ಕುಣಿಗಲ್
ಕಾರ್ಮಿಕರಿಗೆ ದುಡಿಮೆಯು ತಮ್ಮ ಜೀವನ ನಿರ್ವಹಣೆಗಾದರೆ ಕ್ರೀಡೆಯು ದೈಹಿಕ ಆರೋಗ್ಯ ಹಾಗೂ ಮಾನಸಿಕ ಸಂತೋಷಕ್ಕೆ ಸಹಾಯಕ. ಪ್ರತಿಯೊಬ್ಬ ಕಾರ್ಮಿಕರೂ ದುಡಿಮೆಯ ಜತೆಗೆ ಕ್ರೀಡಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ತಾಲ್ಲೂಕು ಕೈಗಾರಿಕಾ ಸಂಘದ ಅಧ್ಯಕ್ಷ ಪ್ರವೀಣ್ ಪಿ. ಕ್ಯಾಲಪ್ಪ ತಿಳಿಸಿದರು.
ಅವರು ಕಾರ್ಮಿಕರಿಗೆ ತಾಲ್ಲೂಕು ಕೈಗಾರಿಕಾ ಸಂಘ ಆಯೋಜಿಸಿದ್ದ ಕ್ರೀಡೋತ್ಸವದ ಅಂತಿಮ ದಿನದ ಮಹಿಳಾ ಥ್ರೋ ಬಾಲ್ ಪಂದ್ಯದಲ್ಲಿ ವಿಜೇತರಾದ ಪ್ರಿಸಮ್ ಜಾನ್ಸನ್ ಲಿಮಿಟೆಡ್ನ ಮಹಿಳಾ ತಂಡದ ವಿಜೇತರನ್ನು ಅಭಿನಂದಿಸಿ ಮಾತನಾಡಿದರು.
ತಮ್ಮ ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕರುಗಳಿಗೆ ಕ್ರೀಡಾ ಮನೋಭಾವ ಬೆಳೆಸುವ ಉದ್ದೇಶದಿಂದ ನಿರಂತರವಾಗಿ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸುತ್ತಾ ಬಂದಿದ್ದು, ಈ ವರ್ಷವೂ ಕ್ರಿಕೆಟ್ ಮತ್ತು ಮಹಿಳಾ ಕಾರ್ಮಿಕರಿಗೆ ಥ್ರೋ ಬಾಲ್ ಸ್ಪರ್ಧೆಯನ್ನು ಏರ್ಪಡಿಸಿತ್ತು.
ಈ ಸ್ಪರ್ಧೆಗಳಲ್ಲಿ ತಾಲ್ಲೂಕಿನ ವಿವಿಧ ಕಾರ್ಖಾನೆಗಳ ಕಾರ್ಮಿಕರುಗಳು ಭಾಗವಹಿಸಿದ್ದವು. ಮಹಿಳಾ ಕಾರ್ಮಿಕರಿಗೆ ಏರ್ಪಡಿಸಿದ್ದ ಥ್ರೋ ಬಾಲ್ ಸ್ಪರ್ಧೆಯಲ್ಲಿ ಪ್ರಿಸಮ್ ಜಾನ್ಸನ್ ಲಿಮಿಟೆಡ್ನ ತಂಡವು ಪ್ರಥಮ ಬಹುಮಾನ ಗಳಿಸಿದರೆ, ರೈಟ್ಜೆಲ್ ಇಂಡಿಯಾ ತಂಡವು ದ್ವಿತೀಯ ಬಹುಮಾನ ಗಳಿಸಿತು. ಅದೇ ರೀತಿ ಕ್ರಿಕೆಟ್ ಪಂದ್ಯದಲ್ಲಿ ರೈಟ್ಜೆಲ್ ತಂಡವು ಪ್ರಥಮ ಬಹುಮಾನ ಗಳಿಸಿದರೆ, ಕೋಸಾನ್ ಕ್ರಿಸ್ ಪ್ಲಾಂಟ್ನ ತಂಡವು ದ್ವಿತೀಯ ಬಹುಮಾನ ಗಳಿಸಿತು.
ಅಂತಿಮ ಸುತ್ತಿನ ಥ್ರೋ ಬಾಲ್ ಪಂದ್ಯಾವಳಿಯನ್ನು ವೀಕ್ಷಿಸಲು ಮ್ಯಾನೇಜರ್ ವೆಂಕಟೇಶ್ಮೂರ್ತಿ, ವ್ಯವಸ್ಥಾಪಕರುಗಳಾದ ಕೆ.ಎಂ.ಪ್ರಸಾದ್, ನಾರಾಯಣಗೌಡ, ಉಮೇಶ್ ಕುಮಾರ್ ಸಿಂಗ್, ಎಸ್. ತಾರಾನಾಥ್ ಭದ್ರಾವತಿ, ರೈಟ್ ಜೆಲ್ ಕಂಪನಿಯ ಪ್ರತಿಮಾ, ರೇಣುಕ, ಮಂಜುನಾಥ್, ಚಂದ್ರಪ್ಪ, ಶಂಕರೇಗೌಡ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
