ಚಳ್ಳಕೆರೆ
ತಾಲ್ಲೂಕಿನ ಪರಶುರಾಮಪುರ ಹೋಬಳಿಯ ದೊಡ್ಡ ಚೆಲ್ಲೂರು ಗ್ರಾಮದಲ್ಲಿ ಕಳೆದ ಕೆಲವಾರು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಭೀಕರವಾಗಿದ್ದು, ಈ ಬಗ್ಗೆ ಪಂಚಾಯಿತಿ ಆಡಳಿತ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಗುರುವಾರ ಗ್ರಾಮ ಪಂಚಾಯಿತಿ ಕಟ್ಟದಕ್ಕೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ಖಾಲಿಕೊಡಗಳನ್ನು ಹೊತ್ತು ಗ್ರಾಮ ಪಂಚಾಯಿತಿ ಕಚೇರಿಗೆ ಆಗಮಿಸಿದ ನೂರಾರು ಮಹಿಳೆಯರು, ಕಳೆದ ಹಲವಾರು ತಿಂಗಳುಗಳಿಂದ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಈ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಆಡಳಿತಕ್ಕೆ ಹಲವು ಬಾರಿ ಲಿಖಿತ ಮನವಿ ನೀಡಲಾಗಿದೆ.
ಆದರೂ ಸಹ ಈ ಸಮಸ್ಯೆಯನ್ನು ನಿವಾರಣೆ ಮಾಡುವಲ್ಲಿ ಗ್ರಾಮ ಪಂಚಾಯಿತಿ ಆಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ. ಗ್ರಾಮದಲ್ಲಿ ಕುಡಿಯುವ ನೀರಿಗೆ ತೊಂದರೆ ಉಂಟಾಗಿದ್ದು, ಈ ಕೂಡಲೇ ಕುಡಿಯುವ ನೀರು ಎಲ್ಲರಿಗೂ ಸಿಗುವ ವ್ಯವಸ್ಥೆಯನ್ನು ಗ್ರಾಮ ಪಂಚಾಯಿತಿ ಆಡಳಿತ ಮಾಡಬೇಕಿದೆ. ಗ್ರಾಮೀಣ ಭಾಗದ ಜನರ ಪ್ರಮುಖ ಬೇಡಿಕೆಯಾದ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಪ್ರತಿಭಟನಕಾರರು ಒತ್ತಾಯ ಪಡಿಸಿದರು.
ಗ್ರಾಮದ ಕುಡಿಯುವ ನೀರಿನ ದುಸ್ಥಿತಿಯ ಬಗ್ಗೆ ಪಂಚಾಯಿತಿ ಆಡಳಿತವೇ ನೇರಹೊಣೆಯಾಗಿದೆ. ಹಲವಾರು ಬಾರಿ ಮನವಿ ನೀಡಿದರೂ ಸಹ ಸ್ಪಂದಿಸದ ಇಂದು ಈ ಸಮಸ್ಯೆ ಉಲ್ಬಣಗೊಂಡಿದೆ. ಗ್ರಾಮದ ಕುಡಿಯುವ ನೀರಿನ ಸಮಸ್ಯೆಗೆ ಗ್ರಾಮಸ್ಥರು ನಿರಂತರವಾಗಿ ತಾಲ್ಲೂಕು ಆಡಳಿತವನ್ನು ಒತ್ತಾಯ ಪಡಿಸಿದ್ದರೂ ಸಹ ತಾಲ್ಲೂಕು ಆಡಳಿತ ಗಮನಹರಿಸದೇ ನಿರ್ಲಕ್ಷ್ಯೆ ತೋರುತ್ತಿದೆ.
ಸುಮಾರು ನಾಲ್ಕೈದು ಕಿ.ಮೀ ದೂರದ ಖಾಸಗಿ ತೋಟಗಳಿಂದ ನೀರು ತಂದು ಬಳಕೆ ಮಾಡಬೇಕಿದೆ. ಮಹಿಳೆಯರು, ಮಕ್ಕಳು, ಪುರುಷರು, ಶಾಲಾ ವಿದ್ಯಾರ್ಥಿಗಳು ಪ್ರತಿನಿತ್ಯವೂ ತಮ್ಮ ಎಲ್ಲಾ ಕೆಲಸಗಳನ್ನು ಬದಿಗೊತ್ತಿ ಕುಡಿಯುವ ನೀರಿಗಾಗಿ ಗಂಟೆ ಗಟ್ಟಲೇ ಕಾಯಬೇಕಿದೆ. ಅದ್ದರಿಂದ ನೀರು ತರುವುದೇ ಒಂದು ದೊಡ್ಡ ಕೆಲಸವಾಗಿದ್ದು, ಇದರ ಬಗ್ಗೆ ಯಾವೊಬ್ಬ ಅಧಿಕಾರಿಯೂ ಗಮನಹರಿಸದೇ ಇರುವುದು ಪ್ರತಿಭಟನಕಾರರ ಆಕ್ರೋಶಕ್ಕೆ ಕಾರಣವಾಗಿದೆ. ಅದ್ದರಿಂದ ಈ ಕೂಡಲೇ ದೊಡ್ಡ ಚೆಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.