ಪಾದಚಾರಿಗಳಿಗೆ ಕಿರಿಕ್ ಆಗದಂತೆ ವ್ಯಾಪಾರ ಮಾಡಿ

ಚಿತ್ರದುರ್ಗ

   ಬೀದಿ ಬದಿ ವ್ಯಾಪಾರಿಗಳು ಸಾರ್ವಜನಿಕರಿಗೆ ತೊಂದರೆಯಾಗದಂತೆ ವ್ಯವಸ್ಥಿತವಾಗಿ ವ್ಯಾಪಾರ ಮಾಡಬೇಕು. ನಿರಂತರವಾಗಿ ಸ್ವಚ್ಛತೆ ಕಾಪಾಡುವುದರ ಜೊತೆಗೆ ನಗರಸಭೆಯ ವಾಹನಗಳಲ್ಲಿಯೇ ಕಸ ಹಾಕಬೇಕು ಎಂದು ನಗರಸಭೆ ಪೌರಾಯುಕ್ತ ಜೆ.ಟಿ.ಹನುಮಂತರಾಜು ಹೇಳಿದರು.

    ನಗರಸಭಾ ಕಾರ್ಯಾಲಯದ ವತಿಯಿಂದ ದೀನದಯಾಳ್ ಅಂತ್ಯೋದಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆಯಡಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ಕಲ್ಯಾಣ ಮಂಟಪದಲ್ಲಿ ಗುರುವಾರ ಬೀದಿ ಬದಿ ವ್ಯಾಪಾರಿಗಳಿಗೆ ಏರ್ಪಡಿಸಲಾಗಿದ್ದ ಸಾಮಥ್ರ್ಯಾಭಿವೃದ್ಧಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

   ಕೆಲವು ಬೀದಿ ಬದಿ ವ್ಯಾಪಾರಿಗಳು ರಸ್ತೆ ಮುಂಭಾಗದಲ್ಲಿ ವ್ಯಾಪಾರ ಮಾಡುವುದರಿಂದ ಸಾರ್ವಜನಿಕರಿಗೆ, ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. ವ್ಯಾಪಾರಸ್ಥರು ನಿಗದಿತ ಸ್ಥಳದಲ್ಲಿಯೇ ವ್ಯಾಪಾರ ಮಾಡಬೇಕು. ಬೀದಿ ಬದಿ ವ್ಯಾಪಾರಿಗಳಿಗೂ ಕೆಲವು ನಿಯಮಗಳಿದ್ದು, ನೀವೂ ಕೂಡ ಆ ನಿಯಮಗಳನ್ನು ಪಾಲಿಸಬೇಕು. ನಗರದ ಗಾಂಧಿವೃತ್ತ, ಸಂತೆಹೊಂಡದ ಹತ್ತಿರ ಸಂಚಾರಿ ನಿಯಮಗಳನ್ನು ಪಾಲಿಸಬೇಕು ಎಂದರು.

   ವ್ಯಾಪಾರ ಮಾಡುವ ಸ್ಥಳ ಸ್ವಚ್ಛತೆಯಿಂದ ಕೂಡಿದ್ದರೆ ಗ್ರಾಹಕರು ಆಕರ್ಷಿತರಾಗುವದರ ಜೊತೆಗೆ ಹೆಚ್ಚಿನ ವ್ಯವಹಾರ ಆಗುತ್ತದೆ. ಬೀದಿ ವ್ಯಾಪಾರಿಗಳು ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಬಳಕೆ ಮಾಡಬಾರದು. ಪ್ಲಾಸ್ಟಿಕ್ ಬಳಕೆಯನ್ನು ಈಗಾಗಲೇ ನಿಷೇಧಿಸಲಾಗಿದ್ದು, ಪ್ಲಾಸ್ಟಿಕ್ ಬದಲು ಬಟ್ಟೆಚೀಲ ಬಳಸುವುದರಿಂದ ಉತ್ತಮ ಪರಿಸರ ನಿರ್ಮಾಣವಾಗುತ್ತದೆ. ನಗರಸಭೆಯಿಂದ ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿಯನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಯಾವುದೇ ಕಾರಣಕ್ಕೂ ಮಧ್ಯವರ್ತಿಗಳಿಗೆ ಗುರುತಿನ ಚೀಟಿಗಾಗಿ ಹಣ ನೀಡಬಾರದು ಎಂದು ಜೆ.ಟಿ. ಹನುಮಂತರಾಜು ಕಿವಿಮಾತು ಹೇಳಿದರು.

    ಕೌಶಲ ಮತ್ತು ಜೀವನೋಪಾಯ ಇಲಾಖೆಯ ಅಭಿಯಾನ ವ್ಯವಸ್ಥಾಪಕ ಅತೀಕ್ ರೆಹಮಾನ್ ಮಾತನಾಡಿ, ನಗರ ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪಾರ ಮಾಡುವವರನ್ನು ಸಮೀಕ್ಷೆ ಮೂಲಕ ಗುರುತಿಸಿ, ವ್ಯಾಪಾರ ಸಮಿತಿ ರಚನೆ ಮಾಡಿ 10 ಮಂದಿ ಸದಸ್ಯರನ್ನು ಸಮಿತಿಗೆ ಆಯ್ಕೆಮಾಡಲಾಗಿದೆ. ನಗರದಲ್ಲಿ 909 ವ್ಯಾಪಾರಿಗಳನ್ನು ಗುರುತಿಸಿ ಈಗಾಗಲೇ ಗುರುತಿನ ಚೀಟಿಗಳನ್ನು ವಿತರಿಸಲಾಗಿದೆ. ಬಾಕಿ ಉಳಿದವರಿಗೂ ಹಂತ ಹಂತವಾಗಿ ಗುರುತಿನ ಚೀಟಿ ಹಾಗೂ ಪ್ರಮಾಣಪತ್ರಗಳನ್ನು ವಿತರಿಸಲಾಗುವುದು ಎಂದರು.

     ನಗರಸಭೆ ಪರಿಸರ ಇಂಜಿನಿಯರ್ ಜಾಫರ್ ಮಾತನಾಡಿ, ಬೀದಿ ಬದಿ ವ್ಯಾಪಾರಿಗಳು ತಮ್ಮ ಜೀವನೋಪಯೋಗಕ್ಕಾಗಿ ಮಾತ್ರವಲ್ಲದೇ ಸಾರ್ವಜನಿಕರ ಸಹಾಯಕ್ಕಾಗಿ ವ್ಯಾಪಾರ ವೃತ್ತಿಯಲ್ಲಿ ತೊಡಗಿದ್ದಾರೆ. ವ್ಯಾಪಾರಸ್ಥರು ಗುಣಮಟ್ಟದ ತರಕಾರಿ ಮತ್ತು ಹಣ್ಣುಗಳನ್ನು ಮಾರಾಟ ಮಾಡಬೇಕು. ಬೀದಿ ಬದಿ ವ್ಯಾಪಾರಿಗಳು ಸ್ವಚ್ಛತೆಯಿಂದ ಕೂಡಿರುವ ಸ್ಥಳದಲ್ಲಿ ವ್ಯಾಪಾರ ಮಾಡಬೇಕು. ಜೊತೆಗೆ ತಾವುಗಳು ಆರೋಗ್ಯದ ಕಾಳಜಿಗೆ ಗಮನ ನೀಡಬೇಕು ಎಂದರು.

    ಸರ್ಕಾರದ ವಿವಿಧ ಯೋಜನೆಗಳನ್ನು ವ್ಯಾಪಾರಿಗಳು ಸದುಪಯೋಗ ಪಡೆದು ಉತ್ತಮವಾದ ಮಾರಾಟ ಮಾಳಿಗೆಯನ್ನು ನಿರ್ಮಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಬೀದಿ ಬದಿ ವ್ಯಾಪಾರ ಸಮಿತಿ ಸದಸ್ಯ ಮಾರಪ್ಪ, ತರಬೇತಿ ಕಾರ್ಯಾಗಾರದಿಂದ ಬೀದಿ ಬದಿ ವ್ಯಾಪಾರಿಗಳಿಗೆ ಆಗುವ ತೊಂದರೆಗಳನ್ನು ನಿವಾರಿಸಿಕೊಳ್ಳಲು ಸಹಾಯಕವಾಗುತ್ತದೆ. ನಗರಸಭೆಯು ಬೀದಿ ಬದಿ ವ್ಯಾಪಾರಿಗಳನ್ನು ಗುರುತಿಸಿ, ಗುರುತಿನ ಚೀಟಿಗಳನ್ನು ನೀಡಿದೆ.

     ಎಲ್ಲ ಬೀದಿ ಬದಿ ವ್ಯಾಪಾರಿಗಳು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಕೆಲವರು ವ್ಯಾಪಾರ ಮಾಡದೇ ನಗರಸಭೆಯಿಂದ ಗುರುತಿನ ಚೀಟಿಗಳನ್ನು ಪಡೆದಿದ್ದಾರೆ. ಇದನ್ನು ತಡೆದು ಅರ್ಹ ಫಲಾನುಭವಿಗಳಿಗೆ ಗುರುತಿನ ಚೀಟಿ ಸಿಗುವಂತಾಗಬೇಕು. ಇನ್ನೂ ಸಾಕಷ್ಟು ಮಂದಿ ಅರ್ಹ ಫಲಾನುಭವಿಗಳಿಗೆ ಗುರುತಿನ ಚೀಟಿಗಳು ಬಂದಿಲ್ಲ. ಎಲ್ಲರೂ ಸಂಘಟನೆಯ ಮೂಲಕ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದರು.

    ಕಾರ್ಯಕ್ರಮದಲ್ಲಿ ನಗರಸಭೆಯ ಕಚೇರಿ ವ್ಯವಸ್ಥಾಪಕಿ ಮಂಜುಳಮ್ಮ, ಕೌಶಲಾಭಿವೃದ್ಧಿ ಕೇಂದ್ರದ ಸಹಾಯಕ ನಿರ್ದೇಶಕ ರವಿ, ಬೀದಿ ಬದಿ ವ್ಯಾಪಾರ ಸಮಿತಿ ಸದಸ್ಯರಾದ ಎನ್.ತಿಪ್ಪೇಸ್ವಾಮಿ, ಮೀನಾಕ್ಷಮ್ಮ, ಮುತ್ತಮ್ಮ, ಮಹದೇವಮ್ಮ ಉಪಸ್ಥಿತಿರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link