ಚಿತ್ರದುರ್ಗ:
ಕೋವಿಡ್-19 ತಡೆಗೆ ದೇಶದಾದ್ಯಂತ ಲಾಕ್ಡೌನ್ ಜಾರಿಯಲ್ಲಿದ್ದು, ಜನರು ಮನೆಯಲ್ಲಿಯೇ ಇರುವ ಸನ್ನಿವೇಶ ನಿರ್ಮಾಣವಾಗಿದೆ. ತಮ್ಮ ಅಗತ್ಯ ವಸ್ತುಗಳ ಖರೀದಿಗಾಗಿ ಜನರಿಗೆ ನಗದು ಹಣದ ಅವಶ್ಯಕತೆ ಇದ್ದು, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ (ಕರ್ನಾಟಕ ಗ್ರಾಮೀಣ ಬ್ಯಾಂಕ್) ಗ್ರಾಹಕರ ಮನೆ ಬಾಗಿಲಿಗೆ ಸಂಚಾರಿ ಎಟಿಎಂ ಸೇವೆ ನೀಡಲು ಮುಂದಾಗಿದೆ.
ಮೊಬೈಲ್ ಎಟಿಎಂ ವಾಹನ ಚಿತ್ರದುರ್ಗ ನಗರದ ಎಲ್ಲಾ ವಾರ್ಡ್ ಹಾಗೂ ಬಡಾವಣೆಗಳಲ್ಲಿ ಸಂಚರಿಸಲಿದೆ. ಗ್ರಾಹಕರ ಮನೆ ಬಾಗಿಲಿಗೆ ಬರುವ ಎಟಿಎಂ ವಾಹನದ ಸೌಲಭ್ಯವನ್ನು ಯಾವುದೇ ಬ್ಯಾಂಕಿನ ಎಟಿಎಂ ಕಾರ್ಡ್ ಬಳಸಿ ತಮ್ಮ ಖಾತೆಯಲ್ಲಿನ ಹಣವನ್ನು ಸುಲಭವಾಗಿ ಬಿಡಿಸಿಕೊಳ್ಳಬಹುದಾಗಿದೆ. ಎಟಿಎಂ ವಾಹನವು ಬೆಳಿಗ್ಗೆ 7.00 ರಿಂದ ಸಂಜೆ 6.00 ಗಂಟೆಯವರೆಗೆ ನಗರದ ವಿವಿಧೆಡೆ ಸಂಚಾರ ನಡೆಸಲಿದೆ.
ಸಂಚಾರಿ ಎಟಿಎಂ ಸೇವೆಯಿಂದಾಗಿ ಹೆಚ್ಚು ಜನರು ಸೇರುವುದನ್ನು ತಪ್ಪಿಸುವುದರ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಹಾಯಕವಾಗಿದೆ.
ಎಲ್ಲೆಲ್ಲಿ ಸಂಚಾರಿ ಎಟಿಎಂ ಸೇವೆ: ಕೋವಿಡ್-19 ಲಾಕ್ಡೌನ್ ದಿನಗಳಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಚಿತ್ರದುರ್ಗ ನಗರದಲ್ಲಿ ಗ್ರಾಹಕರಿಗೆ ದೈನಂದಿನ ಹಣದ ಅವಶ್ಯಕತೆ ಪೂರೈಸುವ ಉದ್ದೇಶದಿಂದ ಸಂಚಾರಿ ಎಟಿಎಂ ವಾಹನ ಸೌಲಭ್ಯ ಒದಗಿಸಲಾಗುತ್ತಿದೆ.
ಸಂಚಾರಿ ವಾಹನ ಸೌಲಭ್ಯ ದೊರೆಯುವ ಸಮಯ ಸ್ಥಳದ ವಿವರ ಇಂತಿದೆ. ಬೆಳಿಗ್ಗೆ 7 ರಿಂದ 8 ರವರೆಗೆ ಸರ್ಕಾರಿ ವಿಜ್ಞಾನ ಕಾಲೇಜು ಆವರಣ. ಬೆಳಿಗ್ಗೆ 8 ರಿಂದ 9 ರವರಗೆ ಹಳೇ ಮಾಧ್ಯಮಿಕ ಶಾಲಾ ಆವರಣ. 9 ರಿಂದ 10.30 ರವರೆಗೆ ಹೊಳಲ್ಕೆರೆ ರಸ್ತೆಯ ಮೋರ್ ಶಾಪ್ ಹತ್ತಿರ. 10.30 ರಿಂದ 12 ರವರೆಗೆ ಸಂತೆ ಹೊಂಡದ ವೃತ್ತ. ಪ್ರಸನ್ನ ಚಿತ್ರಮಂದಿರ. ಮಧ್ಯಾಹ್ನ 12 ರಿಂದ 1 ಗಂಟೆಯವರೆಗೆ ಎಪಿಎಂಸಿ ಮಾರುಕಟ್ಟೆ ಆವರಣ. 1.30 ರಿಂದ 3 ರವರೆಗೆ ಜೆಸಿಆರ್ ಹಾಗೂ ವಿ.ಪಿ. ಬಡಾವಣೆ. ಮಧ್ಯಾಹ್ನ 3 ರಿಂದ ಸಂಜೆ 4 ರವರೆಗೆ ಮೈಸೂರು ಬ್ಯಾಂಕ್ ವೃತ್ತ. 4 ರಿಂದ 5 ರವರೆಗೆ ಒನಕೆ ಓಬವ್ವ ಕ್ರೀಡಾಂಗಣ ಹತ್ತಿರ. 5 ರಿಂದ 6 ರವರೆಗೆ ಐಯುಡಿಪಿ ಬಡಾವಣೆಯಲ್ಲಿ ಸಂಚಾರಿ ಎಟಿಎಂ ಸಂಚರಿಸಲಿದ್ದು, ಗ್ರಾಹಕರು ಇದರ ಸೇವೆ ಪಡೆದುಕೊಳ್ಳಬೇಕು ಎಂದು ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಮಹದೇವಯ್ಯ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
