ತುಮಕೂರು
ಚುನಾವಣೆಯಲ್ಲಿ ಕೋಟ್ಯಂತರ ರೂಗಳನ್ನು ಕಾನೂನು ಬಾಹಿರವಾಗಿ ವೆಚ್ಚಮಾಡಿದರೂ ಅಭ್ಯರ್ಥಿಗಳು ಕಡಿಮೆ ವೆಚ್ಚ ಮಾಡಿರುವುದಾಗಿ ಚುನಾವಣಾ ಆಯೋಗಕ್ಕೆ ಮಾಹಿತಿ ಸಲ್ಲಿಸುತ್ತಿದ್ದು, ಪ್ಲೈಯಿಂಗ್ ಸ್ವ್ಯಾಡ್, ಮತ್ತಿತರ ಚುನಾವಣಾ ತಂಡಗಳು ಕಟ್ಟುನಿಟ್ಟಾಗಿ ಕರ್ತವ್ಯವನ್ನು ನಿರ್ವಹಿಸುವ ಮೂಲಕ ನಿಖರವಾದ ಚುನಾವಣಾ ವೆಚ್ಚದ ವರದಿಯನ್ನು ನೀಡುವಂತೆ ಕೇಂದ್ರ ಚುನಾವಣಾ ಆಯೋಗದ ವೆಚ್ಚವೀಕ್ಷಕ ವಿ.ಎಸ್.ನೇಗಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿಂದು ನಡೆದ ಚುನಾವಣಾ ವೆಚ್ಚ ವೀಕ್ಷಕರು ಹಾಗೂ ವಿವಿಧ ತಂಡಗಳ ಮುಖ್ಯಸ್ಥರ ಸಭೆಯಲ್ಲಿ ಮಾತನಾಡಿದ ಅವರು. ಚುನಾವಣೆಯಲ್ಲಿ ಕಾನೂನುರೀತ್ಯ ವೆಚ್ಚ/ ಕಾನೂನುಬಾಹಿರ ವೆಚ್ಚವನ್ನು ಸಂಗ್ರಹಿಸುವ ನಿಟ್ಟಿನಲ್ಲಿ ವಿಡಿಯೋ ಸರ್ವೆಲೈನ್ಸ್ ತಂಡ ಹಾಗೂ ವಿಡಿಯೋ ವೀಕ್ಷಣಾ ತಂಡಗಳು, ಪ್ಲೈಯಿಂಗ್ ಸ್ಕ್ವಾಡ್ಗಳ ಕಾರ್ಯ ಪ್ರಮುಖವಾಗಿದ್ದು. ತಮ್ಮ ಕಾರ್ಯಗಳನ್ನು ಕಟ್ಟುನಿಟ್ಟಾಗಿ ನಿರ್ವಹಿಸಬೇಕು ಎಂದು ಹೇಳಿದರು.
ನಾಮಪತ್ರವನ್ನು ಹಿಂಪಡೆದ ನಂತರ ಎಲ್ಲ ಚುನಾವಣಾ ತಂಡಗಳು ತಮ್ಮ ಕಾರ್ಯಗಳನ್ನು ಚುರುಕುಗೊಳಿಸಬೇಕಿದ್ದು, ಚುನಾವಣಾ ಅಭ್ಯರ್ಥಿಗಳು ನಡೆಸುವ ಕಾರ್ಯಕ್ರಮ/ಪ್ರಚಾರದ ಮೇಲೆ ಕಣ್ಗಾವಲು ಹಾಕುವ ಮೂಲಕ ವೆಚ್ಚದ ಕರಾರುವಾಕ್ಕಾದ ಮಾಹಿತಿಯನ್ನು ಸಂಗ್ರಹಿಸಿ, ಸಹಾಯಕ ಚುನಾವಣಾ ವೆಚ್ಚ ವೀಕ್ಷಕರಿಗೆ ನೀಡಬೇಕು. ಸಾಮಾಜಿಕ ಜಾಲತಾಣ/ ವಿದ್ಯುದ್ಮಾನ ಮಾಧ್ಯಮಗಳ ಜಾಹೀರಾತುಗಳ ಮೇಲೆ ನಿಗಾವಹಿಸುವ ಮೂಲಕ ಆ ವೆಚ್ಚಗಳ ಬಗ್ಗೆ ವರದಿ ನೀಡಬೇಕು ಎಂದು ಅವರು ತಿಳಿಸಿದರು.
ಚುನಾವಣಾ ತಂಡಗಳು ತಯಾರಿಸುವ ವರದಿಗಳನ್ನು ಸಹಾಯಕ ಚುನಾವಣಾ ವೆಚ್ಚ ವೀಕ್ಷಕರಿಗೆ ಸಲ್ಲಿಸಬೇಕು ಹಾಗೂ ಅದೇ ವರದಿಯನ್ನು ಇ-ಮೇಲ್ ಮೂಲಕ ಚುನಾವಣಾ ವೆಚ್ಚ ವೀಕ್ಷಕರಿಗೆ ಸಲ್ಲಿಸಬೇಕು ಎಂದು ಅವರು ತಿಳಿಸಿದರು. ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ಮಾತನಾಡಿ, ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲಿ ಚುನಾವಣಾ ಸಂಬಂಧ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಕೇಂದ್ರ ಚುನಾವಣಾ ವೆಚ್ಚ ವೀಕ್ಷಕರಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೋನವಂಶಿಕೃಷ್ಣ ಅವರು, ಗಂಭೀರ ಮತಗಟ್ಟೆಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಪಾರದರ್ಶಕವಾಗಿ ಚುನಾವಣಾ ಮತದಾನ ನಡೆಸಲು ಅಗತ್ಯವಾಗಿರುವ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಅನುಮತಿ ಪಡೆದಿರುವ ಶೇ.90ರಷ್ಟು ಶಸ್ತ್ರಾಸ್ತ್ರಗಳು ಈಗಾಗಲೇ ಪೊಲೀಸ್ ಠಾಣೆಗಳಲ್ಲಿ ಆದ್ಯರ್ಪಣೆ ಮಾಡಿದ್ದು, 2-3 ದಿನಗಳಲ್ಲಿ ಉಳಿದ ಶಸ್ತ್ರಾಸ್ತ್ರಗಳನ್ನು ಪೊಲೀಸ್ ಠಾಣೆಗೆ ಆದ್ಯರ್ಪಣೆ ಮಾಡಬಹುದು ಎಂದು ಅವರು ತಿಳಿಸಿದರು. ಸಭೆಯಲ್ಲಿ ಚುನಾವಣಾ ವೆಚ್ಚ ಕೋಶದ ನೋಡಲ್ ಅಧಿಕಾರಿ ಶಿವಣ್ಣ ಮತ್ತಿತರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
