ರಸ್ತೆ ಗುಣಮಟ್ಟದ ಬಗ್ಗೆ ವೃಥಾ ಆರೋಪ

ತುರುವೇಕೆರೆ

    ದೊಡ್ಡೇನಹಳ್ಳಿಯಿಂದ ಹುಲ್ಲೇಕೆರೆಯವರೆಗೆ ನಿರ್ಮಾಣವಾಗಿರುವ ಡಾಂಬರು ರಸ್ತೆ ಉತ್ತಮ ಗುಣಮಟ್ಟದಿಂದ ಕೂಡಿದ್ದು, ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಗ್ರಾಮಸ್ಥರುಗಳ ಪರವಾಗಿ ಅಭಿನಂದಿಸುವುದಾಗಿ ಬಿಜೆಪಿ ಮುಖಂಡ ರಾಮಡಿಹಳ್ಳಿ ಕಿರಣ್ ತಿಳಿಸಿದರು.

     ಅವರು ತಾಲ್ಲೂಕಿನ ದೊಡ್ಡೇನಹಳ್ಳಿಯಿಂದ ಹುಲ್ಲೇಕೆರೆಯವರೆಗೆ ನಿರ್ಮಾಣವಾಗಿರುವ ರಸ್ತೆ ಮಾರ್ಗ ಮಧ್ಯೆ ಮಾಚೇನಹಳ್ಳಿ ಸಮೀಪ ರಸ್ತೆ ಅಕ್ಕಪಕ್ಕದ ಗ್ರಾಮಸ್ಥರುಗಳೊಂದಿಗೆ ರಸ್ತೆ ಗುಣಮಟ್ಟ ಕುರಿತು ಪತ್ರಕರ್ತರೊಂದಿಗೆ ಮಾತನಾಡಿದರು. ಕಳೆದ ಹದಿನೈದು ವರ್ಷಗಳಿಂದ ಈ ಭಾಗದ ರಸ್ತೆ ಕಿತ್ತು ಆಳುದ್ದ ಗುಂಡಿ ಬಿದ್ದಿದ್ದರೂ ಜನಪ್ರತಿನಿಧಿಗಳಾದವರು ದಂಡಿನಶಿವರ ಭಾಗಕ್ಕೂ ನಮಗೂ ಸಂಬಂಧವಿಲ್ಲದವರಂತೆ ವರ್ತಿಸುತ್ತಿದ್ದರು. ಮಸಾಲ ಜಯರಾಮ್ ಶಾಸಕರಾದ ನಂತರ 1.50 ಕೋಟಿ ವೆಚ್ಚದಲ್ಲಿ ಸುಸಜ್ಜಿತ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಆದರೆ ಅವರ ಏಳಿಗೆ ಸಹಿಸದ ಕಿಡಿಗೇಡಿಗಳು ರಸ್ತೆ ಗುಣಮಟ್ಟದ ಬಗ್ಗೆ ಸ್ಥಳೀಯ ಗ್ರಾಮಸ್ಥರುಗಳನ್ನು ಛೂ ಬಿಟ್ಟು ಬೇರೆಯೂರಿನ ಗ್ರಾಮಸ್ಥರೊಡಗೂಡಿ ರಸ್ತೆ ಕಳಪೆಯಾಗಿದೆ ಎಂದು ಪತ್ರಿಕಾ ಹೇಳಿಕೆ ನೀಡುತ್ತಿರುವುದು ಹಾಸ್ಯಾಸ್ಪದ.

      ರಸ್ತೆ ನಿರ್ಮಾಣ ಸಂದರ್ಭದಲ್ಲಿ ಖುದ್ದು ನಾವೇ ನಿಂತು ಅಂದಾಜು ಪಟ್ಟಿಯನ್ನು ಕೈಯ್ಯಲಿಡಿದು ಗುತ್ತಿಗೆದಾರರಿಂದ ಕೆಲಸವನ್ನು ಪಡೆದಿದ್ದೇವೆ. ರಸ್ತೆ ಗುಣಮಟ್ಟದ ಕುರಿತು ಮಾತನಾಡುವ ಮಂಚೇನಹಳ್ಳಿ ಕೃಷ್ಣಮೂರ್ತಿ, ರಸ್ತೆ ನಿರ್ಮಾಣ ಹಂತದಲ್ಲಿ ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದರೂ, ರಸ್ತೆ ನಿರ್ಮಾಣದ ಬಗ್ಗೆ ಚಕಾರವೆತ್ತದೆ ಕಾಮಗಾರಿ ಮುಗಿದು ಬಿಲ್ ಆಗುವ ಹಂತದಲ್ಲಿ ಗುಣಮಟ್ಟದ ಬಗ್ಗೆ ಪ್ರಶ್ನಿಸುತ್ತಿರುವುದು ಬ್ಲಾಕ್‍ಮೇಲ್ ತಂತ್ರವಿರಬಹುದೆಂಬ ಸಂದೇಹ ಮೂಡುತ್ತಿದೆ ಎಂದರು.

     ಬಿಜೆಪಿ ಮುಖಂಡ ಡೊಂಕಿಹಳ್ಳಿ ಹುಚ್ಚೇಗೌಡ ಮಾತನಾಡಿ, ಮಂಚೇನಹಳ್ಳಿ ಕೃಷ್ಣಮೂರ್ತಿ ಹಾಗೂ ಗೊಪ್ಪೇನಹಳ್ಳಿ ಅಶೋಕ್ ಇವರುಗಳು ಅರ್ಜಿ ಮೇಸ್ಟರುಗಳಾಗಿದ್ದಾರೆ. ಆರ್.ಟಿ.ಐ. ಅರ್ಜಿಗಳನ್ನು ಹಾಕಿ ಸರ್ಕಾರಿ ಅಧಿಕಾರಿಗಳಿಗೆ ಸುಖಾ ಸುಮ್ಮನೆ ತೊಂದರೆ ಕೊಡುವುದಲ್ಲದೆ, ಗುತ್ತಿಗೆದಾರರುಗಳನ್ನು ಹಣಕ್ಕಾಗಿ ಬ್ಲಾಕ್‍ಮೈಲ್ ಮಾಡುವ ಪ್ರವೃತ್ತಿ ಮೈಗೂಡಿಸಿಕೊಂಡಿದ್ದಾರೆ. ಮಂಚೇನಹಳ್ಳಿ ಕೃಷ್ಣಮೂರ್ತಿ ಎನ್ನುವ ವ್ಯಕ್ತಿ ಪ್ರಾಂಶುಪಾಲರೊಬ್ಬರಿಗೆ ಹಣಕ್ಕಾಗಿ ಬೇಡಿಕೆಯಿಟ್ಟಿರುವ ಆಡಿಯೋ ನಮ್ಮ ಬಳಿಯಿದ್ದು, ಇಂತಹ ವ್ಯಕ್ತಿಗಳಿಂದ ರಸ್ತೆ ಗುಣಮಟ್ಟದ ಬಗ್ಗೆ ಹೇಳಿಸಿಕೊಳ್ಳುವ ಅವಶ್ಯಕತೆಯಿಲ್ಲ ಎಂದರು.

     ಈ ಸಂದರ್ಭದಲ್ಲಿ ಗ್ರಾಮಸ್ಥರುಗಳಾದ ಶಶಿಧರ್, ರವಿಕುಮಾರ್, ಸಂಗಮೇಶ್, ಮಧು, ಆನಂದ್, ಗುರುಪ್ರಸಾದ್, ಲೋಕೇಶ್, ಚಿಕ್ಕಣ್ಣ, ಜನಾರ್ಧನ್, ಸಾಗರ್ ಸೇರಿದಂತೆ ರಾಮಡಿಹಳ್ಳಿ ಹಾಗೂ ಮಂಚೇನಹಳ್ಳಿಯ ಅನೇಕ ಗ್ರಾಮಸ್ಥರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link