ಕವಿಗಳಿಗೆ ಸಮಕಾಲೀನ ಪ್ರಜ್ಞೆ ಅಗತ್ಯ

ತುಮಕೂರು

      ಸಾಹಿತ್ಯ ಕ್ಷೇತ್ರದಲ್ಲಿ ಕವಿಯಾದವರಿಗೆ ತನ್ನದೇ ಆದ ಸ್ಥಾನವಿದ್ದು, ಕಾವ್ಯ ರಚನೆಯ ನೆಲೆಯಲ್ಲಿ ಅವರಿಗೆ ಸಮಕಾಲೀನ ಪ್ರಜ್ಞೆ ಅಗತ್ಯವಾಗಿರಬೇಕು ಎಂದು ಎಂಪ್ರೆಸ್ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರೊ.ಕೆ.ಎಸ್.ಸಿದ್ದಲಿಂಗಪ್ಪ ತಿಳಿಸಿದರು.
ಅವರು ಭಾನುವಾರ ತುಮಕೂರಿನ ಶ್ರೀ ಶಿರಡಿ ಸಾಯಿಬಾಬಾ ಮಂದಿರದ ಸಭಾಂಗಣದಲ್ಲಿ ಸಂತೃಪ್ತಿ ಸಾಹಿತ್ಯ, ಸಾಂಸ್ಕøತಿಕ ಮತ್ತು ಶೈಕ್ಷಣಿಕ ಟ್ರಸ್ಟ್ ವತಿಯಿಂದ ನೀಡಲಾದ 2017ನೇ ನೃಪ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.

       ಕವಿಯಾದವರು ತಾವು ಬದುಕಿನಲ್ಲಿ ಅನುಭವಿಸಿದ ಅನುಭವಗಳನ್ನು ಸುಂದರವಾದ ಪದಪುಂಜಗಳ ಮೂಲಕ ಕಟ್ಟಿಕೊಡಬೇಕು. ಹಾಗೆ ಕಟ್ಟಿದ ಕಾವ್ಯಕೃತಿಗಳು ಕವಿಯನ್ನು ಸಾರ್ವಕಾಲಿಕವಾಗಿ ಬಿಂಬಿಸುತ್ತಾ ಹೋಗುತ್ತವೆ. ಕವಿ ಬರೆದ ಕವಿತೆ ಸಾರ್ಥಕತೆ ಪಡೆಯುವುದು ಅದು ಸಹೃದಯರನ್ನು ತಲುಪಿದಾಗ ಮಾತ್ರ. ಆದ್ದರಿಂದ ಕವಿಯಾದವನು ಸಹೃದಯರನ್ನು ದೃಷ್ಟಿಯಲ್ಲಿಟ್ಟುಕೊಂಡು ಬರೆಯಬೇಕೇ ಹೊರತು, ಪ್ರಶಸ್ತಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಬರೆಯಬಾರದು. ಕವಿತೆಗೆ ವಸ್ತು ಆಯ್ಕೆಮಾಡಿಕೊಳ್ಳುವುದರ ಜೊತೆಗೆ ವೈವಿಧ್ಯತೆ, ಕಾಲಘಟ್ಟದ ಅರಿವು, ಸ್ವಂತಿಕೆ ಇರಬೇಕು. ಸಮಾಜದ ವಿವಿಧ ಸ್ಥರಗಳನ್ನು, ಮೌಲ್ಯಗಳನ್ನು ಒಳಗೊಂಡು ಬರೆಯುವುದನ್ನು ರೂಢಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.

      ಪತ್ರಕರ್ತ ಜಿ.ಇಂದ್ರಕುಮಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಾ ಪ್ರಶಸ್ತಿಯ ಮಾನದಂಡಗಳನ್ನು ಕುರಿತು ಅರ್ಹರಿಗೆ ಪ್ರಶಸ್ತಿಗಳು ದೊರಕುವಂತಾಗಬೇಕು. ಪ್ರಶಸ್ತಿ ಪಡೆಯಲಿಕ್ಕೂ ಆಮಿಷಗಳನ್ನೊಡ್ಡುವ ಸನ್ನಿವೇಶಗಳು ನಿರ್ಮಾಣಗೊಳ್ಳುತ್ತಿದ್ದು, ಆಯ್ಕೆ ಸಮಿತಿಯವರು ಆಮಿಷಗಳಿಗೆ ಬಲಿಯಾಗದೆ ಪ್ರಾಮಾಣಿಕವಾಗಿ ಅರ್ಹ ಕೃತಿಗಳಿಗೆ ಪ್ರಶಸ್ತಿಗಳನ್ನು ನೀಡಬೇಕು ಎಂದು ತಿಳಿಸಿದರು.

       ಸಾಹಿತಿಗಳು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ಮಾಜಿ ಅಧ್ಯಕ್ಷರಾದ ಪ್ರೊ.ಡಿ.ಚಂದ್ರಪ್ಪನವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಹಾಗಲವಾಡಿ ಪಾಲಾಕ್ಷರವರ ಸಾಹಿತ್ಯಿಕ ಸೇವೆಯನ್ನು ಶ್ಲಾಘಿಸುತ್ತಾ, ಸಾಹಿತ್ಯದ ವಿವಿಧ ಪ್ರಕಾರಗಳು ನೆಲದ ಮರೆಯ ನಿಧಾನವನ್ನು ತೆಗೆಯಲಿಕ್ಕೆ ಪ್ರಯತ್ನಿಸಬೇಕು. ಬದುಕಿನ ಅನುಭವಗಳೆನ್ನುವ ಸಂಪತ್ತನ್ನು ಸಾಹಿತ್ಯದಲ್ಲಿ ಹಿಡಿದಿಡುವ ಪ್ರಾಮಾಣಿಕ ಪ್ರಯತ್ನಮಾಡಿ ಸಾಹಿತ್ಯವನ್ನು ಇನ್ನಷ್ಟು ಉತ್ತುಂಗಕ್ಕೆ ಕೊಂಡೊಯ್ಯಬೇಕಾಗಿದೆ ಎಂದು ತಿಳಿಸಿದರು.

        ಇದೇ ಸಂದರ್ಭದಲ್ಲಿ ನೃಪ ಸಾಹಿತ್ಯ ಪ್ರಶಸ್ತಿಗೆ ಭಾಜನರಾದ ಹೊದೇಕಲ್ ರಂಗಮ್ಮನವರ ಕವನ ಸಂಕಲನವನ್ನು ಕುರಿತು ತುಮಕೂರು ವಿವಿ ಸಹಾಯಕ ಪ್ರಾಧ್ಯಾಪಕ ನಾಗಭೂಷಣ್ ಬಗ್ಗನಡು, ಸಿದ್ಧಾರೂಡ ಗು.ಕಟ್ಟಿಮನಿಯವರ ಕಥಾ ಸಂಕಲನವನ್ನು ಕುರಿತು ಲೇಖಕರು ಹಾಗೂ ಉಪನ್ಯಾಸಕರಾದ ಮುದ್ದವೀರಪ್ಪ, ಎ.ಎನ್.ರಮೇಶ್ ಗುಬ್ಬಿಯವರ ನಾಟಕವನ್ನು ಕುರಿತು ಕಡಬ ಪಿಯು ಕಾಲೇಜಿನ ಕನ್ನಡ ಉಪನ್ಯಾಸಕ ಎಲ್.ಎಚ್.ಮಲ್ಲಿಕಾರ್ಜುನಯ್ಯ, ಎ.ಎಸ್.ಮಕಾನ್‍ದಾರರ ಕವನ ಸಂಕಲನವನ್ನು ಕುರಿತು ವಿದ್ಯಾವಾಹಿನಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಜೆ.ಎಲ್.ರಾಜಶೇಖರ್ ಮಾತನಾಡಿ ಕೃತಿಗಳ ವೈಶಿಷ್ಟ್ಯವನ್ನು ವಿವರಿಸಿದರು.

        ಇದೇ ಸಂದರ್ಭದಲ್ಲಿ ಪ್ರಶಸ್ತಿ ಪುರಸ್ಕತರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲರುಗಳಾದ ಎಚ್.ಕೆ.ನರಸಿಂಹಮೂರ್ತಿ, ಎಂ.ಎಚ್.ನಾಗರಾಜ್, ಗುಬ್ಬಿ ಕಸಾಪ ಅಧ್ಯಕ್ಷರಾದ ಶಾಂತರಾಜು, ಉಪನ್ಯಾಸಕರಾದ ಜ್ಯೋತಿಪ್ರಕಾಶ್, ಚಿಕ್ಕರಾಜು ಉಪಸ್ಥಿತರಿದ್ದರು.

         ಉಷಾ ಪ್ರಾರ್ಥಿಸಿ, ಅಬ್ಬಿನಹೊಳೆ ಸುರೇಶ್ ಸ್ವಾಗತಿಸಿ, ಟ್ರಸ್ಟ್‍ನ ಅಧ್ಯಕ್ಷರಾದ ಆರ್.ಪಾಲಾಕ್ಷ ಹಾಗಲವಾಡಿಯವರು ಆಶಯ ನುಡಿಗಳನ್ನಾಡಿ, ವರಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು.ನಂತರ ನಡೆದ ಕವಿಗೋಷ್ಠಿಯಲ್ಲಿ ಕವಿಗಳು ತಮ್ಮ ಸ್ವರಚಿತ ಕವಿತೆಗಳನ್ನು ವಾಚಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link