ಬೆಂಗಳೂರು
ವಿಧಾನಪರಿಷತ್ ಸಭಾಪತಿ ಮತ್ತು ಉಪಸಭಾಪತಿ ಸ್ಥಾನದ ಚುನಾವಣೆಗಾಗಿ ಒಂದು ದಿನದ ವಿಧಾನಪರಿಷತ್ ಅಧಿವೇಶನ ಕರೆಯಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಹಂಗಾಮಿ ಸಭಾಪತಿಯಾಗಿ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಹೆಚ್ಚು ಕಾಲ ಹಂಗಾಮಿ ವ್ಯವಸ್ಥೆಯನ್ನು ಮುಂದುವರೆಸುವುದು ಸತ್ಸಂಪ್ರದಾಯವಲ್ಲ. ಹೀಗಾಗಿ ಚುನಾವಣೆ ನಡೆಸುವುದು ಸೂಕ್ತ ಎನ್ನುವ ನಿಲುವಿಗೆ ಸರ್ಕಾರ ಬಂದಿದೆ.
ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರದ ಬಗ್ಗೆ ಚರ್ಚೆ ನಡೆದು ಚುನಾವಣೆಗೆ ದಿನಾಂಕ ನಿಗದಿಯಾಗಬೇಕಾಗಿತ್ತು. ಇದಕ್ಕಾಗಿ ಒಂದು ದಿನದ ವಿಶೇಷ ಅಧಿವೇಶನ ಕರೆಯಲು ರಾಜ್ಯಪಾಲರಿಗೆ ಮನವಿ ಮಾಡಲು ಉದ್ದೇಶಿಸಲಾಗಿತ್ತು. ಆದರೆ ಸಂಪುಟ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬಂದಿಲ್ಲ. ಬಹುತೇಕ ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ನಿರ್ಧಾರವಾಗುವ ಸಂಭವವಿದೆ.
ಕಳೆದ ಅಧಿವೇಶನದಲ್ಲಿ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಸಬೇಕೆಂದ ಒತ್ತಡ ಕೇಳಿ ಬಂದಿತ್ತು. ಹಿರಿಯ ಸದಸ್ಯರಾದ ಬಸವರಾಜ ಹೊರಟ್ಟಿ ಅವರು ಹಂಗಾಮಿ ಸಭಾಪತಿಯಾಗಿ ಈ ಹುದ್ದೆಯಲ್ಲಿ ಮುಂದುವರೆಯುವುದು ಸೂಕ್ತವಲ್ಲ ಎಂದು ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರು. ಬಿಜೆಪಿ ಸದಸ್ಯರ ಟೀಕೆಗಳಿಂದ ಕೆರಳಿದ್ದ ಹೊರಟ್ಟಿ ಒಂದು ಹಂತದಲ್ಲಿ ತಮ್ಮ ಹುದ್ದೆ ತೊರೆಯಲು ಮುಂದಾಗಿದ್ದರು. ನಂತರ ಅವರನ್ನು ಸಮಾಧಾನಪಡಿಸಲಾಗಿತ್ತು.
ಇದೀಗ ಬೆಳಗಾವಿ ಅಧಿವೇಶನಕ್ಕೂ ಮುನ್ನ ಸಭಾಪತಿ ಮತ್ತು ಉಪಸಭಾಪತಿ ಚುನಾವಣೆ ನಡೆಸಲು ಮೈತ್ರಿ ಸರ್ಕಾರ ತೀರ್ಮಾನಿಸಿದೆ. ಹಂಗಾಮಿ ಸಭಾಪತಿಯಾಗಿ ಬಸವರಾಜ ಹೊರಟ್ಟಿ ಅವರು ಆಡಳಿತಾತ್ಮಕ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ
ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಬಹುತೇಕ ಬಸವರಾಜ ಹೊರಟ್ಟಿ ಅವರನ್ನೇ ಸಭಾಪತಿ ಅಭ್ಯರ್ಥಿಯನ್ನಾಗಿ ಮಾಡಲಿದ್ದು, ಉಪಸಭಾಪತಿ ಹುದ್ದೆ ಕಾಂಗ್ರೆಸ್ಗೆ ದೊರೆಯಲಿದೆ.
ಕಾಂಗ್ರೆಸ್ನಿಂದ ಉಪಸಭಾಪತಿ ಸ್ಥಾನ ಯಾರಿಗೆ ಎನ್ನುವ ಕುತೂಹಲವಿದ್ದು, ಹಲವು ಆಕಾಂಕ್ಷಿಗಳು ಈ ಹುದ್ದೆಯ ಆಕಾಂಕ್ಷಿಗಳಾಗಿದ್ದಾರೆ.
ಮೇಲ್ಮನೆ ಸದಸ್ಯರಾದ ಎಚ್.ಎಂ. ರೇವಣ್ಣ, ಎಸ್.ಆರ್. ಪಾಟೀಲ್, ಐವಾನ್ ಡಿಸೋಜಾ ಮತ್ತಿತರರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಉಪಸಭಾಪತಿ ಸ್ಥಾನದ ಬಗ್ಗೆ ಹಿರಿಯ ಸದಸ್ಯರಿಗೆ ಒಲವಿಲ್ಲ. ಕಿರಿಯ ಸದಸ್ಯರಲ್ಲಿ ಸೂಕ್ತರಾದವರಿಗೆ ಈ ಹುದ್ದೆ ದೊರೆಯುವ ನಿರೀಕ್ಷೆಯಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
