಟ್‍ನ ಶೇ. 27ರಷ್ಟು ಅನುದಾನವನ್ನು ಸಾರ್ವಜನಿಕ ಶಿಕ್ಷಣಕ್ಕೆ ಮೀಸಲಿಟ್ಟು ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಮುಂದಾಗಿದೆ. ಇದೆ ಮಾದರಿಯನ್ನು ನಮ್ಮ ಸರ್ಕಾರ ಕೂಡ ಅನುಸರಿಸಬೇಕು. ಈ ಮೂಲಕ ಗುಣಮಟ್ಟದ ಶಿಕ್ಷಣ ಸಿಗುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

             ಸಾಹಿತಿ ಅಬ್ದುಲ್ ರಹ್ಮಾನ್ ಪಾಷ ಅವರು “ಕನ್ನಡ ಮಾಧ್ಯಮ ಎದುರಿಸುತ್ತಿರುವ ಬಿಕ್ಕಟ್ಟುಗಳು” ಎಂಬ ವಿಷಯದ ಬಗ್ಗೆ ವಿಚಾರ ಮಂಡಿಸಿ, ಮಾತೃಭಾಷೆ ಉರ್ದುವಾದರೂ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿದೆ. ಅದೇ ರೀತಿ, ಮಕ್ಕಳನ್ನು ಸಹ ಕನ್ನಡ ಮಾಧ್ಯಮ ಶಾಲೆಯಲ್ಲಿಯೇ ಓದಿಸಿದೆ.

             ನಾನು ಇಚ್ಛಿಸಿದರೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳನ್ನು ಓದಿಸಬಹುದಾಗಿತ್ತು. ಆದರೆ, ಕನ್ನಡ ಮಾಧ್ಯಮದ ಶಿಕ್ಷಣವೇ ಉತ್ತಮ ಆಯ್ಕೆ ಎನ್ನುವುದು ನನ್ನ ಅರಿವಿನಲ್ಲಿತ್ತು. ಪ್ರತಿ ಪೋಷಕರು ಮಕ್ಕಳ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಮಾತೃ ಭಾಷೆ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಪೋಷಕರ ಮನವೊಲಿಸಬೇಕಾಗಿದೆ. ಪ್ರಾಥಮಿಕ ಶಾಲೆಯಲ್ಲಿ ಮಾತೃಭಾಷೆ ಆಯ್ಕೆ ಮಾಡಿಕೊಳ್ಳಬೇಕು ಎಂದಾಗ ಹಲವು ಭಾಷೆಗಳು ಸ್ಥಳೀಯವಾಗಿ ಬರುತ್ತವೆ.

              ಕೆಲವು ಜಾತಿ, ಧರ್ಮಗಳಲ್ಲಿನ ಸ್ಥಾಪಿತ ಪಟ್ಟಬದ್ರ ಹಿತಾಸಕ್ತಿಗಳು ನಮ್ಮ ಮಾತೃಭಾಷೆಯಲ್ಲಿಯೇ ಶಿಕ್ಷಣ ಪಡೆಯಬೇಕೆಂಬ ಒತ್ತಾಯ ಮಾಡುವ ಸಾಧ್ಯತೆ ಕೂಡ ಇರುತ್ತವೆ ಎಂದು ಹೇಳಿದರು.ಸಿದ್ದರಾಮ ಮನಹಳ್ಳಿ ಅವರು ಗುಣಮಟ್ಟದ ಶಿಕ್ಷಣ ಮತ್ತು ಮೂಲಭೂತ ಸೌಕರ್ಯಗಳು ಎಂಬ ವಿಷಯ ಕುರಿತು ಮಾತನಾಡಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link