ಹೊನ್ನಾಳಿ:
ಜಗತ್ತಿನಲ್ಲಿ ಎಲ್ಲಕ್ಕಿಂತ ವಿದ್ಯಾಸಂಪತ್ತಿಗೆ ಹೆಚ್ಚಿನ ಬೆಲೆ ಇದೆ ಎಂದು ಚಿತ್ರದುರ್ಗ ಮುರುಘಾಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ತಾಲೂಕಿನ ಎಚ್. ಕಡದಕಟ್ಟೆ ಗ್ರಾಮದ ಸಾಯಿ ಗುರುಕುಲ ವಸತಿಯುತ ವಿದ್ಯಾಸಂಸ್ಥೆಯ ದಶಮಾನೋತ್ಸವ ಸಮಾರಂಭವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಪೋಷಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕಿಸಲು ಮುಂದಾಗಬೇಕು. ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರವನ್ನೂ ಮಕ್ಕಳಿಗೆ ನೀಡಬೇಕು ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಹೆಚ್ಚು ವಾಹನಗಳ ಬಳಕೆಯಿಂದ ಪರಿಸರ ಮಾಲಿನ್ಯ ಹೆಚ್ಚಾಗುತ್ತಲಿದೆ. ಅದೇ ರೀತಿ ಜಲ ಮತ್ತು ವಾಯು ಮಾಲಿನ್ಯದಿಂದ ನರಕ ಸದೃಶ ವಾತಾವರಣ ಸೃಷ್ಟಿಯಾಗಿದೆ. ಆದ್ದರಿಂದ, ನಾವೆಲ್ಲರೂ ಮಾಲಿನ್ಯ ನಿವಾರಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್ ಮಾತನಾಡಿ, ಗುಣಾತ್ಮಕ ಶಿಕ್ಷಣಕ್ಕೆ ಮಹಾನಗರಗಳಾದ ದೆಹಲಿ, ಬೆಂಗಳೂರು ಹೆಸರುವಾಸಿಯಾಗಿವೆ. ಆದರೆ, ಹೊನ್ನಾಳಿಯಂಥ ಪಟ್ಟಣ ಪ್ರದೇಶಗಳ ಹತ್ತಿರದಲ್ಲಿರುವ ಸಾಯಿ ಗುರುಕುಲ ವಿದ್ಯಾಸಂಸ್ಥೆ ಕೂಡ ಅತ್ಯುತ್ತಮ ಶಿಕ್ಷಣ ನೀಡುವಲ್ಲಿ ಯಶ ಕಂಡಿದೆ. ಇಲ್ಲಿ ಇಂದು ಸುಮಾರು 950ಕ್ಕೂ ಹೆಚ್ಚು ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. ಇದು ಶ್ಲಾಘನೀಯ ಎಂದರು.
ಸಾಯಿ ಗುರುಕುಲ ಟ್ರಸ್ಟ್ನ ಅಧ್ಯಕ್ಷ, ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿ, ಸಿಬಿಎಸ್ಇ ವಸತಿಯುತ ಶಾಲೆಗೆ ಈ ಭಾಗದ ಜನರು ದೂರದ ಸ್ಥಳಗಳಿಗೆ ಹೋಗಿ ತಮ್ಮ ಮಕ್ಕಳನ್ನು ಸೇರಿಸಿ ಅನೇಕ ತೊಂದರೆಗಳನ್ನು ಅನುಭವಿಸುತ್ತಿದ್ದುದನ್ನು ಮನಗಂಡು 2008ರಲ್ಲಿ ಸಮಾನ ಮನಸ್ಕರು ಸೇರಿ ಸಾಯಿ ಗುರುಕುಲ ಟ್ರಸ್ಟ್ ಸ್ಥಾಪಿಸುವ ಮೂಲಕ ಉತ್ತಮ ಗುಣಮಟ್ಟದ ಶಾಲೆ ತೆರೆದು ಗುಣಾತ್ಮಕ ಶಿಕ್ಷಣ ನೀಡಲಾಗುತ್ತಿದೆ.
ಇದೀಗ ಪಿಯುಸಿ ವಿಜ್ಞಾನ ವಿಭಾಗವನ್ನೂ ಪ್ರಾರಂಭಿಸಲಾಗಿದೆ. ರಾಜ್ಯದ ಪ್ರತಿಷ್ಠಿತ ಸಿಬಿಎಸ್ಇ ಶಾಲೆಗಳಲ್ಲಿ ನಮ್ಮ ಶಾಲೆಯೂ ಒಂದು ಎಂಬ ಹಿರಿಮೆ ಹೊಂದಲು ಸಂಸ್ಥೆಯ ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರ ಸಹಕಾರದೊಂದಿಗೆ ಪ್ರಯತ್ನಿಸುವುದಾಗಿ ವಿವರಿಸಿದರು. ನಮ್ಮ ಸಂಸ್ಥೆಯಲ್ಲಿನ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಲಾಗುತ್ತಿದೆ. ತಮ್ಮ ಪೋಷಕರನ್ನು ವೃದ್ಧಾಶ್ರಮಗಳಿಗೆ ಕಳುಹಿಸದಿರುವ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದರು.
ಚಿತ್ರದುರ್ಗದ ರಾಮಕೃಷ್ಣ ಆಶ್ರಮದ ಶ್ರೀ ಸ್ವಾಮಿ ಬ್ರಹ್ಮ ನಿಷ್ಠಾನಂದ ಮಹಾರಾಜ್ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಸದಸ್ಯ ರುದ್ರೇಗೌಡ, ಸಾಯಿ ಗುರುಕುಲ ಟ್ರಸ್ಟ್ನ ಕಾರ್ಯದರ್ಶಿ ಜಿ. ಮರಿಗೌಡ, ಆಡಳಿತಾಧಿಕಾರಿ ದಯಾನಂದಪ್ರಭು, ಪ್ರಾಂಶುಪಾಲ ಸಿ.ಜಿ. ಸುರೇಂದ್ರ, ಉಪ ಪ್ರಾಂಶುಪಾಲ ಇಸ್ಮಾಯಿಲ್, ಶಿಕ್ಷಣ ಸಂಯೋಜಕ ಹರೀಶ್, ಶಂಕರಪ್ಪ, ಆಡಳಿತ ಮಂಡಳಿಯ ಸದಸ್ಯರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
