ಹರಪನಹಳ್ಳಿ :
ತಾಲ್ಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಛೇರಿಯಲ್ಲಿ ಸರ್ಕಾರ ಖಾಯಂ ಗೊಳಿಸಿದ ಸಿಬ್ಬಂದಿಗಳು ಒಬ್ಬರೂ ಇಲ್ಲದೆ ಕೆಲಸದ ಅವಧಿಯಲ್ಲಿ ಕಛೇರಿ ಬಣಗುಡುತ್ತಿದ್ದ ಪ್ರಸಂಗ ಮಂಗಳವಾರ ಬೆಳಕಿಗೆ ಬಂದಿದೆ.
ಪಟ್ಟಣದ ಕೊಟ್ಟೂರು ರಸ್ತೆಗೆ ಹೊಂದಿಕೊಂಡಿರುವ ಕೃಷಿ ಉತ್ಪನ್ನ ಮಾರುಕಟ್ಟೆಯು 1997 ರಲ್ಲಿ ಉಪಮಾರುಕಟ್ಟೆ ದರ್ಜೆಯಿಂದ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆಯಾಗಿ ಪರಿವರ್ತನೆ ಗೊಂಡು ಈ ಮಾರುಕಟ್ಟೆಯ ಸಮಿತಿಯು 13 ಜನ ಚುನಾಯಿತ, ಹಾಗೂ 3 ಜನ ನಾಮ ನಿರ್ಧೇಶನಗೊಂಡ ಒಟ್ಟು 16 ಜನ ನಿರ್ದೇಕರನ್ನು ಒಳಗೊಂಡ ಬೃಹತ್ ಕೃಷಿಉತ್ಪನ್ನ ಮಾರುಕಟ್ಟೆಯಾಗಿ ಕಾರ್ಯನಿರ್ವಹಿಸುತ್ತ ಬಂದಿದೆ. ಇಲ್ಲಿ ಕೇವಲ 3 ಜನ ಸರಕಾರದಿಂದ ನೇಮಕಗೊಂಡ ಸಿಬ್ಬಂದಿಯನ್ನು ಹೊಂದಿರುತ್ತದೆ. ಇದರ ಪೈಕಿ ಸರ್ಕಾರದ ನಿಯಮಗಳ ಪ್ರಕಾರ ಶೇಕಡ 50ರಷ್ಟು ಸಿಬ್ಬಂದಿಯು ಕಛೇರಿಯಲ್ಲಿ ಹಾಜರಿರುವುದು ಖಡ್ಡಾಯವಾಗಿರುತ್ತದೆ.
ಅಂದರೆ ಒಂದೇ ದಿನ ಮೂರು ಸಿಬ್ಬಂದಿಯ ಪೈಕಿ ಒಬ್ಬ ನೌಕರರಿಗೆ ಮಾತ್ರ ರಜೆ ತೆಗೆದುಕೊಳ್ಳಲು ಅವಕಾಶವಿರುತ್ತದೆ. ಇನ್ನೂ ಉಳಿದ ಇಬ್ಬರು ಕಛೇರಿಯಲ್ಲಿ ಕರ್ತವ್ಯಕ್ಕೆ ಹಾಜರಾಗಿರಬೇಕಾಗುತ್ತದೆ. ಈ ನಿಯಮಗಳನ್ನು ಗಾಳಿಗೆ ತೂರಿ ಒಬ್ಬ ಸಿಬ್ಬಂದಿಯೂ ಕರ್ತವ್ಯಕ್ಕೆ ಹಾಜರಾಗದೆ ಗೈರು ಹಾಜರಾಗಿ ಬೇಜವಾಬ್ದಾರಿತನವನ್ನು ಮೆರೆದಿದ್ದಾರೆ. ಉಳಿದ ಸಿಬ್ಬಂದಿಯು ಹೊರಗುತ್ತಿಗೆ ಅಧಾರದ ಮೇಲೆ ಕಾರ್ಯನಿರ್ವಯಿಸುತ್ತಿದ್ದಾರೆ ಇವರ ಪೈಕಿ ಕಾವಲುಗಾರ ಹುದ್ದೆಗೆ ನೇಮಕಗೊಂಡ ಪಕ್ಕೀರಪ್ಪ ಎಂಬ ವ್ಯಕ್ತಿ ಮಾತ್ರ ಹಾಜರಿದ್ದು, ಸಮಸ್ಯೆಯನ್ನು ಹೊತ್ತು ಬಂದ ರೈತರಿಗೆ ಸರಿಯಾದ ಮಹಿತಿ ನೀಡ ಬಲ್ಲನೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ವರದಿಗಾರನಾಗಿ ರೈತರ ದೂರಿನನ್ವಯ ಮಾಹಿತಿ ಕೇಳಲು ಹೋದ ಸಂದರ್ಭದಲ್ಲಿ ಕಛೇರಿಯ ಕುರ್ಚಿಗಳು ಖಾಲಿ ಇರುವುದನ್ನು ಕಂಡು ಸಿಬ್ಬಂದಿಗಳಿಲ್ಲದ ಕಛೇರಿಯನ್ನು ನೋಡಿ ಸಿಬ್ಬಂದಿಗಳ ಬಗ್ಗೆ ವಿಚಾರಿಸಿದಾಗ ಕಾವಲುಗಾರನು ಕಾರ್ಯದರ್ಶಿಯವರ ದೂರವಾಣಿ ಸಂಖ್ಯೆಯನ್ನು ನೀಡಿದನು. ತಕ್ಷಣವೇ ಕಾರ್ಯದರ್ಶಿಯವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ನಾನು ವೈಯಕ್ತಿಕ ಕೆಲಸ ನಿಮಿತ್ತವಾಗಿ ರಜೆ ಹಾಕಿರುತ್ತೇನೆ, ಉಳಿದ ಸಿಬ್ಬಂದಿಯು ಅವರವರ ಕೆಲಸ ನಿಮಿತ್ತ ಕರ್ತವ್ಯಕ್ಕೆ ಹಾಜರಾಗಿರುವುದಿಲ್ಲ. ನೀವು ಮೊದಲೇ ಬರುವುದಾಗಿ ತಿಳಿಸಿದ್ದರೆ ನಾನೇ ಬರುತ್ತಿದ್ದೆ ಎಂಬ ಉಡಾಫೆ ಉತ್ತರ ನೀಡಿ ನಯವಾಗಿ ಜಾರಿಕೊಂಡ ಕಾರ್ಯದರ್ಶಿ ಎ ಜಿ ವೀರಣ್ಣ.
ಈಗಾದರೆ ರೈತರ ಪಾಡೇನು? ಇವರಿಗೆ ಸರಕಾರ ಸಂಭಾವನೆ ನೀಡುತ್ತಿರುವುದು ಜನರ ಆಹಾವಾಲುಗಳನ್ನು ಬಗೆಹರಿಸಲೋ ಅಥವಾ ರಜೆಹಾಕಿ ಮಜಾಮಾಡಲೋ ಎಂಬುದನ್ನು ಸಂಬಂಧ ಪಟ್ಟ ಮೇಲಾಧಿಕಾರಿಗಳು ಸ್ಪಷ್ಟಪಡಿಸಬೇಕಾಗಿದೆ.
ಈ ವೇಳೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾಜಿ ಅಧ್ಯಕ್ಷ ಡಿ ಜಂಬಣ್ಣ ಚಿಗಟೇರಿ ಮಾತನಾಡಿ ಸರಕಾರದ ನಿಯಾಮವಳಿ ಪ್ರಕಾರ 3 ಸಿಬ್ಬಂದಿಗಳ ಪೈಕಿ 2 ಸಿಬ್ಬಂದಿಗಳಾದರು ಹಾಜರಿರಬೇಕು. ನಾನು ಒಬ್ಬ ಸದಸ್ಯನಾಗಿ ರೈತರು ತಂದ ಅಹಾವಾಲುಗಳನ್ನು ಹೇಳಲು ಬಂದರೆ ಕಛೇರಿಯಲ್ಲಿ ಖಾಲಿ ಕುರ್ಚಿಗಳನ್ನು ಕಂಡು ದಿಗ್ಭ್ರಮೆಗೊಂಡೆ. ಪದೆ ಪದೆ ಈ ರೀತಿ ಆಗುತ್ತಿರುವುದನ್ನು ಅಧ್ಯಕ್ಷರ ಗಮನಕ್ಕೆ ತಂದರೂ ಯಾವ ಪ್ರಯೋಜನವಾಗಿಲ್ಲ. ಇದನ್ನು ಮೇಲಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಕ್ರಮಕೈಗೊಳ್ಳಬೇಕು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ