ಮಂಗಳೂರು
ಮಂಗಳೂರು ವಿಮಾನ ನಿಲ್ದಾಣಕ್ಕೆ ಸ್ಪೋಟಕ ಇರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯನ್ನು ಟೀಕೆ ಮಾಡಲು ಯಾವುದೇ ಕಾರಣಗಳೂ ಇಲ್ಲ. ಯಾರೇ ತಪ್ಪಿತಸ್ಥರಾದರೂ ನ್ಯಾಯ ತನಿಖೆ ಮಾಡುತ್ತೇವೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.
ಉಡುಪಿಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಈ ಪ್ರಕರಣದ ಕುರಿತು ನಾನು ಮೊದಲ ದಿನವೇ ಹೇಳಿದ್ದೇನೆ, ಯಾವುದೇ ಸಂಘಟನೆ ಅಥವಾ ವ್ಯಕ್ತಿಯ ಮೇಲೂ ನಾನು ದೋಷಾರೋಪ ಮಾಡಿರಲಿಲ್ಲ. ಪೊಲೀಸರ ತನಿಖೆಗೆ ಹೆದರಿಯೇ ಆದಿತ್ಯರಾವ್ ಶರಣಾಗಿದ್ದಾನೆ ಎಂದು ತಿಳಿಸಿದರು.
ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿಗೆ ಮರಣೋತ್ತರವಾಗಿ ಪದ್ಮವಿಭೂಷಣ ಪ್ರಶಸ್ತಿ ಸಿಕ್ಕಿದ್ದಕ್ಕೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಬಸವರಾಜ ಬೊಮ್ಮಾಯಿ ಅಭಿನಂದನೆ ಸಲ್ಲಿಸಿದರು. ಅಸ್ಪೃಶ್ಯತೆ ದೂರ ಮಾಡಿದವರಲ್ಲಿ ಪೇಜಾವರ ಸ್ವಾಮೀಜಿ ಪ್ರಮುಖರು. ಅವರೊಬ್ಬ ಶಾಂತಿಧೂತ. ಅವರ ವಿಚಾರಗಳಿಗೆ ಗೌರವ ಕೊಟ್ಟು, ಶ್ರೀಗಳ ಮಾರ್ಗದಲ್ಲಿ ನಡೆಯೋಣ ಎಂದರು.
