ಎಸ್ ಆರ್ ಆಟೋ ಕನ್ಸಲ್ಟೆಂಟ್ ಮಾಲೀಕನಿಗಾಗಿ ತೀವ್ರ ಶೋಧ ನಡೆಸಿದ ಪೊಲೀಸರು..!!

ಬೆಂಗಳೂರು

      ಸಾಲದ ಹಣ (ಫೈನಾನ್ಸ್) ಪಾವತಿಸದ ಆಟೋಗಳ ಮಾಹಿತಿ ಪಡೆದು ಅವುಗಳನ್ನು ಕಳವು ಮಾಡಿ ಬೇರೆಯವರಿಗೆ ಬಾಡಿಗೆ ನೀಡುತ್ತಿದ್ದ ಇಬ್ಬರು ಸೀಜಿಂಗ್ ಕಂಪನಿಯಲ್ಲಿ ಕೆಲಸಗಾರರನ್ನು ಶ್ರೀರಾಂಪುರ ಪೊಲೀಸರು ಬಂಧಿಸಿ ಪ್ರಮುಖ ಆರೋಪಿ ಕಂಪನಿಯ ಮಾಲೀಕನಿಗಾಗಿ ತೀವ್ರ ಶೋಧ ನಡೆಸಿದ್ದಾರೆ.

      ಬನಶಂಕರಿಯ ಶ್ರೀನಿವಾಸ್ ನಗರದ ರಾಜು (38), ಬಸವೇಶ್ವರ ನಗರದ ಹೇಮಂತ್ ಕುಮಾರ್ (28) ಬಂಧಿತ ಆರೋಪಿಗಳಾಗಿದ್ದು, ಪ್ರಮುಖ ಆರೋಪಿ ಸೀಜಿಂಗ್ ಕಂಪನಿಯ ಮಾಲೀಕ ರಮೇಶ್ ಅಲಿಯಾಸ್ ರಾಮು ಎಂಬಾತ ಪರಾರಿಯಾಗಿದ್ದಾನೆ.

      ಬಸವೇಶ್ವರ ನಗರ ಹಾಗೂ ಮಾಗಡಿ ರಸ್ತೆಯಲ್ಲಿ ಎಸ್‍ಆರ್ ಆಟೋ ಕನ್ಸಲ್ಟೆಂಟ್ ಅಂಡ್ ರಿಕವರಿ ಕಂಪನಿ ನಡೆಸುತ್ತಿದ್ದ ಪ್ರಮುಖ ಆರೋಪಿ ರಾಮು ಬಳಿ ಬಂಧಿತ ಆರೋಪಿಗಳಾದ ರಾಜು, ಹೇಮಂತ್ ಕುಮಾರ್ ಕೆಲಸ ಮಾಡುತ್ತಿದ್ದರು.

      ಇವರಿಬ್ಬರು ಈಗಾಗಲೇ ಬಂಧಿತನಾಗಿ ಜೈಲಿನಲ್ಲಿರುವ ಸುಂಕದಕಟ್ಟೆಯ ಲೋಕೇಶ (30) ಜತೆ ಸೇರಿ ಫೈನಾನ್ಸ್ ಹಣ ಕಟ್ಟದ ಆಟೋಗಳ ಮಾಹಿತಿ ಪಡೆದು ಅವುಗಳ ನಂಬರ್ ಪ್ಲೇಟ್ ಬದಲಿಸಿ ಬೇರೆಯವರಿಗೆ ಬಾಡಿಗೆ ನೀಡಿ ಹಣ ಸಂಪಾದಿಸುತ್ತಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಆರೋಪಿಗಳಿಂದ 3 ಲಕ್ಷ 20 ಸಾವಿರ ಮೌಲ್ಯದ 12 ಆಟೋಗಳನ್ನು ವಶಪಡಿಸಿಕೊಳ್ಳಲಾಗಿದೆ.

      ಆರೋಪಿ ರಾಮು ಬ್ಯಾಂಕ್‍ಗಳು, ಫೈನಾನ್ಸ್ ಕಂಪನಿಗಳಿಂದ ಸಾಲ ಪಡೆದು ಆಟೋಗಳನ್ನು ಖರೀದಿಸಿ, ಸಾಲದ ಕಂತು ಕಟ್ಟದಿರುವ ಮಾಲೀಕರ ಆಟೋಗಳನ್ನು ಸೀಜ್ ಮಾಡುವ ಪರಾವನಗಿಯನ್ನು ಹೊಂದಿದ್ದನು.

       ಈ ವಹಿವಾಟಿನಲ್ಲಿ ಸಾಲದ ಕಂತು ಕಟ್ಟದೆ ಸತಾಯಿಸುತ್ತಿರುವ ಆಟೋ ಮಾಲೀಕರ ಮಾಹಿತಿ ಪಡೆದು ಅವುಗಳನ್ನು ಬಂಧಿತ ಆರೋಪಿಗಳಿಂದ ಕಳವು ಮಾಡಿಸಿ, ನಂಬರ್ ಪ್ಲೇಟ್ ಬದಲಿಸಿ, ಬಾಡಿಗೆಗೆ ಬಿಡುತ್ತಿರುವುದು ಕಂಡು ಬಂದಿದೆ.ಆರೋಪಿಗಳನ್ನು ಶ್ರೀರಾಂಪುರ ಪೊಲೀಸ್ ಇನ್ಸ್‍ಪೆಕ್ಟರ್ ರವಿಪಾಟೀಲ ಮತ್ತವರ ಸಿಬ್ಬಂದಿ ಬಂಧಿಸಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ ಎಂದು ಶಶಿಕುಮಾರ್ ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link