ಸಚಿವರ ಪ್ರಶ್ನೆಗಳಿಗೆ ಉತ್ತರಿಸಲು ತಡಬಡಾಯಿಸಿದ ತಾ.ಪಂ. ಇ.ಓ.

ಚಿಕ್ಕನಾಯಕನಹಳ್ಳಿ
 
  ಶೌಚಾಲಯ ದುರಸ್ತಿ ಮಾಡಲು ವರ್ಷಗಟ್ಟಲೇ ಬೇಕಾ?. ಹೇಳಿಕೊಳ್ಳುವುದಕ್ಕೆ ಇದು ಸಚಿವರ ಕ್ಷೇತ್ರ, ಪ್ರಶ್ನಿಸುವವರಿಗೆ ನಾನು ಉತ್ತರಿಸಬೇಕು, ಇದೇಯೇನ್ರಿ ನಿಮ್ಮ ಕಾರ್ಯನಿರ್ವಹಣೆ ಎಂದು ತಾ.ಪಂ.ಕಾರ್ಯನಿರ್ವಹಣಾಧಿಕಾರಿಗೆ ಸಚಿವರು ಪ್ರಶ್ನಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ನಡೆಯಿತು.
   ತುಮಕೂರು ಬಹಿರ್ದೆಸೆ ಮುಕ್ತ ಜಿಲ್ಲೆ ಎಂದು ಕೇಂದ್ರ ಸರ್ಕಾರಕ್ಕೆ ಹೇಳಿಕೊಂಡಿದ್ದೇವೆ, ಅಂಗನವಾಡಿ ಶೌಚಾಲಯ ರಿಪೇರಿ ಯಾಕೆ ಮಾಡುತ್ತಿಲ್ಲ, ಅಧಿಕಾರಿಗಳಾದವರು ನೀವೇಕೆ ಕೆಲಸ ತೆಗೆದುಕೊಳ್ಳುತ್ತಿಲ್ಲ, ಏನ್ ಕೆಲಸ ಮಾಡುತ್ತೀರಿ ನೀವು, ಸರ್ಕಾರ 40ಸಾವಿರ ಹಣ ನೀಡಿದರೂ ದುರಸ್ತಿ ಮಾಡಲು ವರ್ಷಗಟ್ಟಲೇ ಬೇಕಾ?, ಇದೆಲ್ಲಾ ಪೀಸ್ ವರ್ಕಸ್ ಕಣ್ರಿ ಎಂದು ಅಧಿಕಾರಿಗಳಿಗೆ ಸಚಿವರು ಮಾತಿನಲ್ಲೇ ಚಾಟಿ ಬೀಸಿದರು.
   2018-19ನೇ ಸಾಲಿನ ಸಮುದಾಯ ಶೌಚಾಲಯಗಳ ದುರಸ್ತಿಯಾಗದಿರುವ ಬಗ್ಗೆ ಸಚಿವರು ಬೇಸರಿಸಿಕೊಂಡು ಸಭೆಯಲ್ಲಿ ಸಚಿವರು ಈ ರೀತಿ ಮಾತನಾಡಿದರು.
   ತಾ.ಪಂ.ಕಾರ್ಯನಿರ್ವಹಣಾಧಿಕಾರಿ ನಾರಾಯಣಸ್ವಾಮಿ, ಸಚಿವರ ಈ ಪ್ರಶ್ನೆಗೆ, ತಡಬಡಾಯಿಸಿ, ಇದು ಪಿಡಿಓಗಳ, ಬೇರೆ ಅಧಿಕಾರಿಗಳ ಜವಬ್ದಾರಿ ಎಂದು ಫೋನಾಯಿಸಲು ಹೊರಟು ಗಲಿಬಿಲಿಗೊಂಡರು. 
    ಬಸವ, ಇಂದಿರಾ ಯೋಜನೆಯಡಿ ಮನೆ ಕಟ್ಟಿಕೊಳ್ಳಲು ಮಂಜೂರಾದ ಫಲಾನುಭವಿಗಳಲ್ಲಿ ಕುಣಿಗಲ್ ತಾಲ್ಲೂಕಿನಲ್ಲಿ 37ಮನೆಗಳು ಡುಪ್ಲಿಕೆಟ್ ಆಗಿವೆ, ಅದೇ ರೀತಿ ರಾಜ್ಯದಲ್ಲಿ 95ಸಾವಿರ ಮನೆಗಳು ಡುಪ್ಲಿಕೆಟ್ ಆಗಿವೆ, ಹೀಗೆ ನಮ್ಮ ತಾಲ್ಲೂಕಿನಲ್ಲಿ ಎಷ್ಟು ಮನೆಗಳು ಡುಪ್ಲಿಕೆಟ್ ಆಗಿವೆ ಎಂದ ಪ್ರಶ್ನಿಸಿದಾಗ ತಾ.ಪಂ.ಕಾರ್ಯನಿರ್ವಹಣಾಧಿಕಾರಿಗಾಗಲಿ, ಅದಕ್ಕೆ ಸಂಬಂಧ ಪಟ್ಟ ಅಧಿಕಾರಿಗಾಗಲಿ ಮಾಹಿತಿ ಇಲ್ಲದೆ ಪರದಾಡಿದರು, ಕೊನೆಗೆ ತಾಲ್ಲೂಕು ಪಂಚಾಯಿತಿಗೆ ಸಂಬಂದಪಟ್ಟಂತೆ ಒಂದು ದಿನ ಸಭೆ ನಡೆಸುತ್ತೇನೆ ಅದಕ್ಕೆ ಅಧಿಕಾರಿಗಳು ತಯಾರಾಗಿರಿ ಎಂದು ಹೇಳಿದರು.ಶಾಸಕರ ಕೊಠಡಿಯನ್ನು ಇದುವರೆಗೂ ಸರಿಮಾಡಿಸಿಲ್ಲ, ನಿಮ್ಮನ್ನು ಕಾಡಿಬೇಡಿ ಪಡೆಯಬೇಕಾ ಎಂದು ಕಾರ್ಯನಿರ್ವಹಣಾಧಿಕಾರಿಗೆ ಸಚಿವರು ಪ್ರಶ್ನಿಸಿದರು.
      ತಾ.ಪಂ.ಅಧ್ಯಕ್ಷೆ ಚೇತನಗಂಗಾಧರ್ ಮಾತನಾಡಿ, ಬರಗೂರು ಗ್ರಾ.ಪಂ.ನಲ್ಲಿ ಲಕ್ಷ್ಮೀಕಾಂತ್ ಎಂಬ ಕಾರ್ಯದರ್ಶಿ ಸುಮಾರು 8ವರ್ಷಗಳಿಂದಲೂ ಅಲ್ಲಿಯೇ ಕೆಲಸ ಮಾಡುತ್ತಾ ಹಣ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ, ತಾಲ್ಲೂಕು ಪಂಚಾಯಿತಿಯಿಂದ ಜಿಲ್ಲಾ ಪಂಚಾಯಿತಿಗೆ ಸುಮಾರು ಬಾರಿ ಈ ವಿಷಯಕ್ಕೆ ಸಂಬಂಧಪಟ್ಟಂತೆ ದೂರು ನೀಡಿದರೂ ಏನೂ ಕ್ರಮ ಕೈಗೊಳ್ಳುತ್ತಿಲ್ಲ, ಮೇವಿನ ಹಣದಲ್ಲೂ ಗ್ರಾ.ಪಂನಲ್ಲಿ ದುರುಪಯೋಗವಾಗಿದೆ, ಗ್ರಾ.ಪಂ.ನ ಬಿಲ್ಕಲೆಕ್ಟರ್ ಹಾಗೂ ಕಾರ್ಯದರ್ಶಿ ಇಬ್ಬರೂ ಒಬ್ಬರ ಮೇಲೆ ಒಬ್ಬರು ದೂರು ಹೇಳಿಕೊಂಡು ಪಂಚಾಯಿತಿ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ, ಇವರ ಮೇಲೆ ತಾ.ಪಂ, ಜಿ.ಪಂ.ಗೆ ದೂರು ನೀಡಿದರೂ ಏನು ಕ್ರಮವಿಲ್ಲ, ಅಧಿಕಾರಿಗಳ ಕಳ್ಳತನಕ್ಕೆ ಅಧಿಕಾರಿಗಳೇ ಸಪೋರ್ಟ್ ಆಗಿದೆ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನೀಡುವ ನೋಟಿಸ್ಗೆ ಯಾವ ಬೆಲೆ ಇಲ್ಲದಂತಾಗಿದೆ ಎಂದು ಆರೋಪಿಸಿದರು.
    ತಾಲ್ಲೂಕಿನಲ್ಲಿ ಕೆಲವು ಕೆರೆಗಳಿಗೆ ಈ ಬಾರಿ ನೀರು ಬಂದಿದೆ, ಮೀನುಗಾರಿಕೆ ಅಧಿಕಾರಿಗಳು ಹೊಸ ಯೋಜನೆ ಸಿದ್ದಪಡಿಸಿ ಕೆರೆಗಳಿಗೆ ಮೀನು ಬಿಡಿ ಎಂದು ಸಚಿವರು ಸೂಚಿಸಿದರು.ಕಾವೇರಿ ನೀರಾವರಿ ನಿಗಮದವರು ನಡುವನಹಳ್ಳಿಗೆ ನೀರು ಹರಿಸಿ, ಪುರಸಭೆಯವರು ತರಬೇನಹಳ್ಳಿಗೆ ನೀರು ನೀಡಿ ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ತಿಳಿಸಿದರು.ಜಿ.ಪಂ.ಸದಸ್ಯ ಮಹಲಿಂಗಯ್ಯ ಮಾತನಾಡಿ, ತಾಲ್ಲೂಕಿನ ಗ್ರಾಮಗಳಲ್ಲಿ ನಿರ್ಮಿತವಾಗಿರುವ ಆರ್.ಓ ಪ್ಲಾಂಟ್ ಸರಿಯಾಗಿ ನಿರ್ವಹಣೆಯಿಲ್ಲದೆ ಕೆಟ್ಟು ನಿಂತಿವೆ, ಇದನ್ನು ಸರಿಪಡಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸುವಂತೆ ಹೇಳಿದರು.
    ಸಭೆಯಲ್ಲಿ ಜಿ.ಪಂ.ಸದಸ್ಯ ವೈ.ಸಿ.ಸಿದ್ದರಾಮಯ್ಯ, ರಾಮಚಂದ್ರಯ್ಯ, ಕಲ್ಲೇಶ್, ಡಿಸಿಸಿ ಬ್ಯಾಂಕ್ ನಿರ್ದೆಶಕ ಸಿಂಗದಹಳ್ಳಿ ರಾ ಜ್ಕು ಮಾರ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಹೆಚ್.ಆರ್.ಶಶಿಧರ್, ಟಿ.ಎ.ಪಿ.ಸಿ.ಎಂ.ಎಸ್ನ ಎನ್.ಎನ್.ಶ್ರೀಧರ್ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link