ಪಾತಾಳಕ್ಕೆ ಕುಸಿದ ಅಂತರ್ಜಲ : ಕಂಗಾಲಾದ ರೈತಾಪಿ ವರ್ಗ

ಗುಬ್ಬಿ

       ಕಳೆದ ವರ್ಷದ ಮುಂಗಾರು ಮತ್ತು ಹಿಂಗಾರು ಅವಧಿಯಲ್ಲಿ ವಾಡಿಕೆಯಷ್ಟು ಮಳೆ ಬಾರದ ಕಾರಣ ಅಂತರ್ಜಲ ಮಟ್ಟ ಸಂಪೂರ್ಣವಾಗಿ ಕುಸಿಯುತ್ತಿದ್ದು, 1500 ಅಡಿಯವರೆಗೆ ಕೊಳವೆ ಬಾವಿ ಕೊರೆಸಿದರು ಸಹ ನೀರು ಬಾರದಂತಾಗಿದೆ. ಬೇಸಿಗೆ ಬಿಸಿಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕೃಷಿ ಮತ್ತು ತೋಟದ ಬೆಳೆಗಳು ನೀರಿಲ್ಲದೆ ಬಿಸಿಲಿನ ತಾಪಕ್ಕೆ ಒಣಗಲಾರಂಭಿಸಿವೆ. ರೈತರು ತಮ್ಮ ಜೀವನಾಧಾರವಾಗಿರುವ ಅಡಕೆ, ಬಾಳೆ ಮತ್ತು ತೆಂಗಿನ ತೋಟಗಳನ್ನು ಉಳಿಸಿಕೊಳ್ಳಲು ಇನ್ನಿಲ್ಲದ ಹರ ಸಾಹಸ ಪಟ್ಟರು ನೀರು ಒದಗಿಸಲಾಗದೆ ಫಲ ಬಿಡುತ್ತಿದ್ದ ಅಡಕೆ ತೋಟಗಳನ್ನು ಒಣಗಲು ಬಿಟ್ಟು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.

       ಇತ್ತೀಚಿನ ವರ್ಷಗಳಲ್ಲಿ ಮಳೆ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತಿದೆ. ಅಲ್ಲದೆ ವಾಡಿಕೆಯಷ್ಟು ಮಳೆ ಬಾರದೆ ಅಂತರ್ಜಲ ಪ್ರಮಾಣ ಸಂಪೂರ್ಣವಾಗಿ ಕುಸಿದಿದ್ದು, ಜೀವನಾಧಾರವಾಗಿರುವ ಮತ್ತು ಕಷ್ಟಪಟ್ಟು ಬೆಳೆಸಿದ ತೆಂಗು, ಅಡಕೆ ತೋಟಗಳನ್ನು ಉಳಿಸಿಕೊಳ್ಳಲು ಕೊಳವೆ ಬಾವಿಗಳನ್ನು ಕೊರೆಸಿದರೂ ನೀರು ಬಾರದೆ ಫಲಭರಿತ ತೋಟಗಳು ನೀರಿಲ್ಲದೆ ಒಣಗುತ್ತಿವೆ. ಇತ್ತೀಚೆಗೆ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಕೊಳವೆ ಬಾವಿಗಳಲ್ಲಿ ಬರುವ ಅಷ್ಟಿಷ್ಟು ನೀರನ್ನು ತೆಂಗು ಮತ್ತು ಅಡಕೆ ತೋಟಗಳಿಗೆ ಹಾಯಿಸಿದರೂ ನೀರು ಸಾಕಾಗದೆ ತೋಟಗಳು ಒಣಗುತ್ತಿವೆ.

      ತಾಲ್ಲೂಕಿನಾದ್ಯಂತ ಹಲವಾರು ರೈತರು ತೋಟಗಳಿಗೆ ನೀರು ಒದಗಿಸಲಾಗದೆ ಕಣ್ಣ ಮುಂದೆಯೆ ಕಷ್ಟಪಟ್ಟು ಬೆಳೆಸಿದ ಮರಗಳು ಒಣಗುತ್ತಿರುವುದನ್ನು ನೋಡಿಕೊಂಡು ತಲೆ ಮೇಲೆ ಕೈಹೊತ್ತು ಮುಂದೇನು ಮಾಡುವುದು ಎಂಬ ಚಿಂತೆಯಲ್ಲಿದ್ದಾರೆ. ಮಳೆ ಸಮರ್ಪಕವಾಗಿ ಬಾರದ ಕಾರಣ ನೀರಿನ ಕೊರತೆಯಿಂದ ಒಣ ಬೇಸಾಯದಲ್ಲಿ ಬೆಳೆಯುತ್ತಿದ್ದ ಮಾವು ಮತ್ತು ಹಲಸಿನ ಮರಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಬೆಳೆ ಬರುತ್ತಿಲ್ಲ. ಬಂದಿರುವ ಬೆಳೆಯು ದಷ್ಟ ಪುಷ್ಟವಾಗಿಲ್ಲ. ಗಿಡ ಮರಗಳಿಗೆ ನೀರು ಅನಿವಾರ್ಯವಾಗಿದೆ.

     ಅಂತರ್ಜಲ ಮಟ್ಟ ಸಂಪೂರ್ಣವಾಗಿ ಕುಸಿದಿದ್ದು, ಲಕ್ಷಾಂತರ ರೂ. ಖರ್ಚು ಮಾಡಿ ಕೊರೆಸಿದ ಕೊಳವೆ ಬಾವಿಗಳಲ್ಲಿ ನೀರು ಬಾರದಂತಾಗಿದ್ದು, ತೆಂಗು ಮತ್ತು ಅಡಿಕೆ ಬೆಳೆಗಳನ್ನೆ ನಂಬಿ ಬದುಕು ಸಾಗಿಸುತ್ತಿದ್ದ ರೈತರು ಕಂಗಾಲಾಗಿದ್ದಾರೆ. ತೋಟಗಳನ್ನು ಉಳಿಸಿಕೊಳ್ಳಲು ಟ್ಯಾಂಕರ್‍ಗಳ ಮೂಲಕ ಸಾವಿರಾರು ರೂ. ಖರ್ಚು ಮಾಡಿ ನೀರು ಪೂರೈಕೆ ಮಾಡುತ್ತಿದ್ದಾರೆ. ಆದರೆ ಟ್ಯಾಂಕರ್ ಮೂಲಕ ನೀರು ಹರಿಸಿದರೆ ತೆಂಗು ಮತ್ತು ಅಡಕೆ ಬೆಳೆಗಳಿಗೆ ಸಾಕಾಗುತ್ತಿಲ್ಲ.

      ಸದ್ಯದಲ್ಲಿ ಮಳೆ ಬಾರದೆ ಇದೇ ಪರಿಸ್ಥಿತಿ ಮುಂದುವರಿದರೆ ರೈತರ ಜೀವನಾಧಾರವಾಗಿರುವ ತೆಂಗು, ಬಾಳೆ ಮತ್ತು ಅಡಕೆ ಬೆಳೆಗಳು ಸಂಪೂರ್ಣವಾಗಿ ಒಣಗಿ ಹೋಗುವುದರಲ್ಲಿ ಸಂದೇಹವೆ ಇಲ್ಲ ಎನ್ನುತ್ತಾರೆ ರೈತರು. ಇತ್ತೀಚಿನ ದಿನಗಳಲ್ಲಿ ಸಮರ್ಪಕವಾಗಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಾರದಿರುವುದು ಮತ್ತು ಕೆರೆಗಳಿಗೆ ಹೇಮಾವತಿ ನೀರು ಸಮರ್ಪಕವಾಗಿ ಹರಿಯದಿರುವುದು ಅಂತರ್ಜಲ ಕುಸಿತಕ್ಕೆ ಕಾರಣವಾಗಿದೆ ಎನ್ನುತ್ತಾರೆ ರೈತರು.

     ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಿಲ್ಲದೆ ಕೃಷಿ ಮತ್ತು ತೋಟದ ಬೆಳೆಗಳು ಒಣಗುತ್ತಿರುವುದರ ಜೊತೆಗೆ ತಮ್ಮನ್ನು ಅವಲಂಬಿಸಿರುವ ಜಾನುವಾರುಗಳ ಮೇವು ಮತ್ತು ನೀರಿಗೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರು ಮಳೆಗಾಗಿ ಮುಗಿಲತ್ತ ನೋಡುತ್ತಿದ್ದಾರೆ. ಕಳೆದ ಮಳೆಗಾಲದ ಅವಧಿಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಾರದೆ ಕೃಷಿ ಬೆಳೆಗಳಾದ ರಾಗಿ, ಭತ್ತ, ಜೋಳ ಸೇರಿದಂತೆ ಇತರೆ ದ್ವಿದÀಳ ಧಾನ್ಯಗಳನ್ನು ಬೆಳೆಯಲಾಗದ ಕಾರಣ ದನಕರುಗಳಿಗೆ ಮೇವಿನ ಕೊರತೆ ಉಂಟಾಗಿದೆ.

      ಗ್ರಾಮೀಣ ಭಾಗದಲ್ಲಿ ರೈತರು ಕೃಷಿ ಚಟುವಟಿಕೆಗಳಿಗೆ ಮತ್ತು ಹಾಲಿಗಾಗಿ ರಾಸುಗಳನ್ನು ಸಾಕುತ್ತಿದ್ದು, ರಾಗಿ ಮತ್ತು ಭತ್ತದ ಬೆಳೆ ಇಲ್ಲದ ಕಾರಣ ಒಣ ಹುಲ್ಲಿಗಾಗಿ ಪರದಾಡುವಂತಹ ಸ್ಥಿತಿ ಉಂಟಾಗಿದೆ. ಈ ಹಿಂದೆ ಉತ್ತಮ ಮಳೆಯಾಗುತ್ತಿದ್ದರಿಂದ ಎಲ್ಲೆಂದರಲ್ಲಿ ರೈತರು ರಾಸುಗಳಿಗಾಗಿ ಒಣ ಹುಲ್ಲಿನ ಮೆದೆಗಳನ್ನು ಹಾಕಿ ವರ್ಷವಿಡಿ ರಾಸುಗಳಿಗೆ ಮೇವು ಒದಗಿಸುತ್ತಿದ್ದರು. ಆದರೆ ಮಳೆಬಾರದೆ ಕೃಷಿ ಬೆಳೆಗಳನ್ನು ಬೆಳೆಯಲಾಗದೆ ಜಾನುವಾರುಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

      ಬೇಸಿಗೆ ಬಿಸಿಲು ಹೆಚ್ಚಾದಂತೆ ಅಂತರ್ಜಲ ಕುಸಿತದಿಂದಾಗಿ ಕೊಳವೆ ಬಾವಿಗಳಲ್ಲಿ ಬರುತ್ತಿದ್ದ ನೀರು ಸಂಪೂರ್ಣವಾಗಿ ನಿಂತು ಹೋಗುತ್ತಿದ್ದು, ಗ್ರಾಮೀಣ ಜನತೆಗೆ ಸಮರ್ಪಕವಾದ ಕುಡಿಯುವ ನೀರು ಪೂರೈಕೆ ಮಾಡುವುದು ತೀವ್ರತರ ಸಮಸ್ಯೆಯಾಗಿ ಕಾಡುತ್ತಿದೆ. ಕುಡಿಯುವ ನೀರಿನ ಸಮಸ್ಯೆಯಿರುವ ಗ್ರಾಮಗಳಲ್ಲಿ ನೀರು ಪೂರೈಕೆ ಮಾಡಲು ಗ್ರಾಮ ಪಂಚಾಯ್ತಿಗಳು ಟ್ಯಾಂಕರ್‍ಗಳ ಮೊರೆ ಹೋಗಿದ್ದು ಗ್ರಾಮೀಣ ಜನತೆಗೆ ಯಾವುದೆ ರೀತಿಯ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.

     ಆದರೆ ತ್ವರಿತವಾಗಿ ಮಳೆ ಬಾರದೆ ಹೋದರೆ ಕುಡಿಯುವ ನೀರಿನ ಸಮಸ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಈಗಾಗಲೆ 1500 ಅಡಿಯವರೆಗೆ ಕೊರೆದರೂ ನೀರು ಸಿಗುತ್ತಿಲ್ಲ. ಅಂತರ್ಜಲ ಸಂಪೂರ್ಣವಾಗಿ ಕುಸಿಯುತ್ತಿದೆ. ಗ್ರಾಮೀಣ ಜನತೆ ಕುಡಿಯುವ ನೀರಿಗೆ ಪರದಾಡುವಂತಹ ಸಮಸ್ಯೆ ಎದುರಾಗಿದ್ದರೆ, ಇನ್ನು ಜೀವನಾಧಾರವಾಗಿರುವ ಕೃಷಿ ಮತ್ತು ತೋಟದ ಬೆಳೆಗಳನ್ನು ಉಳಿಸಿಕೊಳ್ಳುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ. ತಮ್ಮನ್ನೆ ನಂಬಿರುವ ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವನ್ನು ಒದಗಿಸುವದು ಹೇಗೆ ಎಂಬ ಸಮಸ್ಯೆ ಗ್ರಾಮೀಣ ಜನರನ್ನು ಕಾಡುತ್ತಿದೆ.

      ಗ್ರಾಮೀಣ ಜನತೆಗೆ ಶುದ್ದ ಕುಡಿಯುವ ನೀರನ್ನು ಒದಗಿಸಲು ಗ್ರಾಮಗಳಲ್ಲಿ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಪ್ರಾರಂಭಿಸಲಾಗಿತ್ತು. ಆದರೆ ಅಂತರ್ಜಲ ಕುಸಿತದಿಂದಾಗಿ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದ್ದಂತೆ, ಬಹುತೇಕ ಗ್ರಾಮಗಳಲ್ಲಿನ ಶುದ್ದ ಕುಡಿಯುವ ನೀರಿನ ಘಟಕಗಳಿಗೆ ಬೀಗ ಹಾಕಲಾಗಿದೆ. ಗ್ರಾಮೀಣ ಜನತೆ ಕುಡಿಯುವ ನೀರಿಗಾಗಿ ಇನ್ನಿಲ್ಲದ ಪರದಾಟ ನಡೆಸುತ್ತಿದ್ದಾರೆ. ಕೊಡ ಹಿಡಿದು ತೋಟದ ಬಾವಿಗಳತ್ತ ಮುಖ ಮಾಡುತ್ತಿದ್ದಾರೆ. ಕೆಲ ಗ್ರಾಮಗಳಲ್ಲಿ ಹಗಲಿರುಳೆನ್ನದೆ ಖಾಲಿ ಕೊಡ ಹಿಡಿದ ಮಹಿಳೆಯರು ಕುಡಿಯುವ ನೀರು ಸಂಗ್ರಹಿಸಲು ಟ್ಯಾಂಕರ್ ಮತ್ತು ತೋಟದ ಬಾವಿಗಳತ್ತ ಮುಖ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

     ಕಳೆದ ವರ್ಷ 800 ರಿಂದ 900 ಅಡಿಯವರೆಗೆ ಕೊಳವೆ ಬಾವಿ ಕೊರೆಸಿದರೆ ಉತ್ತಮವಾಗಿ ನೀರು ಬರುತ್ತಿತ್ತು. ಈ ಬಾರಿ 1500 ಅಡಿಯವರೆಗೆ ಕೊರೆಸಿದರೂ ಬರೀ ದೂಳು ಬರುತ್ತ್ತಿದೆ. ಆದರೆ ನೀರು ಬರುತ್ತಿಲ್ಲ, ಬಂದರೂ ಅರ್ಧ ಇಂಚು. ಅದನ್ನು ಮೇಲೆತ್ತಲು ಆಗುತ್ತಿಲ್ಲ. ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿಗೂ ಪರಿತಪಿಸುವಂತಹ ಪರಿಸ್ಥಿತಿ ಉಂಟಾಗಿದೆ.

      ನೀರಿನ ಮಹತ್ವದ ಬಗ್ಗೆ ಜನತೆ ಜಾಗೃತಿ ವಹಿಸದಿದ್ದರೆ ಮುಂದೊಂದು ದಿನ ರೈತರ ಬೆಳೆಗಳನ್ನು ಉಳಿಸಿಕೊಳ್ಳುವುದಿರಲಿ ಕುಡಿಯುವ ನೀರಿಗೂ ಪರದಾಡಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗುವುದರಲ್ಲಿ ಸಂದೇಹವೆ ಇಲ್ಲ ಎನ್ನುತ್ತಾರೆ ಪ್ರಜ್ಞಾವಂತರು. ಅಮೂಲ್ಯವಾದ ಅಂತರ್ಜಲ ಸಂರಕ್ಷಣೆ ಮತ್ತು ನೀರಿನ ಸಂರಕ್ಷಣೆ ಬಗ್ಗೆ ಸರ್ಕಾರ ಸೇರಿದಂತೆ ಹಲವು ಸ್ವಯಂ ಸೇವಾ ಸಂಸ್ಥೆಗಳು ಹಲವಾರು ಮಹತ್ವದ ಯೋಜನೆಗಳನ್ನು ರೂಪಿಸುತ್ತಲೆ ಬಂದಿವೆಯಾದರೂ ಈ ಬಗ್ಗೆ ಜನತೆ ತಲೆಕೆಡಿಸಿಕೊಳ್ಳುತ್ತಿಲ್ಲ. ನೀರಿನ ಮಹತ್ವದ ಬಗ್ಗೆ ಪ್ರತಿಯೊಬ್ಬರೂ ಜಾಗೃತರಾಗಬೇಕಿದೆ.

      ಮಳೆ ನೀರು ಸಂಗ್ರಹಣೆ, ನೀರಿನ ಮಿತ ಬಳಕೆ ಸೇರಿದಂತೆ ಕುಸಿಯುತ್ತಿರುವ ಅಂತರ್ಜಲ ಸಂರಕ್ಷಣೆಗೆ ಜಾಗೃತಿ ವಹಿಸಬೇಕಿದೆ. ಇತ್ತೀಚಿನ ದಿನಗಳಲ್ಲಿ ಕೊಳವೆ ಬಾವಿಗಳಲ್ಲಿ ಮಾತ್ರವೆ ನೀರು ಕಾಣಬಹುದೆ ಹೊರತು ಬಾವಿ, ಕೆರೆ. ಕಟ್ಟೆ, ತೊರೆಗಳಲ್ಲಿ ನೀರು ನೆನಪು ಮಾತ್ರ. ಇಂತಹ ಪರಿಸ್ಥಿತಿಯಲ್ಲಿ ಸಾರ್ವಜನಿಕರಲ್ಲಿ, ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಅಮೂಲ್ಯವಾದ ನೀರಿನ ಮಹತ್ವ, ನೀರಿನ ಮಿತ ಬಳಕೆ, ಅಂತರ್ಜಲ ಸಂರಕ್ಷಣೆ, ಮಳೆ ನೀರಿನ ಸಂಗ್ರಹಣೆ, ಅರಣ್ಯಗಳ ಸಂರಕ್ಷಣೆಯಂತಹ ಮಹತ್ವದ ಚಿಂತನೆಗಳ ಬಗ್ಗೆ ಅರಿವು ಮೂಡಿಸಬೇಕಾದ ಅನಿವಾರ್ಯತೆ ಅತ್ಯವಶ್ಯಕವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link