ತುಮಕೂರು
ತುಮಕೂರು ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ದಲಿತ ವರ್ಗಕ್ಕೆ ಸೇರಿದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮದ ವರ್ಗಾವಣೆ ಎಂಬ ಅಸ್ತ್ರವನ್ನು ಚಲಾಯಿಸುತ್ತಿರುವುದು ಕಂಡುಬರುತ್ತಿದೆ. ಕೇವಲ ಆರೋಪ ಬಂದ ತಕ್ಷಣ ಅದನ್ನು ಪರಿಶೀಲಿಸದೆ ಏಕಾಏಕಿ ವರ್ಗಾವಣೆ ಮಾಡುವ ಮೂಲಕ ಅಧಿಕಾರಿಗಳ ಆತ್ಮಸ್ಥೈರ್ಯವನ್ನು ಕುಗ್ಗಿಸುವ ಕೆಲಸ ಮಾಡಲಾಗುತ್ತಿದೆ ಎಂದು ದಲಿತ ಪರ ಸಂಘಟನೆಗಳ ಒಕ್ಕೂಟ ಖಂಡಿಸಿದೆ.
ಗುಬ್ಬಿ ತಾಲ್ಲೂಕಿನ ತಹಸೀಲ್ದಾರ್ ಮಮತಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚಂದ್ರಿಕಾ ಅವರ ವಿರುದ್ಧ ಯಾವುದೇ ಗುರುತರ ಆರೋಪಗಳು ಇಲ್ಲದಿದ್ದರೂ ಅವರನ್ನು ವರ್ಗಾವಣೆ ಮಾಡಿ, ಅವರ ವೃತ್ತಿ ಜೀವನಕ್ಕೆ ಕಪ್ಪು ಮಸಿ ಬಳಿಯಲಾಗಿದೆ. ಅಲ್ಲದೆ ವಿಧಾನಸಭಾ ಉಪ ಕಾರ್ಯದರ್ಶಿಯಾಗಿದ್ದ ಮೂರ್ತಿ ಅವರ ಮರು ನೇಮಕಕ್ಕೆ ರಾಜ್ಯ ಉಚ್ಛ ನ್ಯಾಯಾಲಯವೇ ಆದೇಶ ನೀಡಿದ್ದರೂ ಮರು ನಿಯೋಜಿಸದೆ ದಲಿತ ಅಧಿಕಾರಿಗಳಿಗೆ ಹಿಂಸೆ ನೀಡಲಾಗುತ್ತಿದೆ ಎಂದು ಆರೋಪಿಸಿದೆ.
ಕರ್ನಾಟಕದಲ್ಲಿ ಇತ್ತೀಚೆಗೆ ಸುಮಾರು 24 ನಿಗಮ ಮಂಡಳಿಗಳು ಹಾಗೂ ನಗರಾಭಿವೃದ್ಧಿ ಪ್ರಾಧಿಕಾರಗಳ ಅಧ್ಯಕ್ಷರನ್ನು ಸರ್ಕಾರ ನೇಮಕ ಮಾಡಿದೆ. ಆದರೆ ಇವರಲ್ಲಿ ಎಡಗೈ ಮತ್ತು ಬಲಗೈ ಸಮುದಾಯದ ಹಿರಿಯ ಕಾರ್ಯಕರ್ತರನ್ನು ಕಡೆಗಣಿಸಲಾಗಿದೆ. ಬಿಜೆಪಿ ಪಕ್ಷಕ್ಕಾಗಿ ಹಗಲಿರುಳು ದುಡಿಯುತ್ತಿರುವ ಅನೇಕ ಮುಖಂಡರನ್ನು ಅಧಿಕಾರದಿಂದ ವಂಚಿಸಲಾಗಿದೆ ಎಂದು ಒಕ್ಕೂಟ ದೂರಿದೆ.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಅಂದು ಪ್ರತ್ಯೇಕ ಮತದಾನದ ಹಕ್ಕನ್ನು ಏಕೆ ಮಂಡಿಸಿದ್ದರು, ಇದರ ಹಿಂದಿನ ಮರ್ಮವೇನು ಎಂಬುದು ಈಗ ಅರ್ಥವಾಗುತ್ತಿದೆ. ಎಲ್ಲಾ ಸಮಸ್ಯೆಗಳ ಪರಿಹಾರದ ಕೀಲಿ ಕೈ ರಾಜಕೀಯ ಅಧಿಕಾರ ಎಂದಿದ್ದರು. ಆದರೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಪ್ರಧಾನಿ, ಮುಖ್ಯಮಂತ್ರಿ ಹುದ್ದೆ ಪಡೆಯುವಂತಹ ಅರ್ಹತೆ ಹೊಂದಿದ್ದರೂ ಅವಕಾಶ ನೀಡದೆ ವಂಚಿಸಲಾಗುತ್ತಿದೆ. ಅನಿವಾರ್ಯವಾಗಿ ದಲಿತರು ಬೇರೆ ರಾಜಕೀಯ ವೇದಿಕೆ ನೋಡಿಕೊಳ್ಳಬೇಕಾಗುತ್ತದೆ ಎಂದು ದಲಿತ ಸಂಘಟನೆಗಳ ಒಕ್ಕೂಟದ ಪರವಾಗಿ ಎಂ.ರಾಮಯ್ಯ, ಎ.ನಾಗೇಶ್, ನಾಗರಾಜು, ತಿಮ್ಮೇಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
