ಅಂಡರ್ ಪಾಸ್ ಸುತ್ತಮುತ್ತ ಚರಂಡಿ ಹೂಳು ತೆರವು

ತುಮಕೂರು

     ಮೊನ್ನೆ ಸುರಿದ ಬಿರುಮಳೆಯಿಂದ ತುಮಕೂರು ನಗರದ ಶೆಟ್ಟಿಹಳ್ಳಿ ಅಂಡರ್ ಪಾಸ್ ಒಳಗೆ ಮಳೆ ನೀರು ತುಂಬಿಕೊಂಡು ಅಂಡರ್ ಪಾಸ್ ಸಂಚಾರ ಅರ್ಧದಿನ ಬಂದ್ ಆದ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ ಅಂಡರ್ ಪಾಸ್ ಸುತ್ತಮುತ್ತಲಿನ ಚರಂಡಿಗಳ ಹೂಳು ತೆಗೆಯಲಾಯಿತು.

      30 ನೇ ವಾರ್ಡ್ ಮಹಾನಗರ ಪಾಲಿಕೆ ಸದಸ್ಯ ವಿಷ್ಣುವರ್ಧನ್ ಖುದ್ದು ಹಾಜರಿದ್ದು, ಅಂಡರ್ ಪಾಸ್ ಸುತ್ತಲಿನ ಚರಂಡಿಗಳ ಹೂಳು ತೆಗೆಸುವ ಕಾರ್ಯದ ಮೇಲ್ವಿಚಾರಣೆ ನಡೆಸಿದರು. ಅಂಡರ್ ಪಾಸ್ ಗೆ ಶೆಟ್ಟಿಹಳ್ಳಿ ಮುಖ್ಯರಸ್ತೆ ಕಡೆಯಿಂದ ಪ್ರವೇಶ ಪಡೆಯುವ ಜಾಗದಲ್ಲಿ 80 ಅಡಿ ಅಗಲದ ರಸ್ತೆಯಲ್ಲಿ ಅಡ್ಡವಾಗಿ ಎರಡು ಚರಂಡಿಗಳನ್ನು (ಕ್ರಾಸ್ ಡ್ರೈನ್) ನಿರ್ಮಿಸಿ ಅದರ ಮೇಲ್ಭಾಗಕ್ಕೆ ಕಬ್ಬಿಣದ ಸರಳುಗಳನ್ನು ಇಡಲಾಗಿದೆ. ಮಳೆ ಬಂದ ಸಂದರ್ಭದಲ್ಲಿ ಮಳೆ ನೀರು ಅಂಡರ್ ಪಾಸ್ ಒಳಗೆ ಹೋಗದೆ, ಈ ಚರಂಡಿಗಳ ಮೂಲಕ ಪಕ್ಕದ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಮುಂಭಾಗದ ಚರಂಡಿ ಮೂಲಕ ಹರಿದು, ದೇವನೂರು ರಸ್ತೆ ಮೂಲಕ ದೇವನೂರು ಚರ್ಚ್ ಕಡೆಗೆ ಇಳಿಜಾರಿನಲ್ಲಿ ಹರಿದುಹೋಗುವಂತೆ ಮಾಡಲಾಗಿದೆ.

    ಆದರೆ ಪ್ರಸ್ತುತ ಅಂಡರ್ ಪಾಸ್ ಮುಂದಿನ ಈ ಎರಡೂ ಚರಂಡಿಗಳಲ್ಲಿ ಹಾಗೂ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಮುಂಭಾಗದ ಚರಂಡಿಗಳಲ್ಲಿ ಸಂಪೂರ್ಣ ಮಣ್ಣು ಶೇಖರಣೆಗೊಂಡಿದ್ದುದು ಕಂಡುಬಂದಿದ್ದು, ಇದರಿಂದಾಗಿ ಮಳೆ ನೀರು ಚರಂಡಿಯಲ್ಲಿ ಹರಿಯಲು ಸಾಧ್ಯವಾಗದೆ ನೇರವಾಗಿ ಅಂಡರ್ ಪಾಸ್ ಒಳಕ್ಕೆ ನುಗ್ಗಿದೆಯೆಂಬುದನ್ನು ಗಮನಿಸಲಾಯಿತು.

     ಈ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆಯಿಂದಲೇ ಅಂಡರ್ ಪಾಸ್ ಅನ್ನು ತುಮಕೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಬಂದ್ ಮಾಡಿದರು. ಬಳಿಕ ಸದರಿ ಅಡ್ಡ ಮೋರಿ (ಕ್ರಾಸ್ ಡ್ರೈನ್)ಗಳ ಕಬ್ಬಿಣದ ಸರಳುಗಳನ್ನು ತೆಗೆದು ಅದರೊಳಗೆ ತುಂಬಿಕೊಂಡಿದ್ದ ಮಣ್ಣನ್ನು ಜೆಸಿಬಿ ಸಹಾಯದಿಂದ ತೆಗೆದು ಲಾರಿಗಳಲ್ಲಿ ತುಂಬಿ ಸಾಗಿಸಲಾಯಿತು.

     ಇನ್ನು ಕೆಲವು ಸಿಬ್ಬಂದಿಗಳು ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಮುಂಭಾಗದ ಚರಂಡಿಯಲ್ಲಿ ತುಂಬಿದ್ದ ಮಣ್ಣನ್ನು ಹೊರತೆಗೆದು, ಚರಂಡಿಯನ್ನು ಸ್ವಚ್ಛಗೊಳಿಸಿದರು. ಇದಲ್ಲದೆ ಅಂಡರ್ ಪಾಸ್ ಒಳಭಾಗದಲ್ಲಿ ಮಳೆ ನೀರು ನಿಂತಿದ್ದರಿಂದ ತುಂಬಿಕೊಂಡಿದ್ದ ಮಣ್ಣನ್ನೂ ಸಾಧ್ಯವಾದಷ್ಟು ತೆಗೆದುಹಾಕಿದರು. ಇದಾದ ಬಳಿಕ ಅಂಡರ್ ಪಾಸ್ ನಲ್ಲಿ ಜನ-ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಮೋಟಾರು ಪಂಪ್ ರಿಪೇರಿ

    “ಮೊದಲನೆಯದಾಗಿ ಅಂಡರ್ ಪಾಸ್ ಒಳಗಿರುವ ಸ್ವಯಂಚಾಲಿತ ಮೋಟಾರು ಪಂಪ್ ಕೆಟ್ಟುಹೋಗಿತ್ತು. ಕಳೆದ ಸುಮಾರು ಆರೆಂಟು ತಿಂಗಳುಗಳಿಂದ ಅದು ಬಳಕೆಯೇ ಆಗಿರಲಿಲ್ಲ. ಇಲಿಗಳು ವೈರ್ ಗಳನ್ನು ತುಂಡರಿಸಿತ್ತು. ಹೀಗಾಗಿ ಮೊನ್ನೆ ಅನಿರೀಕ್ಷಿತವಾಗಿ ಮಳೆ ಸುರಿದಾಗ ಈ ಮೋಟಾರ್ ಆನ್ ಆಗದೆ ಸಮಸ್ಯೆ ಉಂಟಾಯಿತು.

    ಎರಡನೆಯದಾಗಿ ಈ ಅಡ್ಡಮೋರಿಗಳು ಮತ್ತು ಮಠದ ಮುಂಭಾಗದ ಮೋರಿಯಲ್ಲಿ ಹೂಳು ತುಂಬಿರುವುದು ಗಮನಕ್ಕೆ ಬಂತು. ಇದೂ ಸಹ ನೀರು ಅಂಡರ್ ಪಾಸ್ ನಲ್ಲಿ ನಿಲ್ಲಲು ಇನ್ನೊಂದು ಕಾರಣವಾಗಿತ್ತು. ಮೊದಲನೆಯದಾಗಿ ಸದರಿ ಮೋಟಾರ್ ಪಂಪ್ ಅನ್ನು ದುರಸ್ತಿಗೊಳಿಸಿ, ನೀರನ್ನು ಪಂಪ್ ಮಾಡಲಾಯಿತು. ಎರಡನೆಯದಾಗಿ ಇಂದು ಈ ಮೋರಿಗಳ ಹೂಳನ್ನು ತೆಗೆಸಲಾಗಿದೆ’’ ಎಂದು ಸ್ಥಳದಲ್ಲಿದ್ದ ಮಹಾನಗರ ಪಾಲಿಕೆ ಸದಸ್ಯ ವಿಷ್ಣುವರ್ಧನ್ (30 ನೇ ವಾರ್ಡ್) ತಿಳಿಸಿದರು.

    “ಇದಲ್ಲದೆ ಮತ್ತೊಂದು ಸಮಸ್ಯೆಯೂ ಕಂಡುಬಂದಿತ್ತು. ಮೋಟಾರ್ ಪಂಪ್ ನಿಂದ ಮೇಲಕ್ಕೆ ಎತ್ತಲ್ಪಟ್ಟ ನೀರು ಅಂಡರ್ ಪಾಸ್ ಮೇಲ್ಭಾಗ ದೊಡ್ಡ ಪೈಪ್ ನಿಂದ ಹೊರಕ್ಕೆ ಬೀಳುತ್ತದೆ. ಈ ನೀರು ಬೀಳುವ ಸ್ಥಳದಲ್ಲೇ ಹಳ್ಳ ಇದ್ದು ಅದು ಪುನಃ ಒಳಭಾಗಕ್ಕೇ ವಾಪಸ್ ಹೋಗುವುದೂ ಕಂಡುಬಂತು. ಇದೀಗ ಅದನ್ನೂ ಸರಿಪಡಿಸಲಾಗಿದೆ. ಇವೆಲ್ಲ ಕ್ರಮಗಳಿಂದಾಗಿ ಬಹುಶಃ ಮಳೆ ನೀರು ಅಂಡರ್ ಪಾಸ್ ನಲ್ಲಿ ನಿಲ್ಲುವುದಿಲ್ಲವೆಂದು ನಿರೀಕ್ಷಿಸಲಾಗಿದೆ” ಎಂದು ಅವರು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link