ದಾವಣಗೆರೆ
ನಾವು ಯಾವುದೇ ಕಾರಣಕ್ಕೂ ಮೈತ್ರಿ ಧರ್ಮ ಮುರಿಯಲ್ಲ. ಪಂಚಮಸಾಲಿ ಸಮಾಜಬಾಂಧವರು ಬಿಜೆಪಿ ಶಾಸಕ ಮುರುಗೇಶ್ ನಿರಾಣಿ ಹೇಳಿಕೆಗೆ ಕಿವಿಗೊಡದೇ, ಮೈತ್ರಿ ಅಭ್ಯರ್ಥಿ ಹೆಚ್.ಬಿ.ಮಂಜಪ್ಪನವರನ್ನು ಬೆಂಬಲಿಸಬೇಕೆಂದು ಹರಿಹರ ಮಾಜಿ ಶಾಸಕ, ಜೆಡಿಎಸ್ ಮುಖಂಡ ಹೆಚ್.ಎಸ್.ಶಿವಶಂಕರ್ ಕರೆ ನೀಡಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್ ಅವರೊಂದಿಗೆ ಸಂಬಂಧ ಬೆಳೆಸಿರುವ ಶಾಸಕ ಮುರುಗೇಶ್ ನಿರಾಣಿ ಪಂಚಮಸಾಲಿ ಮತದಾರರಿರುವ ಊರುಗಳಿಗೆ ಭೇಟಿ ನೀಡಿ, ನಾನಾಗಲೇ ಶಿವಶಂಕರ್ ಹಾಗೂ ಅರಸೀಕೆರೆ ಕೊಟ್ರೇಶ್ ಜೊತೆಯಲ್ಲಿ ಮಾತನಾಡಿದ್ದು, ಅವರು ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂಬುದಾಗಿ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ . ನಾವು ಯಾವುದೇ ಕಾರಣಕ್ಕೂ ಮೈತ್ರಿ ಧರ್ಮ ಮುರಿಯಲ್ಲ. ಆದ್ದರಿಂದ ಸಮಾಜ ಬಾಂಧವರು ಮುರುಗೇಶ್ ನಿರಾಣಿಯ ಮಾತಿಗೆ ಕಿವಿಗೊಡದೇ, ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.
ನಾವ್ಯಾರು ಸಹ ಮುರುಗೇಶ್ ನಿರಾಣಿ ಅವರೊಂದಿಗೆ ಚರ್ಚಿಸಿಲ್ಲ. ಅಲ್ಲದೇ, ಅವರು ನಮ್ಮನ್ನು ಸಂಪರ್ಕಿಸಿಲ್ಲ. ಜಿಲ್ಲೆಯಲ್ಲಿ ಒಂದೂವರೆ ಲಕ್ಷಕ್ಕೂ ಅಧಿಕ ಪಂಚಮಸಾಲಿ ಮತಗಳಿದ್ದು, ಈ ಕ್ಷೇತ್ರದಲ್ಲಿ ನಾವೇ ನಿರ್ಣಾಯಕರಾಗಿದ್ದೇವೆ. ಆದ್ದರಿಂದ ಬಿಜೆಪಿಯವರು ಇಲ್ಲಸಲ್ಲದನ್ನು ಹೇಳಿ, ಸಮಾಜ ಬಾಂಧವರಲ್ಲಿ ಗೊಂದಲ ಸೃಷ್ಟಿಸುತ್ತಿದ್ದು, ಯಾರೂ ಆ ಸುಳ್ಳು ವದಂತಿಗೆ ಕಿವಿಗೊಡಬೇಡಿ ಎಂದು ಕಿವಿಮಾತು ಹೇಳಿದರು.
ಪಂಚಮಸಾಲಿ ನಾಯಕತ್ವದಲ್ಲಿ ಜಿಲ್ಲೆಯಲ್ಲಿ ಗಾಂಜೀವೀರಪ್ಪ, ಜೆ.ಎಚ್.ಪಟೇಲ್, ಎಚ್.ಶಿವಪ್ಪ ಆಡಳಿತ ನಡೆಸಿದ್ದಾರೆ. ಇದೀಗ ಎಲ್ಲೋ ಒಂದು ಕಡೆ ಅದರ ಜವಾಬ್ದಾರಿ ನನ್ನ ಮೇಲಿದ್ದು, ಸಮಾಜದ ಏಳಿಗೆಗಾಗಿ ಶ್ರಮಿಸಲು ತಾವು ಬದ್ಧರಿದ್ದೇವೆ. ಪಕ್ಷದ ಜೊತೆ ಸಮಾಜದ ಹಿತ ಕಾಯಲು ಕಾಂಗ್ರೆಸ್ಗೆ ಬೆಂಬಲಿಸಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದರು.
ಜೆಡಿಎಸ್ ಮುಖಂಡ ಅರಸೀಕೆರೆ ಎನ್. ಕೊಟ್ರೇಶ್ ಮಾತನಾಡಿ, ನಮ್ಮ ಮುಖಂಡ ಎಚ್.ಎಸ್. ಶಿವಶಂಕರ್ ಅವರ ಮುಖಂಡತ್ವದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಸಂಪೂರ್ಣ ಪ್ರಚಾರದಲ್ಲಿ ತೊಡಗಿದ್ದೇವೆ. ಸಮಾಜದ ಮುಖಂಡರು ಸಮಾಜದ ಏಳಿಗೆಗೆ ಸಂಬಂಧಿಸಿದಂತೆ ಬಂದರೆ ಮಾತ್ರ ಮಾತು ಕೇಳುತ್ತೇವೆ. ಆದರೆ, ರಾಜಕೀಯ ವಿಷಯಕ್ಕೆ ನಾವು ಬಗ್ಗುವುದಿಲ್ಲ ಎಂದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಂ.ಚಿದಾನಂದಪ್ಪ, ಪರಮೇಶ್ವರಗೌಡ್ರು, ಕಂಚಿಕೆರೆ ಕೆಂಚಪ್ಪ, ಓಂಕಾರಪ್ಪ, ಈಶ್ವರಪ್ಪ, ಯೋಗೀಶ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
