ಬೀದರ್‍ನ ಕರ್ನಾಟಕ ಪಶುವಿವಿಯಿಂದ ಎತ್ತಿನಹೊಳೆ ಯೋಜನೆಗೆ ತಡೆ

ತಿಪಟೂರು

  ಮೊನ್ನೆತಾನೆ ಎತ್ತಿನಹೊಳೆ ಯೋಜನೆಗೆ ರಾಜ್ಯ ಸರ್ಕಾರದ ಜಲ ಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್, ಸಚಿವ ಮಾಧುಸ್ವಾಮಿ, ಶಾಸಕ ಬಿ.ಸಿ.ನಾಗೇಶ್ ನೇತೃತ್ವದಲ್ಲಿ ಇಲ್ಲಿ ನಾಲಾ ಕಾಮಗಾರಿಗೆ ಚಾಲನೆ ನೀಡಿದ್ದರು. ಆದರೆ ಕರ್ನಾಟಕ ಬೀದರ್‍ನ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಕುಲಸಚಿವರು ಜ. 21 ರಂದು ಕೊನೇಹಳ್ಳಿಯ ಅಮೃತ ಮಹಲ್ ಕಾವಲಿನಲ್ಲಿ ಕಾಮಗಾರಿ ಮಾಡದಂತೆ ತಿಳಿಸಿದ್ದಾರೆ.

   ಪಶ್ಚಿಮಘಟ್ಟದ ಎತ್ತಿನಹೊಳೆಯಿಂದ ಕೋಲಾರ ಮತ್ತು ಶ್ರೀನಿವಾಸಪುರಕ್ಕೆ ಕುಡಿಯುವ ನೀರನ್ನು ಒದಗಿಸುವ ಮಹಾತ್ವಾಕಾಂಕ್ಷಿ ಯೋಜನೆಗೆ ಹಲವಾರು ಎಡರು ತೊಡರುಗಳನ್ನು ಕಳೆದು, ನಾಲಾ ಕಾಮಗಾರಿ ಆರಂಭವಾಗಿದ್ದನ್ನು ಕಂಡು ಜನರು ನಮಗೊಂದಿಷ್ಟು ನೀರು ಸಿಗಬಹುದೇನೋ ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಆದರೆ ಇದೀಗ ಕೊನೇಹಳ್ಳಿ ಸಮೀಪದ ಅಮೃತ್ ಮಹಲ್ ಕಾವಲಿನಲ್ಲಿ ಯಾವುದೆ ಅನುಮತಿ ಪಡೆಯದೆ ಏಕಾಏಕಿ ನಾಲಾ ಕಾಮಗಾರಿ ಆರಂಭಿಸಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.

   ಇದಲ್ಲದೆ ಹಸಿರು ಪೀಠ, ಸುಪ್ರೀಂ ಕೋರ್ಟ್ ತೀರ್ಪು ಸಹ ಉಲ್ಲಂಘಿಸಲಾಗಿದೆ. ಕಾಮಗಾರಿ ಮುನ್ನ ಸಂಬಂಧಿಸಿದ ಇಲಾಖೆಗಳಿಂದ ಅನುಮತಿ ಪಡೆಯಲಾಗಿಲ್ಲ ಎಂದು ಪರಿಸರವಾದಿಗಳು ಆರೋಪಿಸಿದ್ದು, ಇನ್ನು ಹಿನ್ನಡೆಯಾಗುತ್ತದೇನೊ, ನೀರು ಹರಿಯುವುದಿಲ್ಲವೇನೊ ಎಂಬ ಪ್ರಶ್ನೆಗಳು ಜನರ ಮನಸ್ಸಿನಲ್ಲಿ ಮೂಡುತ್ತಿವೆ.

   ಈ ಎತ್ತಿನಹೊಳೆ ಯೋಜನೆಯ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗಿದೆ. ಕಾಮಗಾರಿಗಳು ನಡೆಯುವ ಪ್ರದೇಶದಲ್ಲಿ ಅರಣ್ಯ ವಯಲಗಳಿದ್ದು ಅಲ್ಲಿ ಕಾಮಗಾರಿ ಮಾಡಲು ಪರಿಸರ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯ. ಅರಣ್ಯದಲ್ಲಿ ಯಾವುದೇ ಕಾಮಗಾರಿ ನಡೆಸಬಾರದು ಎಂದು ಸುಪ್ರೀಂಕೋರ್ಟ್ ಹಸಿರುಪೀಠ ಆದೇಶ ನೀಡಿದೆ. ಪರಿಸರ ಇಲಾಖೆಯು ಹಲವು ನಿಯಮಗಳನ್ನು ರೂಪಿಸಿದೆ. ಆದರೆ ಗುತ್ತಿಗೆದಾರರು ಈ ಎಲ್ಲಾ ನಿಯಮಗಳನ್ನು ಗಾಳಿ ತೂರಿ ಕಾಮಗಾರಿ ನಡೆಸುತ್ತಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ ಎನ್ನುತ್ತಾರೆ ಹೋರಾಟಗಾರರು.

   ಸಕಲೇಶಪುರದಿಂದ ಎತ್ತಿನಹೊಳೆ ನಾಲಾ ಕಾಮಗಾರಿ ಆರಂಭವಾಗಿದೆ. ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನಲ್ಲಿ ನಾಲೆ ನಿರ್ಮಾಣ ಕಾಮಗಾರಿ ನಿರಂತರವಾಗಿ ನಡೆಯುತ್ತಲೆ ಇದೆ. ತಾಲ್ಲೂಕಿನ ಕೊನೆಹಳ್ಳಿ ಸಮೀಪದ ಅಮೃತ್ ಮಹಲ್ ಕಾವಲ್ ಅರಣ್ಯ ಪ್ರದೇಶದಲ್ಲಿ ಎತ್ತಿನಹೊಳೆ ನಾಲೆ ಹಾದು ಹೋಗುತ್ತಿದೆ. ಇಲ್ಲಿ ಕಾನೂನು ಉಲ್ಲಂಘಿಸಿ ನಾಲೆ ನಿರ್ಮಿಸುವ ಕೆಲಸ ನಡೆಯುತ್ತಿದೆ ಎಂದು ಹೋರಾಟಗಾರುಉ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

   ಇನ್ನು ಅಮೃತ್ ಮಹಲ್ ಕಾವಲ್‍ನಲ್ಲಿ ಕರ್ನಾಟಕ ಪಶು ವೈದ್ಯಕೀಯ ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಸೇರಿದ ದೇಶೀಯ ಅಮೃತ್ ಮಹಲ್ ತಳಿ ರಾಸುಗಳ ಅಭಿವೃದ್ಧಿಗೆ ಸಂಬಂಧಿಸಿದ ಜಾನುವಾರು ಸಂಶೋಧನೆ ಮತ್ತು ಮಾಹಿತಿ ಕೇಂದ್ರವಿದೆ.
ಅಮೃತ್ ಮಹಲ್ ರಾಸುಗಳ ಮೇವಿಗಾಗಿ ಈ ಪ್ರದೇಶವನ್ನು ಮೀಸಲಿಟ್ಟಿದೆ. ಈ ಹಿನ್ನೆಲೆಯಲ್ಲಿ ಇಲ್ಲಿ ನಾಲಾ ಕಾಮಗಾರಿ ಆರಂಭಿಸುವ ಮೊದಲು ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿವಿಯಿಂದ ಅನುಮತಿ ಪಡೆಯುವಂತೆ ಸೂಚಿಸಲಾಗಿತ್ತು.

    ಆದರೆ ಗುತ್ತಿಗೆದಾರರು ವಿಶ್ವವಿದ್ಯಾಲಯದೊಂದಿಗೆ ಒಪ್ಪಂದ ಮಾಡಿಕೊಳ್ಳುವ ಮೊದಲೆ ವಿಶ್ವವಿದ್ಯಾಲಯದ ಷರತ್ತುಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ ಕಾಮಗಾರಿ ಕೈಗೊಂಡಿದ್ದಾರೆ. ಕಾವಲು ಭೂಮಿಯನ್ನು ಪರಭಾರೆ ಮಾಡಬಾರದು ಹಾಗೂ ಯಾವುದೇ ಕಾಮಗಾರಿ ನಡೆಸಬಾರದು ಎಂದು ಹೈಕೋರ್ಟ್ ಆದೇಶಗಳನ್ನು ನೀಡಿದೆ. ಕೋರ್ಟ್ ಆದೇಶಗಳಿಗೂ ಗುತ್ತಿಗೆದಾರರು ಕಿಮ್ಮತ್ತು ನೀಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

     ಅಮೃತ್ ಮಹಲ್ ಕಾವಲ್ ಅರಣ್ಯ ಪ್ರದೇಶದ ಸುಮಾರು 82 ಎಕರೆಯಲ್ಲಿ ಸುಮಾರು 2 ಕಿಲೋ ಮೀಟರ್ ನಾಲೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಮುಖ್ಯವಾದ ಸಂಗತಿ ಎಂದರೆ ಎತ್ತಿನಹೊಳೆ ಯೋಜನೆಗೆ ತಿಪಟೂರು ತಾಲ್ಲೂಕಿನಲ್ಲಿ ಹೆಚ್ಚು ಮಂದಿ ರೈತರು ಭೂಮಿ ಕಳೆದುಕೊಳ್ಳುತ್ತಿದ್ದಾರೆ. ಸುಮಾರು 1103 ಎಕರೆ ಭೂಮಿಯಲ್ಲಿ 53 ಕಿಲೋ ಮೀಟರ್ ಉದ್ದದ ನಾಲೆ ಕಾಮಗಾರಿ ನಡೆಯಲಿದೆ. ಆದರೂ ರೈತರ ಭೂಮಿಗೆ ವೈಜ್ಞಾನಿಕ ಮತ್ತು ಮಾರುಕಟ್ಟೆ ಬೆಲೆಯನ್ನು ನೀಡುತ್ತಿಲ್ಲ ಎಂದು ಎತ್ತಿನಹೊಳೆ ಹೋರಾಟ ಸಮಿತಿಯು ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.

     ರಾಜ್ಯದ ಕೆಲವೆ ಹುಲ್ಲುಗಾವಲುಗಳ ಪೈಕಿ ತಿಪಟೂರು ಗಡಿಭಾಗದಲ್ಲಿರುವ ಕೊನೆಹಳ್ಳಿಯ ಅಮೃತ್ ಮಹಲ್ ಕಾವಲ್ ಕೂಡ ಒಂದು. ಇಂತಹ ಪ್ರದೇಶದಲ್ಲಿ ಅಮೃತ್ ಮಹಲ್ ರಾಸುಗಳ ಸಂತಾನೋತ್ಪತ್ತಿ ಕೇಂದ್ರವಿದ್ದು ನಾಲೆ ನಿರ್ಮಾಣದಿಂದ ಈ ಕೇಂದ್ರ ಮತ್ತು ಹುಲ್ಲುಗಾವಲಿಗೆ ಧಕ್ಕೆ ಆಗಲಿದೆ. ಕರ್ನಾಟಕ ಪಶುವೈದ್ಯಕೀಯ ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಸಚಿವರು ಎತ್ತಿನಹೊಳೆ ಯೋಜನೆಯ ಕಾರ್ಯಪಾಲಕ ಅಭಿಯಂತರರಿಗೆ ಪತ್ರವನ್ನು ಬರೆದಿದ್ದು ವಿಶ್ವವಿದ್ಯಾಲಯದ ಜೊತೆ ಒಪ್ಪಂದ ಮಾಡಿಕೊಂಡ ನಂತರ ಕಾಮಗಾರಿ ಕೈಗೊಳ್ಳಬೇಕೆಂದು ಗಂಭೀರವಾಗಿ ಸೂಚನೆ ನೀಡಿದ್ದರೂ ಸಹ ಅದನ್ನು ಲೆಕ್ಕಿಸದೆ ಎತ್ತಿನಹೊಳೆ ಅಭಿಯಂತರರು ಕಾಮಗಾರಿ ಮುಂದುವರಿಸಿದ್ದಾರೆ.

      ನಮ್ಮ ಸೂಚನೆಯ ನಡುವೆಯೂ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ನಡೆಸಲು ವಿ.ವಿ. ಒಪ್ಪಿಗೆ ನೀಡಿಲ್ಲ. ಗುತ್ತಿಗೆದಾರರು ದಬ್ಬಾಳಿಕೆಯಿಂದ ಕಾಮಗಾರಿ ನಡೆಸುತ್ತಿದ್ದಾರೆ. ಈ ಬಗ್ಗೆ ವಿ.ವಿ. ಕುಲಸಚಿವರಿಗೆ ಮಾಹಿತಿ ನೀಡಿದ್ದೇನೆ. ಬೀದರ್‍ನಲ್ಲಿ ಕೃಷಿ ಮೇಳ ನಡೆಯಲಿದ್ದು, ಅದರ ಆಯೋಜನೆಯಲ್ಲಿ ಅವರು ನಿರತರಾಗಿದ್ದಾರೆ. ಮೇಳ ಮುಗಿದ ಕೂಡಲೆ ಈ ಬಗ್ಗೆ ಮುಂದಿನ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಕೇಂದ್ರದ ಮುಖ್ಯಸ್ಥ ಡಾ.ರುದ್ರಸ್ವಾಮಿ ಗೆ ತಿಳಿದರು.

    ಎತ್ತಿನಹೊಳೆಯಲ್ಲಿ ತಾಲ್ಲೂಕಿಗೆ ನೀರು ಹಂಚಿಕೆಯಾಗದ ಹೊರತು ತಾಲ್ಲೂಕಿನಲ್ಲಿ ಕಾಮಗಾರಿ ನಡೆಯಲು ಬಿಡುವುದಿಲ್ಲ. ರೈತರ ಭೂಮಿಯಾಗಲಿ, ಸರ್ಕಾರಿ ಭೂಮಿಯಾಗಲಿ ನೆಲದ ಕಾನೂನಿಗೆ ಗೌರವ ಕೊಟ್ಟು ಕೆಲಸ ಆರಂಭಿಸಬೇಕು ಎಂದು ತಿಪಟೂರು ಎತ್ತಿನಹೊಳೆ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ದೇವರಾಜ್ ತಿಮ್ಲಾಪುರ ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link