ತುಮಕೂರು
ತುಮಕೂರು ನಗರಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಭದ್ರತಾ ಕಾರಣಗಳಿಗಾಗಿ ತುಮಕೂರು ನಗರಾದ್ಯಂತ ಮತ್ತು ತುಮಕೂರು ನಗರದ ಹೊರವಲಯದಲ್ಲಿ ಜ.2 ರಂದು ಮಧ್ಯರಾತ್ರಿ 12 ಗಂಟೆಯವರೆಗೆ ಡ್ರೋನ್ ಕ್ಯಾಮರಾ ಬಳಕೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ಈ ಆದೇಶವು ಡಿ.30 ರಂದು ಸಂಜೆ 6 ಗಂಟೆಯಿಂದಲೇ ಜಾರಿಯಲ್ಲಿದೆ. ಈ ಆದೇಶವನ್ನು ಉಲ್ಲಂಘಿಸಿ ಡ್ರೋನ್ ಕ್ಯಾಮರಾವನ್ನು ಯಾರಾದರೂ ಬಳಸಿದಲ್ಲಿ, ಅಂಥವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಪೊಲೀಸ್ ಇಲಾಖೆಗೆ ಸದರಿ ಆದೇಶದಲ್ಲಿ ಸೂಚಿಸಲಾಗಿದೆ.
ಭದ್ರತೆಗೆ ಸಂಬಂಧಿಸಿದಂತೆ ಎಸ್.ಪಿ.ಜಿ.ಯ ಐ.ಜಿ.ಪಿ. ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಭದ್ರತಾದೃಷ್ಟಿಯಿಂದ ಡ್ರೋನ್ ಕ್ಯಾಮರಾಗಳ ಬಳಕೆಯನ್ನು ತುಮಕೂರು ನಗರದಲ್ಲಿ ನಿಷೇಧಿಸುವುದು ಸೂಕ್ತವೆಂದು ತೀರ್ಮಾನಿಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಈ ಆದೇಶ ಹೊರಡಿಸಿದ್ದಾರೆ.
ಸಿದ್ಧಗಂಗಾ ಮಠದಲ್ಲಿ ಸಾರ್ವಜನಿಕರಿಗೆ ನಿರ್ಬಂಧ
ಪ್ರಧಾನಿ ನರೇಂದ್ರ ಮೋದಿ ಜ.2 ರಂದು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ, ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆಯ ದರ್ಶನ ಪಡೆಯಲಿರುವ ಹಿನ್ನೆಲೆಯಲ್ಲಿ ಭದ್ರತೆ ದೃಷ್ಟಿಯಿಂದ ಅಂದು ಮಠಕ್ಕೆ ಸಾರ್ವಜನಿಕರ ಪ್ರವೇಶವನ್ನು ರಕ್ಷಣಾ ಇಲಾಖೆಯವರು ನಿರ್ಬಂಧಿಸಿದ್ದಾರೆ. ಇದೊಂದು ಖಾಸಗಿ ಕಾರ್ಯಕ್ರಮವಾಗಿರುವುದರಿಂದ ಸಾರ್ವಜನಿಕರು, ಭಕ್ತಾದಿಗಳು ಅನ್ಯಥಾ ಭಾವಿಸದೆ ಸಹಕರಿಸಬೇಕೆಂದು ಸಿದ್ಧಗಂಗಾ ಮಠದ ಆಡಳಿತಾಧಿಕಾರಿ ಎಸ್.ವಿಶ್ವನಾಥಯ್ಯ ಪ್ರಕಟಣೆಯಲ್ಲಿ ಕೋರಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








