ಹಾನಗಲ್ಲ :
ವೇಗವಾಗಿ ಹರಡುತ್ತಿರುವ ಕರೋನಾ ಸೋಂಕು ನಿಗ್ರಹಕ್ಕೆ ಮಾಸ್ಕ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೇ ಪರಿಹಾರ. ಇದನ್ನು ಸಾರ್ವಜನಿಕರಿಗೆ ಕಾನೂನಿನ ಮೂಲಕ ಹೇಳುವ ಅನಿವಾರ್ಯತೆ ಎದುರಾಗಿದ್ದು, ಜಿಲ್ಲಾದ್ಯಂತ ತಾಲೂಕು ಆಡಳಿತ ಹಾಗೂ ಸ್ಥಳೀಯ ಆಡಳಿತದ ಸಹಯೋಗದಲ್ಲಿ ದಂಡ ವಿಧಿಸಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜೆ.ದೇವರಾಜ್ ಹೇಳಿದರು.
ಮಂಗಳವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ತಾಲೂಕು ಆಡಳಿತ, ಪುರಸಭೆ ಸಹಯೋಗದಲ್ಲಿ ಆಯೋಜಿಸಿದ್ದ ಕರೋನಾ ಸೋಂಕು ನಿರ್ವಹಣೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಜನಜಾಗೃತಿ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು. ಮಾಸ್ಕ ಧರಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ನಮ್ಮ ಹಾಗೂ ಕುಟುಂಬದ ಆರೋಗ್ಯದ ಹಿನ್ನೆಲೆಯಲ್ಲಿ ಈ ಕ್ರಮಗಳನ್ನು ನಿರ್ವಹಿಸಬೇಕಿದೆ. ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಇವನ್ನೆಲ್ಲ ಪಾಲಿಸಬೇಕು. ಮಕ್ಕಳು, ತಂದೆ-ತಾಯಿಗಳ ಆರೋಗ್ಯ ಸೇರಿ ಇಈ ಕುಟುಂಬದಲ್ಲಿ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಬೇಕಾಗಿದೆ.
ಇದನ್ನು ತಾತ್ಸಾರ ಮಾಡುವವರಿಗೆ ಬಿಸಿ ಮುಟ್ಟಿಸಲು ನಾವು ಜಿಲ್ಲೆಯಾದ್ಯಂತ ಪರ್ಯಟನೆ ಹಮ್ಮಿಕೊಂಡಿದ್ದೇವೆ. ಇದು ನಿರಂತರ ಕ್ರಿಯೆಯಾಗಿದ್ದು, ಮುಲಾಜಿಲ್ಲದೇ ದಂಡ ವಿಧಿಸಲಾಗುತ್ತದೆ. ನಿಮ್ಮ ಸ್ತಾಸ್ಥ್ಯ ನಿಮ್ಮ ಕೈಯ್ಯಲ್ಲಿದೆ. ಇದರಲ್ಲಿ ಸಾರ್ವಜನಿಕ ಜವಾಬ್ದಾರಿಯಿದೆ. ಈಗಾಗಲೇ ರಾಣೆಬೆನ್ನೂರು, ಹಾವೇರಿ, ಶಿಗ್ಗಾವಿಗಳಲ್ಲಿ ಜನಜಾಗೃತಿ ಕಾರ್ಯಕ್ರಮ ಕೈಗೊಂಡಿದ್ದೇವೆ. ಬುಧವಾರ ಹಿರೇಕೆರೂರಲ್ಲಿ ನಡೆಸಲಿದ್ದೇವೆ ಎಂದು ವಿವರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/10/6HNL2.gif)