ತುರುವೇಕೆರೆ : ಮರಿಚಿಕೆಯಾದ ಚರಂಡಿ ಸ್ವಚ್ಚತೆ…!

ತುರುವೇಕೆರೆ:

     ಪಟ್ಟಣದ ಕೆಲವು ವಾರ್ಡ್‍ಗಳಲ್ಲಿ ಚರಂಡಿ ಸ್ವಚ್ಚಗೊಳಿಸದಿರುವುದರಿಂದ ರಸ್ತೆಗಳು ಕಸಕಡ್ಡಿಗಳಿಂದ ತುಂಬಿ ದುರ್ವಾಸನೆ ಬೀರುತ್ತಿರುವುದರಿಂದ ರಸ್ತೆಗಳಲ್ಲಿ ಓಡಾಡಲು ತೊಂದರೆಯಾಗುತ್ತಿದೆ ಎಂಬುದು ಕೆಲವು ನಾಗರೀಕರ ಆರೋಪವಾಗಿದೆ.

     ಪಟ್ಟಣದಲ್ಲಿ ಜನಸಂಖ್ಯೆ ಹೆಚ್ಚಳವಾದಂತೆ ಪಟ್ಟಣ ಬೆಳೆಯುತ್ತಿದೆ. ಪಟ್ಟಣ ಬೆಳೆದಂತೆಲ್ಲ ಸಮಸ್ಯೆಗಳು ಹೆಚ್ಚಳವಾಗುತ್ತಾ ಹೋಗುತ್ತದೆ. ರಸ್ತೆ, ಚರಂಡಿ. ವಿದ್ಯುಶ್ಚಕ್ತಿ, ನಲ್ಲಿ ನೀರಿನ ಸಂಪರ್ಕ ಇತ್ಯಾದಿ ಸೌಕರ್ಯಗಳನ್ನು ಪಟ್ಟಣ ಪಂಚಾಯಿತಿ ಒದಗಿಸಿಕೊಡಬೇಕಾಗುತ್ತದೆ. ಹಾಗೆಯೇ ಕಾರ್ಮಿಕರ ಸಂಖ್ಯೆಯನ್ನೂ ಹೆಚ್ಚಿಸಬೇಕಾಗುತ್ತದೆ.

     ಆದರೆ ಪಟ್ಟಣದಲ್ಲಿ ಕಾರ್ಮಿಕರ ಸಂಖ್ಯೆ ಕಡಿಮೆಯಿದ್ದು ನಾಗರೀಕರಿಗೆ ಮೂಲಸೌಕರ್ಯ ಒದಗಿಸುವಲ್ಲಿ ಪಟ್ಟಣ ಪಂಚಾಯಿತಿ ವಿಫಲಾವಾಗಿದೆ ಎಂಬ ದೂರುಗಳು ಸಾರ್ವಜನಿಕರಿಂದ ಚರ್ಚೆಗೆ ಗ್ರಾಸವಾಗಿದೆ. ವಾರಗಟ್ಟಲೆ ಪೌರ ಕಾರ್ಮಿಕರು ವಾರ್ಡ್‍ಗಳಿಗೆ ಭೇಟಿ ನೀಡದಿರುವುದರಿಂದ ಚರಂಡಿಗಳು ಕೊಳಚೆ ನೀರು ಹಾಗೂ ಕಸಕಡ್ಡಿಗಳಿಂದ ತುಂಬಿದ್ದು ದುರ್ನಾತ ಬಿರುತ್ತಿದೆ. ಚರಂಡಿ ಪಕ್ಕದಲ್ಲಿರುವ ಮರಗಿಡಗಳಿಂದ ಒಣಗಿ ಬಿದ್ದ ಎಲೆಗಳಿಂದ ಚರಂಡಿ ತುಂಬಿ ನಿಂತಿವೆ.

     ಇದರಿಂದ ವಾತಾವರಣ ಕಲುಷಿತಗೊಳ್ಳುವ ಜೊತೆಗೆ ನಾಗರೀಕರ ಅರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆಯಲ್ಲದೆ ಇತ್ತೀಚೆಗಂತೂ ಕೊರಾಲ ವೈರಸ್ ನಿಂದ ಭಯಭೀತರಾಗಿರುವ ಜನ ತಮ್ಮ ಆರೋಗ್ಯ ರಕ್ಷಣೆಗೆ ಮೂಗುಬಾಯಿ ಮುಚ್ಚಿಕೊಂಡು ಓಡಾಡುವಂತಾಗಿದೆ.

     ಪಟ್ಟಣದ ಸುಬ್ರಹ್ಮಣ್ಯ ನಗರದ 14 ನೇ ವಾರ್ಡ್‍ನಲ್ಲಿ ಅನೇಕ ದಿನಗಳಿಂದ ಚರಂಡಿ ಸ್ವಚ್ಚಗೊಳಿಸದೆ ಇರುವುದರಿಂದ ಚರಂಡಿ ಕಲ್ಮಷದಿಂದ ಕೂಡಿ ಕೆಟ್ಟ ವಾಸನೆ ಬರುತ್ತಿದ್ದು ನಾಗರೀಕರು ಓಡಾಡಲು ತೊಂದರೆಯಗಿದೆ ಎಂದು ವಾರ್ಡ್‍ನ ಸದಸ್ಯರು ದೂರಿದ್ದಾರೆ. ಚರಂಡಿ ತುಂಬಿ ವಾರಗಟ್ಟಲೆ ಕಳೆದಿದ್ದರೂ ಯಾವೊಬ್ಬ ಪೌರ ಕಾರ್ಮಿಕ ಇತ್ತ ತಲೆ ಹಾಕಿಲ್ಲ. ಚರಂಡಿ ಪಕ್ಕ ನಿವೇಶನದಲ್ಲಿ ಬೆಳೆದಿರುವ ತೇಗದ ಮರದ ಎಲೆಗಳು ಒಣಗಿ ಚರಂಡಿಯಲ್ಲಿ ಬಿದ್ದ ಪರಿಣಾಮ ಚರಂಡಿ ಕಸಕಡ್ಡಿಗಳಿಂದ ಆವೃತವಾಗಿದೆ.

    ಚರಂಡಿಗೆ ಹೊಂದಿಕೊಂಡಂತಿರುವ ಬೀದಿ ನಲ್ಲಿಯಲ್ಲಿ ಕೆಲವೇ ಗಂಟೆಗಳು ಮಾತ್ರ ಬಿಡುವ ನೀರನ್ನು ಹಿಡಿಯಲು ಬರುವ ಹೆಂಗಸರು ಮೂಗು ಮುಚ್ಚಿಕೊಂಡು ನೀರು ಹಿಡಿಯುವಂತ ಪರಿಸ್ಥಿತಿ ನಿರ್ಮಾಣವಾಗಿ ಎಲ್ಲಿ ತಮ್ಮ ಅರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದೋ ಎಂಬ ಭಯದ ನಡುವೆ ವಿಧಿಯಿಲ್ಲದೆ ನೀರು ಹಿಡಿಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಬಂದಿಸಿದ ಆರೋಗ್ಯಾಧಿಕಾರಿಗಳ ಗಮನಕ್ಕೆ ತಂದರೂ ಸಹಾ ಯಾವುದೇ ಪ್ರಯೋಜನವಾಗಿಲ್ಲ.

    ಜೊತೆಗೆ ಪಟ್ಟಣ ಪಂಚಾಯಿತಿ ಸದಸ್ಯರ ಚುನಾವಣೆ ನಡೆದು ತಿಂಗಳುಗಳೆ ಕಳೆದಿದ್ದರೂ ಸಹಾ ಅಧಿಕಾರದ ಗದ್ದುಗೆ ಇನ್ನೂ ಸದಸ್ಯರುಗಳಿಗೆ ಸಿಕ್ಕಿಲ್ಲ. ವಾರ್ಡ್‍ನಲ್ಲಿ ಕರ್ತವ್ಯ ನಿರ್ವಹಿಸುವ ಪೌರ ಕಾರ್ಮಿಕರನ್ನು ನಾಗರೀಕರು ಪ್ರಶ್ನಿಸಿದರೆ ಏನೇನೋ ಹೇಳಿ ನುಣುಚಿಕೊಳ್ಳುತ್ತಾರೆ.

    ವಾರ್ಡ್ ನಾಗರೀಕರಾದ ಸ್ವಾಮಿ ಮಾತನಾಡಿ ಅನೇಕ ದಿನಗಳಿಂದ ಚರಂಡಿ ಸ್ವಚ್ಚಗೊಳಿಸದೆ ಮೋರಿ ತುಂಬಿ ಕೆಟ್ಟವಾಸನೆ ಬರುತ್ತಿದೆ. ಇಲ್ಲಿರುವ ನಲ್ಲಿಯಲ್ಲಿ ನೀರು ಹಿಡಿಯಲು ಅದೆಷ್ಟೋ ಮಹಿಳೆಯರು ಮೂಗು ಮುಚ್ಚಿಕೊಂಡು ನೀರು ತೆಗೆದುಕೊಂಡು ಹೋಗುತ್ತಾರೆ. ಅವರ ಸ್ಥಿತಿಯನ್ನು ಕಂಡು ಕೆಲವೊಮ್ಮೆ ನಾನೇ ಮೋರಿ ಸ್ವಚ್ಚಗೊಳಿಸಿದ್ದೇನೆ. ಮನೆ ಕಂದಾಯ, ನೀರಿನ ಬಿಲ್ಲು ಪಾವತಿಸುವ ನಮಗೆ ಮೂಲಬೂತ ಸೌಲಬ್ಯ ಒದಗಿಸಿಕೊಡಬೇಕಾದ್ದು ಅವರ ಕರ್ತವ್ಯ ಎಂದು ಖಾರವಾಗಿ ಪ್ರಶ್ನಿಸಿದರು.

    ವಾರ್ಡ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೌರ ಕಾರ್ಮಿಕ ತಿಮ್ಮಯ್ಯ ಎಂಬುವರನ್ನು ಪ್ರಶ್ನಿಸಲಾಗಿ ಅಧಿಕಾರಿಗಳು ನನ್ನನ್ನು ಬೇರೆ ವಾರ್ಡ್‍ಗೆ ಕಳುಹಿಸಿದ್ದಾರೆ. ಅವರು ಹೇಳಿದ ವಾರ್ಡ್‍ನಲ್ಲಿ ನಾನು ನನ್ನ ಕೆಲಸ ನಿರ್ವಹಿಸುತ್ತಿದ್ದೇನೆ. ಇದರಲ್ಲಿ ನನ್ನದೇನೂ ತಪ್ಪಿಲ್ಲ ಎಂದು ತನ್ನ ಮನದಾಳದ ಮಾತುಗಳನ್ನಾಡಿದರು.

    ಪಟ್ಟಣ ಪಂಚಾಯಿತಿ ಆರೋಗ್ಯಾಧಿಕಾರಿ ಅಪ್ಸಿಯಾಭಾನು ಮಾತನಾಡಿ ಪಟ್ಟಣದಲ್ಲಿ 700 ಜನಕ್ಕೆ ಒಬ್ಬ ಪೌರಕಾರ್ಮಿಕರಂತೆ 14 ಸಾವಿರಕ್ಕೂ ಹೆಚ್ಚು ನಾಗರೀಕರು ಪಟ್ಟಣದಲ್ಲಿದ್ದು ನಮ್ಮಲ್ಲಿ ಕೇವಲ 28 ಪೌರಕಾರ್ಮಿಕರಿದ್ದಾರೆ. ಅವರಲ್ಲಿ ಚಾಲಕರುಗಳು ಹಾಗೂ ಕಸ ವಿಲೇವಾರಿ ಮಾಡುವ ಸ್ಥಳದಲ್ಲಿ ಮೂವರು ಕಾರ್ಮಿಕರು ಸೇರಿದಂತೆ ಒಟ್ಟು 28 ಕಾರ್ಮಿಕರಿರುವುದರಿಂದ ವಾರ್ಡ್‍ಗಳ ಸಮಸ್ಯೆಗಳನ್ನು ಪೂರ್ಣಗೊಳಿಸಲು ಸಾದ್ಯವಾಗುತ್ತಿಲ್ಲ. ಆದರೂಸಹಾ ಎಲ್ಲಾ ವಾರ್ಡ್‍ಗಳನ್ನೂ ನಿಭಾಯಿಸಿಕೊಂಡು ಹೋಗುತ್ತಿದ್ದೇವೆ ಎಂಬ ಮಾತುಗಳು ಅವರಿಂದ ಕೇಳಿಬಂದವು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link