ತುರುವೇಕೆರೆ
ಚೆಕ್ಡ್ಯಾಮ್ನಲ್ಲಿ ಈಜಲು ತೆರಳಿದ್ದ ಮೂವರು ಯವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ತಾಲ್ಲೂಕಿನ ಮಾಯಸಂದ್ರ ಹೋಬಳಿ ಮಣೆಚಂಡೂರು ಬಳಿ ಭಾನುವಾರ ಮಧ್ಯಾಹ್ನ ನಡೆದಿದೆ.
ಮೃತರು ತಾಲ್ಲೂಕಿನ ಮಣೆಚಂಡೂರು ಗ್ರಾಮದ ನವೀನ (23), ಮಂಜುನಾಥ (21) ಹಾಗೂ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಉಗ್ಗೇನಹಳ್ಳಿ ಗ್ರಾಮದ ವೇದಮೂರ್ತಿ (28) ಮೂವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಭಾನುವಾರ ಮಧ್ಯಾಹ್ನ ಶಿಂಷಾ ನದಿಯಲ್ಲಿನ ಮಣೆಚಂಡೂರು ಲಿಫ್ಟ್ ಇರಿಗೇಷನ್ ಚೆಕ್ಡ್ಯಾಮ್ ಬಳಿ ಈಜಲು ಐದು ಜನರು ತೆರಳಿದ್ದಾರೆ. ಈಜುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಮೂವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು ಇಬ್ಬರು ಪಾರಾಗಿ ಬಂದಿದ್ದಾರೆ. ವೇದಮೂರ್ತಿ, ಮಂಜುನಾಥ್ ಇಬ್ಬರ ಮೃತ ದೇಹ ದೊರೆತಿದ್ದು ನವೀನನ ಮೃತ ದೇಹಕ್ಕಾಗಿ ಶೋಧಕಾರ್ಯ ನಡೆಯುತ್ತಿದೆ. ಅಗ್ನಿ ಶಾಮಕ ದಳ, ಪಟ್ಟಣದ ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿದ್ದಾರೆ.
ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಉಗ್ಗೇನಹಳ್ಳಿ ಗ್ರಾಮದ ರೈತ ಮಂಜುನಾಥ್ ಒಬ್ಬನೆ ಮಗನಾಗಿದ್ದ ವೇದಮೂರ್ತಿ (28) ಸುಮಾರು 5 ವರ್ಷಗಳಿಂದ ತಾಲ್ಲೂಕಿನ ಮಣೆಚಂಡೂರು ಗ್ರಾಮದ ಗಂಗಾಧರಯ್ಯ ಎಂಬುವರ ಜೆಸಿಬಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದನು.
ತಾಲ್ಲೂಕಿನ ಮಣೆಚಂಡೂರು ಗ್ರಾಮದ ಅಡುಗೆ ಭಟ್ಟರಾಗಿದ್ದ ಗೋವಿಂದಪ್ಪ ಮಗನಾದ ಮಂಜುನಾಥ್ ದ್ವಿತೀಯ ಪಿಯುಸಿ ಮುಗಿಸಿ ಕೆಲವು ದಿನಗಳಿಂದ ಟ್ರ್ಯಾಕ್ಟರ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದನು. ನವೀನ ಮಾತ್ರ ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದನು ಎಂದು ತಿಳಿದು ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
