ಶ್ರೀದುಗ್ಗಮ್ಮನ ಜಾತ್ರೆಗೆ ದೇವನಗರಿ ಸಜ್ಜು

ದಾವಣಗೆರೆ:

      ನಗರ ದೇವತೆ ಶ್ರೀದುರ್ಗಾಂಭಿಕಾದೇವಿ ಜಾತ್ರೆಗೆ ದಿನಗಣನೆ ಆರಂಭವಾಗಿದ್ದು, ಇನ್ನೂ ಮೂರ್ನಾಲ್ಕು ದಿನಗಳಲ್ಲಿ ಆರಂಭವಾಗಲಿರುವ ದೇವಿಯ ಜಾತ್ರೆ ಆಚರಣೆಗೆ ದೇವನಗರಿಯ ಭಕ್ತರು ಭರದ ಸಿದ್ಧತೆ ನಡೆಸಿದ್ದಾರೆ.

      ಒಂದು ಕಾಲದಲ್ಲಿ ಜನರ ಬದುಕಿಗೆ ಸೂರ್ತಿ ತುಂಬುತ್ತಾ, ಮನರಂಜನೆ ಒದಗಿಸುತ್ತಿದ್ದ ಜಾತ್ರೆಗಳು ಈ ಆಧುನಿಕ ಯುಗದಲ್ಲೂ ತನ್ನ ಮೂಲ ಚಹರೆಗಳೊಂದಿಗೆ ಆಚರಣೆಗೆ ಒಳಪಡುತ್ತಿರುವುದೇ ವಿಶೇಷ.

ಕಳೆಗಟ್ಟುತ್ತಿರುವ ಊರು:

      ಬರುವ ಮಂಗಳವಾರ ಹಾಗೂ ಬುಧವಾರ (ಮಾರ್ಚ್ 3 ಮತ್ತು 4ರಂದು) ನಡೆಯುವ ನಗರ ದೇವತೆ ದುರ್ಗಾಂಭಿಕಾ ಜಾತ್ರೆಯ ಹಿನ್ನೆಲೆಯಲ್ಲಿ ದಾವಣಗೆರೆಯ ಹೊಸ ಊರಿನಲ್ಲಿ ಅಷ್ಟೊಂದು ತಯಾರಿ ನಡೆಯದಿದ್ದರೂ ಈಗಲೂ ಹಳೆ ಊರಿನಲ್ಲಿ ಅಂದರೆ, ದುಗ್ಗಮ್ಮನ ಪೇಟೆ, ಗಾಂಧೀ ನಗರ, ಕುರುಬರ ಕೇರಿ, ಹೊಂಡದ ವೃತ್ತ, ಜಾಲಿ ನಗರ, ಛಲವಾದಿ ಕೇರಿ, ಎಂ.ಬಿ.ಕೇರಿ, ವಿನೋಬಾ ನಗರ, ಶೇಖರಪ್ಪ ನಗರ, ಭಾರತ್ ಕಾಲೋನಿ, ಎಸ್‍ಪಿಎಸ್ ನಗರ, ಎಸ್.ಎಂ.ಕೃಷ್ಣ ನಗರ, ವಿಜಯ ನಗರ ಬಡಾವಣೆ, ದೇವರಾಜ ಅರಸ್ ಬಡಾವಣೆ, ವೆಂಕಾಭೋವಿ ಕಾಲೋನಿ, ಬಂಬೂ ಬಜಾರ್ ಸೇರಿದಂತೆ ನಗರದ ಹಲವು ಪ್ರದೇಶಗಳಲ್ಲಿ ಭರದ ಸಿದ್ಧತೆ ನಡೆದಿದೆ.

ಸ್ವರ್ಣ ಮಂಟಪ, ದೀಪಾಲಂಕಾರ:

    ಈ ಮೇಲಿನ ಎಲ್ಲಾ ಪ್ರದೇಶಗಳಲ್ಲಿರುವ ಪ್ರಮುಖ ದೇವಸ್ಥಾನಗಳಿಗೆ ಮತ್ತು ವೃತ್ತಗಳಿಗೆ ಜಾತ್ರೆಯ ಹಿನ್ನೆಲೆಯಲ್ಲಿ ಸುಣ್ಣ-ಬಣ್ಣ ಬಳಿಯಲಾಗಿದೆ. ಅಲ್ಲದೆ, ಜಾತ್ರೆ ಆಚರಿಸುವವ ಮನೆಗಳು ನವ ಮಧುವಣಗಿತ್ತಿಯಂತೆ ಸಿಂಗಾರ ಗೊಂಡಿವೆ. ಇನ್ನೂ ದೇವಿ ದುಗ್ಗಮ್ಮನ ದೇವಸ್ಥಾನದ ಆವರಣದಲ್ಲಿ 16.50 ಲಕ್ಷ ರೂ. ವೆಚ್ಚದಲ್ಲಿ ಅರಮನೆ ಶೈಲಿಯ ಸ್ವರ್ಣ(ಚಿನ್ನದ ಬಣ್ಣದ) ಮಹಾಮಂಟಪ ಜಾತ್ರೆಗೆ ಸಾರ್ವಜನಿಕರನ್ನು ಕೈ ಬೀಸಿ ಕರೆಯುತ್ತಿದೆ. ದೇವಸ್ಥಾನದ ಸುತ್ತ ಮುತ್ತ ಇರುವ ಪ್ರಮುಖ ರಸ್ತೆಗಳಲ್ಲಿ ದೀಪಾಲಂಕಾರ ಭರದಿಂದ ಸಾಗಿದೆ.

ದೇಗುಲದ ಸುತ್ತ ಅಗತ್ಯ ಸೌಲಭ್ಯ:

     ದೀಡು ನಮಸ್ಕಾರ, ಬೇವಿನ ಉಡುಗೆ ಉಟ್ಟು ಹರಕೆ ತೀರಿಸುವ ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ದೇವಸ್ಥಾನದ ಸುತ್ತಲೂ ಅಂದಾಜು 12 ಟಿಪ್ಪರ್‍ಗಳಷ್ಟು ಮರಳು ಹಾಸಲಾಗಿದೆ. ಹರಿಕೆ ತೀರಿಸಿದ ಭಕ್ತರು ಬಿಡುವ ಬಟ್ಟೆ, ಬೇವಿನ ತಪ್ಪಲುಗಳನ್ನು ಶುಚಿಗೊಳಿಸಲು ದಾವಣಗೆರೆ ಮಹಾನಗರ ಪಾಲಿಕೆ ಮೂರು ಶಿಫ್ಟ್‍ಗಳಲ್ಲಿ ಸ್ವಚ್ಛತಾ ಸಿಬ್ಬಂದಿಗಳನ್ನು ನಿಯೋಜಿಸಿದೆ. ಅಲ್ಲದೆ, ಹರಿಕೆ ತೀರಿಸುವ ಭಕ್ತರ ಸ್ನಾನಕ್ಕಾಗಿ ಶವರ್ ಸಮೇತ ನಲ್ಲಿಗಳನ್ನು ದೇವಸ್ಥಾನದ ಸುತ್ತಲು ಅಳವಡಿಸಲಾಗಿದೆ. ಮಹಿಳಾ ಭಕ್ತರಿಗೆ ಬಟ್ಟೆ ಬದಲಾಯಿಸಲು ಕೃತಕ ಡ್ರೆಸ್ಸಿಂಗ್ ರೂಂ ಸಹ ನಿರ್ಮಿಸಲಾಗುತ್ತಿದೆ.

ಬಲಿಗೆ ಸಜ್ಜಾಗಿವೆ ಕುರಿ, ಮೇಕೆ:

    ಒಂದರ್ಥದಲ್ಲಿ ಬಲಿ ಜಾತ್ರೆ ಎಂದೇ ಪ್ರಸಿದ್ಧಿಯಾಗಿರುವ ದುಗ್ಗಮ್ಮನ ಜಾತ್ರೆಯ ವಿಶೇಷವೇ ಬಾಡೂಟ. ಈ ಬಾಡೂಟ ತಯಾರಿಗೆ ಮಾಂಸ ಒದಗಿಸುವ ಕುರಿ, ಮೇಕೆ, ಹೋತಾಗಳು ಬಲಿ ಸಮರ್ಪಿಸುವ ಹರಕೆ ಹೊತ್ತಿರುವ ಮನೆಗಳ ಮುಂದೆ ಒಂದು, ಎರಡು, ಮೂರು ಹೀಗೆ ತಮ್ಮ ಶಕ್ತ್ಯಾನುಸಾರ ಕುರಿ, ಮೇಕೆಗಳನ್ನು ಕಟ್ಟಿದ್ದಾರೆ. ಇನ್ನೂ ಕೆಲವರು ಶನಿವಾರ (ಇಂದು) ದುಗ್ಗಾವತಿಯಲ್ಲಿ ಹಾಗೂ ಮಂಗಳವಾರ ಹರಿಹರದಲ್ಲಿ ನಡೆಯುವ ಕುರಿ ಸಂತೆಯಲ್ಲಿ ಕುರಿ ತರಲು ಯೋಜನೆ ರೂಪಿಸಿದ್ದರೆ, ಇನ್ನೂ ಕೆಲವರು ಹಳ್ಳಿಗಳಿಗೆ ಹೋಗಿ ಕುರಿ ತಂದರೆ, ಒಂದಿಷ್ಟು ಕಾಸು ಉಳಿಯಲಿದೆ ಎಂಬ ಲೆಕ್ಕಚಾರದಲ್ಲಿ ತೊಡಗಿದ್ದಾರೆ.

     ದೇವಿಗೆ ಮಂಗಳವಾರ ಮಧ್ಯ ರಾತ್ರಿ ದೊಡ್ಡ ಬಲಿ ನೀಡಿ, ಹಳೇ ಊರಿನಲ್ಲಿ ಚರಗ ಹೊರಟ ಬಳಿಕ ಭಕ್ತರು ಕುರಿ, ಮೇಕೆ, ಹೋತಾ, ಕೋಳಿ, ಕೆಲವೆಡೆ ಕೋಣವನ್ನು ಸಹ ಬಲಿ ನೀಡಿ ಜಾತ್ರೆಗೆ ಬರುವ ಬಂಧು ಮಿತ್ರರನ್ನು ಸತ್ಕರಿಸಲಿದ್ದು, ಜಾತ್ರೆಯ ಹಿನ್ನೆಲೆಯಲ್ಲಿ ಬುಧವಾರ ಮತ್ತು ಗುರುವಾರ ಎರಡೂ ದಿನ ಹತ್ತತ್ರಾ ಒಂದು ಲಕ್ಷ ಕುರಿ, ಮೇಕೆಗಳ ಬಲಿ ನಡೆಯಲಿದೆ ಎಂದು ಅಂದಾಜಿಸಲಾಗುತ್ತಿದೆ.

ಹಸಿ ಹುಲ್ಲಿಗೆ ಚಿನ್ನದ ಬೆಲೆ:

      ತಂದಿರುವ ಕುರಿ, ಮೇಕೆಗಳನ್ನು ಸಾಕಲು ಮೇವಿನ ಅವಶ್ಯಕತೆ ಇದ್ದು, ನಗರದ ಹೊಂಡದ ವೃತ್ತ, ಬೂದಾಳ್ ರಸ್ತೆ, ಹುಲ್ಲಿನ ಮಾರುಕಟ್ಟೆಗಳ ಬಳಿಯಲ್ಲಿ ಹಸಿ ಹುಲ್ಲು ಮಾರಾಟ ಮಾಡಲಾಗುತ್ತಿದ್ದು, ಹುಲ್ಲು ಖರೀದಿಸಲು ಕುರಿ, ಮೇಕೆ ತಂದಿರುವವರು ಮುಗಿ ಬಿದಿದ್ದಾರೆ. ಹುಲ್ಲಿಗೆ ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಒಂದು ಹಿಡಿಯಷ್ಟು ಹುಲ್ಲಿರುವ ಕಟ್ಟು ಒಂದಕ್ಕೆ 15ರಿಂದ 20 ರೂ.ಗಳಿಗೆ ಮಾರಾಟವಾಗುತ್ತಿದೆ. ಹೀಗಾಗಿ ಹುಲ್ಲಿಗೂ ಈಗ ಚಿನ್ನದ ಬೆಲೆ ಬಂದಂತಾಗಿದೆ.

ಬಟ್ಟೆ ಅಂಗಡಿ, ಮಾರುಕಟ್ಟೆ ರಶ್:

      ಜಾತ್ರೆಯ ಹಿನ್ನೆಲೆಯಲ್ಲಿ ನಗರದ ಪ್ರಮುಖ ಜವಳಿ ಅಂಗಡಿಗಳಿಗೆ ಬಟ್ಟೆ ಖರೀದಿಸಲು ಗ್ರಾಹಕರು ಮುಗಿಬಿದ್ದಿರುವುದರಿಂದ ಬಟ್ಟೆ ಅಂಗಡಿಗಳು ಸದಾ ಗಿಜಿಗೂಡತ್ತಿದೆ. ಅಲ್ಲದೆ, ಬಟ್ಟೆಗಳ ಬೆಲೆಯಲ್ಲೂ ಸಾಕಷ್ಟು ಹೆಚ್ಚಳ ಕಂಡಿದೆ. ಇನ್ನೂ ಜಾತ್ರೆಗೆ ಹೋಳಿಗೆ ಮಾಡಲು ಬೇಕಾಗುವ ಬೇಳೆ, ಬೆಲ್ಲ, ಮೈದಾ, ಹೋಳಿಗೆ ರವಿ ಮತ್ತು ಬಾಡೂಟ ತಯಾರಿಸಲು ಬೇಕಾಗಿರುವ ಮಸಾಲೆ ಕರೀದಿಸಲು ದಿನಸಿ ಅಂಗಡಿಗಳಿಗೆ ಹಾಗೂ ತರಕಾರಿ ಖರೀದಿಗೆ ತರಕಾರಿ ಮಾರುಕಟ್ಟೆಯಲ್ಲಿ ಜನರು ಲಗ್ಗೆ ಇಟ್ಟಿದ್ದಾರೆ. ಜಾತ್ರೆಯ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಕೋಟ್ಯಂತರ ರೂಪಾಯಿಗಳ ವಹಿವಾಟು ನಡೆಯಲಿದೆ ಎಂಬ ಲೆಕ್ಕಚಾರ ಹಾಕಲಾಗುತ್ತಿದೆ.

ರೊಟ್ಟಿ ಸುಡುವ ಸದ್ದು:

     ದುಗ್ಗಮ್ಮನ ಜಾತ್ರೆಗೆ ಒಂದು ಕಡೆ ಕುರಿ, ಮೇಕೆಗಳು ದುಂಡಗಾಗುತ್ತಿದ್ದರೆ, ಇನ್ನೊಂದೆಡೆ ರೊಟ್ಟಿ ಸುಡುವ ಸದ್ದು ಹಳೇ ಭಾಗದಲ್ಲಿ ಬೆಳಿಗ್ಗೆಯಿಂದಲೇ ಆರಂಭವಾಗುತ್ತಿದೆ. ಹಬ್ಬಕ್ಕೆ ನೆಂಟರ ದಂಡು ಆಗಮಿಸುವ ಹಿನ್ನೆಲೆಯಲ್ಲಿ ಬಂದವರಿಗೆ ನಿತ್ಯ ರುಚಿಕರ ಅಡುಗೆ ಮಾಡಲೇಬೇಕು. ಇದೇ ಕಾರಣಕ್ಕೆ ಹಿಂದಿನಿಂದಲೂ ಹಬ್ಬ ಜಾತ್ರೆಗಳಿಗೆ ಬಂದು ಉಳಿಯುವವರಿಗೆಂದೇ ಮುಂಚಿತವಾಗಿ ಕಡಕ್ ರೊಟ್ಟಿ ಮಾಡಿಟ್ಟುಕೊಳ್ಳುವ ರೂಢಿಯಲ್ಲಿದೆ. ದುಗ್ಗಮ್ಮನ ಹಬ್ಬ ಕೇವಲ ಮಾಂಸಾಹಾರಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಸಸ್ಯಹಾರಿಗಳೂ ಈ ಜಾತ್ರೆಯನ್ನು ಆಚರಿಸುತ್ತಾರೆ.

     ಹೀಗಾಗಿ ಎಲ್ಲರ ಮನೆಗಳಲ್ಲೂ ರೊಟ್ಟಿ ಬಡಿಯುವ ಅಬ್ಬರ ಕೇಳಿ ಬರುತ್ತಿದೆ. ಅದರಲ್ಲೂ ಕೆಲವರು ಕೂಲಿ ಕೊಟ್ಟು ರೊಟ್ಟಿ ಸುಡಿಸುತ್ತಿದ್ದರೆ, ಇನ್ನೂ ಕೆಲವರು ರೆಡಿಮೆಡ್ ರೊಟ್ಟಿ ತರುವ ಚಿಂತನೆ ನಡೆಸಿದ್ದಾರೆ.ವಾರದ ವರೆಗೂ ನಡೆಯುವ ದುಗ್ಗಮ್ಮನ ಜಾತ್ರೆಯಲ್ಲಿ ಹೊರ ಜಿಲ್ಲೆ, ರಾಜ್ಯ ಸೇರಿದಂತೆ ಹತ್ತು ಲಕ್ಷಕ್ಕೂ ಹೆಚ್ಚು ಭಕ್ತರು ಸೇರುವ ನಿರೀಕ್ಷೆ ಇದೆ ಎನ್ನುತ್ತಾರೆ. ಶ್ರೀದುರ್ಗಾಂಭಿಕಾದೇವಿ ದೇವಸ್ಥಾನ ಟ್ರಸ್ಟ್‍ನ ಗೌಡ್ರ ಚನ್ನಬಸಪ್ಪ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link