ಗುರು ತಿಪ್ಪೇರುದ್ರಸ್ವಾಮಿ ಜಾತ್ರೆಗೆ ಜಿಲ್ಲಾಡಳಿತ ಸಿದ್ಧತೆ

ಚಿತ್ರದುರ್ಗ;   ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಚಳ್ಳಕೆರೆ ತಾಲ್ಲೂಕು ನಾಯಕನಹಟ್ಟಿ ಪಟ್ಟಣದಲ್ಲಿ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಜಾತ್ರಾ ಮಹೋತ್ಸವ ಮಾರ್ಚ್ 5 ರಿಂದ ಮಾರ್ಚ್ 16 ರವರೆಗೆ ವಿಜೃಂಭಣೆಯಿಂದ ಜರುಗಲಿದ್ದು, ಜಾತ್ರೆಗೆ ಆಗಮಿಸುವ ಭಕ್ತಾಧಿಗಳಿಗೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಜಿಲ್ಲಾಡಳಿತವು ಸಕಲ ಸಿದ್ಧತೆ ಕೈಗೊಂಡಿದೆ.

ಕುಡಿಯುವ ನೀರಿನ ವ್ಯವಸ್ಥೆ:

   ಜಾತ್ರೆ ನಡೆಯುವ ಸ್ಥಳದಲ್ಲಿ ಒಂದೊಂದು ಕಡೆ 15 ಟ್ಯಾಂಕರ್‍ಗಳಿಗೆ ನೀರು ತುಂಬಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿನ 79 ಬೋರ್‍ವೆಲ್‍ಗಳಲ್ಲಿ 59 ಬೋರ್‍ವೆಲ್‍ನಲ್ಲಿ ನೀರು ಲಭ್ಯವಿದ್ದು, ನೀರು ಸರಬರಾಜಿಗೆ ಸಿದ್ಧತೆ ಮಾಡಲಾಗುತ್ತಿದೆ.

    ಅಲ್ಲದೆ ಖಾಸಗಿ ಕಂಟ್ರ್ಯಾಕ್ಟರ್‍ಗಳು, ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳು ಪಂಚಾಯಿತಿ ರಾಜ್ ಇಂಜಿನಿಯರಿಂಗ್ ವಿಭಾಗ ಹಾಗೂ ಅರಣ್ಯ ಇಲಾಖೆ ಇವರಿಂದ ಸುಮಾರು 60 ರಿಂದ 70 ಟ್ಯಾಕ್ಟರ್ ಗಳ ಮೂಲಕ ನೀರು ಸರಬರಾಜು ಕೈಗೊಳ್ಳಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಆರೋಗ್ಯ ಮತ್ತು ನೈರ್ಮಲ್ಯೀಕರಣ:

    ಜಾತ್ರಾ ಸಮಯದಲ್ಲಿ ಸ್ವಚ್ಛತೆ ಹಾಗೂ ನೈರ್ಮಲ್ಯ ಕಾಪಾಡಲು ನಾಯಕನಹಟ್ಟಿ ಪಟ್ಟಣ ಪಂಚಾಯಿತಿಯ ಪೌರ ಕಾರ್ಮಿಕರು ಹಾಗೂ ಇತರೆ 150 ಜನರನ್ನು ಸ್ವಚ್ಛತಾ ಕೆಲಸಕ್ಕೆ ನಿಯೋಜಿಸಲಾಗುವುದು. ಶುಚಿತ್ವ ಮತ್ತು ನೈರ್ಮಲ್ಯ ವ್ಯವಸ್ಥೆಗಾಗಿ 250 ಕೆ.ಜಿ. ಬ್ಲೀಚಿಂಗ್ ಪೌಡರ್ ಹಾಗೂ 1 ಲಕ್ಷ ಹ್ಯಾಲೋಜಿನ್ ಮಾತ್ರೆ, 100 ಲೀಟರ್ ಪೀನಾಯಿಲ್ ಪೂರೈಕೆ ಮಾಡಲು ಆರೋಗ್ಯ ಇಲಾಖೆಗೆ ನಿರ್ದೇಶನ ನೀಡಲಾಗಿದೆ.

   ಊರು ಪಕ್ಕದಲ್ಲಿರುವ ತಿಪ್ಪೆಗಳನ್ನು ಗ್ರಾಮದ ಹೊರಗಡೆ ಹಾಕಿಸುವುದು, ಜನಸಂದಣಿ ಹೆಚ್ಚಿರುವ 4 ಕಡೆಗಳಲ್ಲಿ ತಾತ್ಕಾಲಿಕ ಶೌಚಾಲಯಗಳನ್ನು ನಿರ್ಮಿಸಿ ನೀರಿನ ವ್ಯವಸ್ಥೆ ಕಲ್ಪಿಸುವುದು, ತೇರು ಬೀದಿಯಲ್ಲಿ ರಥೋತ್ಸವ ಜರುಗುವ ವರೆಗೆ ಯಾವುದೇ ಅಂಗಡಿಗಳನ್ನು ಹಾಕಿಕೊಳ್ಳಬಾರದು ಮತ್ತು ರಸ್ತೆಗಳನ್ನು ಸ್ವಚ್ಛವಾಗಿಡಬೇಕು. ರಸ್ತೆಯ ಅಕ್ಕಪಕ್ಕದಲ್ಲಿರುವ ಜಾಲಿ, ಮುಳ್ಳು ಗಿಡಗಳನ್ನು ಹಾಗೂ ಒತ್ತುವರಿಯನ್ನು ತೆರವುಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

   ತುರ್ತು ಚಿಕಿತ್ಸೆಗಾಗಿ ಒಂದು ಸಂಚಾರಿ ವಾಹನ ಮತ್ತು ಮೂರು ಅಂಬುಲೆನ್ಸ್ ವ್ಯವಸ್ಥೆ ಮಾಡಲಾಗುವುದು. ಸಾಂಕ್ರಮಿಕ ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಕರಪತ್ರ ಮತ್ತು ಭಿತ್ತಿಪತ್ರ ಮೂಲಕ ಪ್ರಚಾರ ಕೈಗೊಳ್ಳಲಾಗುವುದು, ತಾತ್ಕಾಲಿಕವಾಗಿ ನಾಲ್ಕು ಕಡೆ ಪ್ರಥಮ ಚಿಕಿತ್ಸಾ ಕೇಂದ್ರಗಳನ್ನು ತೆರೆದು 20 ಜನ ಡಾಕ್ಟರ್, 2 ಮೊಬೈಲ್ ವ್ಯಾನ್ ಹಾಗೂ ಅಗತ್ಯ ಸಿಬ್ಬಂದಿ ನಿಯೋಜನೆಗೆ ಸೂಚನೆ ನೀಡಲಾಗಿದೆ.

ರಕ್ಷಣೆ ಮತ್ತು ಬಂದೋಬಸ್ತ್:

   ಮಾ. 12 ರಂದು ಜರುಗುವ ರಥೋತ್ಸವದಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, 1200ಕ್ಕಿಂತ ಹೆಚ್ಚು ರಕ್ಷಣಾ ಸಿಬ್ಬಂದಿ, 100 ಜನ ಮಫ್ತಿ ಪೊಲೀಸರನ್ನು ನಿಯೋಜಿಸುವುದು. ಕಳ್ಳತನ ಮತ್ತು ತಪ್ಪಿಸಿಕೊಂಡ ಮಕ್ಕಳ ಬಗ್ಗೆ ತುರ್ತು ಕ್ರಮಕೈಗೊಳ್ಳಲು ಪ್ರಮುಖ ಸ್ಥಳಗಳಲ್ಲಿ ಕೌಂಟರ್ ವ್ಯವಸ್ಥೆ ಮಾಡುವುದು. ಜಾತ್ರೆಗೆ ವಿವಿಧ ಮಾರ್ಗಗಳಿಂದ ಬರುವ ಮಾರ್ಗಗಳಲ್ಲಿ 7 ಕಡೆ ಚೆಕ್‍ಪೋಸ್ಟ್‍ಗಳನ್ನು ನಿರ್ಮಿಸಿ ಪ್ರಾಣಿ ಬಲಿ ತಡೆಗಟ್ಟಲು ಅಗತ್ಯ ವ್ಯವಸ್ಥೆ ಕೈಗೊಳ್ಳಲಾಗುವುದು.

ಬಸ್ ಸೌಕರ್ಯ :

   ಜಾತ್ರೆಗೆ ಆಗಮಿಸುವ ಭಕ್ತಾಧಿಗಳಿಗೆ ಅನುಕೂಲವಾಗುವಂತೆ ಮಾ.5 ರಿಂದ 16 ರವರೆಗೆ ಕೆಎಸ್‍ಆರ್‍ಟಿಸಿ ಬಸ್‍ಗಳ ವ್ಯವಸ್ಥೆ ಕಲ್ಪಿಸಲಾಗುವುದು. ಚಿತ್ರದುರ್ಗ ದಿಂದ ನಾಯಕನಹಟ್ಟಿಗೆ (ಹಾಯ್ಕಲ್ ಮೂಲಕ) 20 ಬಸ್‍ಗಳು, ಚಿತ್ರದುರ್ಗ ದಿಂದ ನಾಯಕನಹಟ್ಟಿಗೆ (ಮುಸ್ಟೂರು ಮೂಲಕ)20 ಬಸ್‍ಗಳು, ದಾವಣಗೆರೆಯಿಂದ ನಾಯಕನಹಟ್ಟಿಗೆ 20 ಬಸ್‍ಗಳು, ಹಿರಿಯೂರಿನಿಂದ ನಾಯಕನಹಟ್ಟಿಗೆ 10, ಚಳ್ಳಕೆರೆಯಿಂದ ನಾಯಕನಹಟ್ಟಿ 20, ಬಳ್ಳಾರಿಯಿಂದ ನಾಯಕನಹಟ್ಟಿ (ತಳಕು ಮೂಲಕ) 10, ಮೊಳಕಾಲ್ಮುರಿನಿಂದ ನಾಯಕನಹಟ್ಟಿ 10 ಬಸ್ ವ್ಯವಸ್ಥೆ ಕಲ್ಪಿಸುವ ರೀತಿ ಯೋಜಿಸಲಾಗಿದೆ.

   ಪ್ರಯಾಣಿಕರಿಗೆ ಬಸ್ ನಿಲ್ದಾಣದಲ್ಲಿ ಬೆಳಕು, ನೆರಳು, ನೀರು ಕಲ್ಪಿಸುವುದು, ಧ್ವನಿವರ್ಧಕ ಮೂಲಕ ಪ್ರಯಾಣಿಕರಿಗೆ ಬಸ್ ಮಾರ್ಗಗಳ ಬಗ್ಗೆ ಸೂಚನೆ ನೀಡುವುದು. ಜೊತೆಗೆ ಪ್ರಥಮ ಚಿಕಿತ್ಸಾ ವ್ಯವಸ್ಥೆ ಕಲ್ಪಿಸುವುದು, ಅಲ್ಲದೆ ಬಸ್‍ನಿಲ್ದಾಣದಿಂದ ದೇವಸ್ಥಾನದ ವರೆಗೆ ವಿದ್ಯುತ್ ದೀಪಗಳ ವ್ಯವಸ್ಥೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ವಿದ್ಯುತ್ ದೀಪ ವ್ಯವಸ್ಥೆ:

   ಜಾತ್ರೆಯ ದಿನಗಳಲ್ಲಿ ಗ್ರಾಮದಲ್ಲಿನ ಮತ್ತು ಸುತ್ತಮುತ್ತಲಿನ ನೀರೊದಗಿಸುವ ಖಾಸಗಿಯವರ ಬೋರ್‍ವೆಲ್‍ಗಳಿಗೆ ಯಾವುದೇ ಕಾರಣಕ್ಕೂ ವಿದ್ಯುತ್ ನಿಲುಗಡೆಯಾಗದಂತೆ ಮತ್ತು ವೋಲ್ಟೇಜ್ ಕಡಿಮೆಯಾಗದಂತೆ ವ್ಯವಸ್ಥೆಗೊಳಿಸುವುದು. ಸಮರ್ಪಕ ವಿದ್ಯುತ್ ಪೂರೈಕೆ ಮಾಡುವ ಸಲುವಾಗಿ ಹೆಚ್ಚುವರಿಯಾಗಿ 2 ಟ್ರಾನ್ಸ್ ಫಾರ್ಮರ್ ಸ್ಥಳದಲ್ಲಿ ಮೀಸಲು ಇಟ್ಟುಕೊಳ್ಳುವಂತೆ ಬೆಸ್ಕಾಂ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

   ಜನಸಂದಣಿ ನಿಯಂತ್ರಣ ಹಾಗೂ ಬ್ಯಾರಿಕೇಡಿಂಗ್ ವ್ಯವಸ್ಥೆ: ದೇವಸ್ಥಾನದ ಹೊರಮಠದ ಹತ್ತಿರ ಮತ್ತು ಒಳಮಠದ ದೇವಸ್ಥಾನಗಳಲ್ಲೂ ಭಕ್ತಾಧಿಗಳು ಸ್ವಾಮಿಯ ದರ್ಶನ ಪಡೆಯಲು ಸರದಿ ವ್ಯವಸ್ಥೆ ಜಾರಿಗೊಳಿಸುವುದು ಮತ್ತು ಅವರಿಗೆ ನೀರಿನ ಮತ್ತು ನೆರಳಿನ ವ್ಯವಸ್ಥೆ ಕೈಗೊಳ್ಳಲು ಕ್ರಮ ವಹಿಸಲಾಗಿದೆ.

ಮದ್ಯಪಾನ ನಿಷೇಧ:

   ಜಾತ್ರೆಯ ಆವರಣದಿಂದ ಮೂರು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಮಾರ್ಚ್ 11,12, 13 ಮತ್ತು 16 ರಂದು ಒಟ್ಟು ನಾಲ್ಕು ದಿನಗಳ ಕಾಲ ಮದ್ಯ ಮಾರಾಟ ನಿಷೇಧಿಸಲಾಗುವುದು. ಕಾನೂನು ಸುವ್ಯವಸ್ಥೆ ದೃಷ್ಠಿಯಿಂದ ದೇವಸ್ಥಾನದ ಆವರಣ ಸೇರಿದಂತೆ ಸುತ್ತಲೂ 1 ಕಿ.ಮೀ ದೂರದಲ್ಲಿ ಮಾಂಸಹಾರವನ್ನು ನಿಷೇಧಿಸಲು ತೀರ್ಮಾನಿಸಲಾಗಿದೆ. ಪ್ರಾಣಿ ಬಲಿ ನಿಷೇಧ ಪ್ರಚಾರಕ್ಕಾಗಿ ಅಗತ್ಯವಾಗಿ ಬೇಕಾದ ಕರಪತ್ರ, ಬ್ಯಾನರ್‍ಗಳನ್ನು ವ್ಯವಸ್ಥೆಗೊಳಿಸಲು ಸೂಚನೆ ನೀಡಲಾಗಿದೆ.

ಕರ ವಸೂಲಿ:

    ಜಾತ್ರೆಯಲ್ಲಿ ಹಾಕುವ ಅಂಗಡಿಗಳು, ಹೋಟಲ್‍ಗಳು ಮತ್ತು ಇನ್ನಿತರ ಸೌಲಭ್ಯಗಳಿಗಾಗಿ ಒಂದು ವ್ಯವಸ್ಥಿತ ರೀತಿಯಲ್ಲಿ ಇರುವಂತೆ ಲೇಔಟ್ ನಕ್ಷೆಯನ್ನು ತಯಾರಿಸಲು ಪಟ್ಟಣ ಪಂಚಾಯಿತಿ ನಾಯಕನಹಟ್ಟಿ, ಆರೋಗ್ಯ ಅಧಿಕಾರಿಗಳು, ಸಹಾಯಕ ಕಾರ್ಯಪಾಲಕ ಅಭಿಯಂತರರು ಜಿಲ್ಲಾ ಪಂಚಾಯಿತಿ, ಲೋಕೋಪಯೋಗಿ ಇಲಾಖೆ ಅವರು ಯೋಜನೆ ರೂಪಿಸಲು ಸೂಚನೆ ನೀಡಲಾಗಿದೆ. ಲೇಔಟ್ ನಕ್ಷೆಯಲ್ಲಿ ಸಂಖ್ಯೆಗಳನ್ನು ನೀಡುವ ಮೂಲಕ ಅಂಗಡಿಗಳನ್ನು ಇಡಲು ಹಾಗೂ ಅಂಗಡಿ ಮಾಲೀಕರಿಂದ ನಿಗದಿತ ಶುಲ್ಕ ವಸೂಲಿ ಮಾಡಿ ಪರವಾನಗಿ ನೀಡುವುದು, ಕರ ವಸೂಲಿಯನ್ನು ಪಟ್ಟಣ ಪಂಚಾಯಿತಿ ನಾಯಕನಹಟ್ಟಿ ಇವರು ವಸೂಲಿ ಮಾಡಿ, ಪಟ್ಟಣ ಪಂಚಾಯಿತಿ ನಿಧಿಗೆ ಜಮಾ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

   ಹೊರಮಠಕ್ಕೆ ಬರುವ ಹಾಗೂ ಒಳಮಠಕ್ಕೆ ಹೋಗುವ ರಸ್ತೆಗಳಲ್ಲಿ ವಿಶಾಲವಾದ ರಸ್ತೆಗಾಗಿ ಜಾಗವಿರಿಸಿ ಶಿಸ್ತು ಬದ್ಧವಾಗ ಅಂಗಡಿ ಜೋಡಣೆಯನ್ನು ಕ್ರಮಬದ್ಧವಾಗಿ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಕೈಗೊಳ್ಳಬೇಕು. ಒಟ್ಟಾರೆ ಈ ಬಾರಿಯ ಜಾತ್ರಾ ಮಹೋತ್ಸವವನ್ನು ವಿಜೃಂಭಣೆಯಿಂದ, ಭಕ್ತಾದಿಗಳಿಗೆ ಅನುಕೂಲವಾಗುವಂತೆ ವ್ಯವಸ್ಥೆಗಳನ್ನು ಕೈಗೊಂಡು ಯಶಸ್ವಿಗೊಳಿಸಲು ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ. ಜಾತ್ರೆಯ ಯಶಸ್ವಿಗೆ ವಿವಿಧ ಇಲಾಖೆಗಳು, ಜನಪ್ರತಿನಿಧಿಗಳು, ಗಣ್ಯರು, ಹಾಗೂ ಸಾರ್ವಜನಿಕ ಸಹಕಾರ ಅಗತ್ಯವಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link