ಬೆಂಗಳೂರು

ನಂಬಿಕೆ ದ್ರೋಹ ಹಾಗೂ ಸಮಯಸಾಧಕತನ ರಾಜಕಾರಣಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿ ಮಾಡಿಸಿದ ಜೋಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಇಂದಿಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂತ್ರಿ ಸ್ಥಾನ ಕೇಳಲು ನಾನು ಕುಮಾರಸ್ವಾಮಿ ಅವರ ಮನೆಗೆ ಹೋಗಿದ್ದೆ ಎಂದು ಅವರು ಆರೋಪಿಸಿದ್ದಾರೆ. ಆದರೆ ಯಾವಾಗ ನಾನು ಅವರ ಮನೆಗೆ ಭೇಟಿ ನೀಡಿದ್ದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದರು.
ಕುಮಾರಸ್ವಾಮಿ ಅವರು ಪಕ್ಷ ಉಳಿಸಿಕೊಳ್ಳಲು ಬಿಜೆಪಿಯವರೊಂದಿಗೆ ಮೈತ್ರಿ ಮಾಡಿಕೊಂಡಿದ್ದರು. ಒಪ್ಪಂದದಂತೆ 20 ತಿಂಗಳು ಮುಖ್ಯಮಂತ್ರಿ ಹುದ್ದೆಯನ್ನು ಅವರಿಗೆ ಬಿಟ್ಟುಕೊಟ್ಟಿದ್ದೆವು. ಆದರೆ ಬಳಿಕ ಅವರ ನನಗೆ ಮೋಸ ಮಾಡಿದರು ಎಂದು ಯಡಿಯೂರಪ್ಪ ಕಿಡಿಕಾರಿದರು.ನಾನು ಹಣಕಾಸು ಸಚಿವರಾಗಿದ್ದಾಗ ರೈತರ ಸಾಲದ ಬಡ್ಡಿ ಕಡಿಮೆ ಮಾಡಿದ್ದೆ. ಆಗ ದೇವೇಗೌಡರು ಈ ನಿರ್ಧಾರವನ್ನು ಯಾರನ್ನು ಕೇಳಿ ತೆಗೆದುಕೊಂಡಿರಿ ಎಂದು ನನ್ನನ್ನೇ ಬೆದರಿಸಿದ್ದರು. ವಿರೋಧ ಪಕ್ಷ ಎಂಬ ನೆಲೆಯಲ್ಲಿ ಬೆಳಗಾವಿ ರೈತರಿಗೆ ಬೆಂಬಲ ನೀಡಿದ್ದೇವೆ. ಇದರಲ್ಲಿ ರಾಜಕೀಯ ಲಾಭ-ನಷ್ಟದ ಪ್ರಶ್ನೆ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.ಸಂಕಷ್ಟದಲ್ಲಿರುವ ಕಬ್ಬು ಬೆಳೆಗಾರರ ಸಮಸ್ಯೆಗೆ ಸರ್ಕಾರ ತಕ್ಷಣ ಸ್ಪಂದಿಸಬೇಕಿತ್ತು. ಇದೇ ವೇಳೆ ಸಕ್ಕರೆ ಕಾರ್ಖಾನೆ ಮಾಲೀಕರು ಕೂಡ ರೈತರ ನೆರವಿಗೆ ಮುಂದಾಗಬೇಕಿತ್ತು ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
