ಕೊರಟಗೆರೆ:
ವಿದೇಶ, ಹೊರರಾಜ್ಯ ಮತ್ತು ಅಂತರ ಜಿಲ್ಲಾ ಕೇಂದ್ರದಿಂದ ಕೊರಟಗೆರೆ ಕ್ಷೇತ್ರಕ್ಕೆ ಆಗಮಿಸಿರುವ ಕೂಲಿಕಾರ್ಮಿಕರ ಸಂಪೂರ್ಣ ವಿಳಾಸದ ಅಂಕಿಅಂಶದ ಜೊತೆ ಆರೋಗ್ಯ ತಪಾಸಣೆ ನಡೆಸಬೇಕಾಗಿದೆ ಎಂದು ಆರೋಗ್ಯಾಧಿಕಾರಿ ವಿಜಯಕುಮಾರ್ಗೆ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ಸೂಚನೆ ನೀಡಿದರು.
ಪಟ್ಟಣದ ಪಪಂ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಕೊರೊನಾ ತುರ್ತುಸಭೆಯಲ್ಲಿ ಕೊರೊನಾ ವೈರಸ್ ಹರಡುವಿಕೆ ತಡೆಯಲು ಕಂದಾಯ ಮತ್ತು ಪಪಂಯಿಂದ ಕೈಗೊಂಡಿರುವ ಮುಂಜಾಗ್ರತಾ ಕ್ರಮದ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾತನಾಡಿದರು.
ಕ್ಷೇತ್ರದ 24 ಗ್ರಾಪಂ ವ್ಯಾಪ್ತಿಯಲ್ಲಿ ಆರೋಗ್ಯ ಇಲಾಖೆಯಿಂದಲೆ 9800 ಕೂಲಿ ಕಾರ್ಮಿಕರು ಆಗಮಿಸಿದ್ದಾರೆ ಎಂಬುದಾಗಿ ನೀವೆ ಮಾಹಿತಿ ನೀಡಿದ್ದೀರಿ. ಇವರ ಆರೋಗ್ಯ ತಪಾಸಣೆಯ ಜೊತೆ ಕೊರೊನಾ ಹರಡುವಿಕೆ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿದೆ. ಪಪಂಯ 15 ವಾರ್ಡಿನಲ್ಲಿ ಮುಂಜಾಗ್ರತೆ ವಹಿಸಿ ಅಪರಿಚಿತ ವ್ಯಕ್ತಿಗಳು ಪಟ್ಟಣದೊಳಗೆ ಬರದಂತೆ ಜಾಗೃತಿ ವಹಿಸುವಂತೆ ತಿಳಿಸಿದರು.
ಗೌರಿಬಿದನೂರು ಗಡಿಭಾಗ ಕಾಶಪುರದ ಚೆಕ್ಪೋಸ್ಟ್ ಮತ್ತು ಅಲಿಪುರದಿಂದ ಕೊರಟಗೆರೆಗೆ ಆಗಮಿಸುವ ಅಕ್ಕಾಜಿಹಳ್ಳಿ ಚೆಕ್ಪೋಸ್ಟ್ನಲ್ಲಿ ಹೆಚ್ಚಿನ ಭದ್ರತೆಯ ಜೊತೆ ದಿನದ 24 ಗಂಟೆಯು ನಿಗಾ ವಹಿಸುವ ಜವಾಬ್ದಾರಿ ಪೊಲೀಸ್ ಮತ್ತು ಕಂದಾಯ ಇಲಾಖೆಯ ಜವಾಬ್ದಾರಿ. ಕೊರಟಗೆರೆ ಕ್ಷೇತ್ರದ ಈಗಿನ ಭದ್ರತೆಯು ಉತ್ತಮವಾಗಿದೆ. ತಾಪಂ ಇಓ ಗ್ರಾಪಂಗಳಿಂದ ಅಂಕಿಅಂಶದ ಮಾಹಿತಿ ಪಡೆಯಬೇಕಾಗಿದೆ ಎಂದು ಸೂಚಿಸಿದರು.
ಕೊರಟಗೆರೆ ವಿಧಾನಸಭಾಕ್ಷೇತ್ರ ವ್ಯಾಪ್ತಿಯ ಕೆಸ್ತೂರು, ತೋವಿನಕೆರೆ, ಬುಕ್ಕಾಪಟ್ಟಣ, ಕುರಂಕೋಟೆ, ಕೋರಾ, ಅಕ್ಕಿರಾಂಪುರ, ಬೈಚಾಪುರ, ವಡ್ಡಗೆರೆ, ಹೊಳವನಹಳ್ಳಿ, ಕ್ಯಾಮೇನಹಳ್ಳಿ, ಕೋಳಾಲ ಗ್ರಾಪಂಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಚಿಂಪುಗಾನಹಳ್ಳಿ ಗ್ರಾಮದ ಬಳಿಯ ನಿರಾಶ್ರಿತರಿಗೆ ದವಸಧಾನ್ಯ ನೀಡಿ ಸಾಮಾಜಿಕ ಅಂತರ ಕಾಪಾಡುವ ಬಗ್ಗೆ ಜಾಗೃತಿ ಮೂಡಿಸಿದ ನಂತರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದರು.
ತುರ್ತುಸಭೆಯಲ್ಲಿ ತಾಪಂ ಉಪಾಧ್ಯಕ್ಷ ವೆಂಕಟಪ್ಪ, ತಹಸೀಲ್ದಾರ್ ಗೋವಿಂದರಾಜು, ಇಓ ಶಿವಪ್ರಕಾಶ್, ಪಪಂ ಮುಖ್ಯಾಧಿಕಾರಿ ಲಕ್ಷ್ಮಣಕುಮಾರ್, ಸಿಪಿಐ ನದಾಫ್, ಪಿಎಸೈ ಮುತ್ತುರಾಜು, ಅರಕೆರೆಶಂಕರ್, ಅಶ್ವತ್ಥನಾರಾಯಣ, ಪಪಂ ಸದಸ್ಯರು ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
