ತುಮಕೂರು
ರಾಗಿಯನ್ನು ಪ್ರಧಾನವಾಗಿ ಬೆಳೆಯುವ ತುಮಕೂರು ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಬೆಳೆಯುವ ಪ್ರಮಾಣ ಕಡಿಮೆಯಾಗುತ್ತಿದೆ. ಸಕಾಲದಲ್ಲಿ ಬೀಳದ ಮಳೆ, ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ, ದುಬಾರಿ ಕೂಲಿ, ಕೂಲಿಯಾಳುಗಳ ಕೊರತೆ, ಬೆಳೆದ ರಾಗಿಗೆ ಸಿಗದ ಯೋಗ್ಯ ಬೆಲೆ ಇದಕ್ಕೆ ಕಾರಣ. ಹೀಗಾಗಿ, ರೈತರು ರಾಗಿ ಬೆಳೆಯಲು ಹಿಂದೇಟು ಹಾಕುವಂತಾಗಿದೆ.
ಸಾಲದಕ್ಕೆ ನಗರ ಹಾಗೂ ಪಟ್ಟಣಗಳ ಸುತ್ತಮುತ್ತಲ ರಾಗಿ ಬೆಳೆಯುವ ಜಮೀನುಗಳು ರಿಯಲ್ ಎಸ್ಟೇಟ್ ವ್ಯವಹಾರದ ಪಾಲಾಗುತ್ತಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜಿಲ್ಲೆಯಲ್ಲಿ ರಾಗಿ ಬೆಳೆಯಬಹುದಾದ 16,572 ಎಕರೆ ಪ್ರದೇಶದಲ್ಲಿ ಬಿತ್ತನೆಯಾಗಿಲ್ಲ. ಹಿಂದಿನ ವರ್ಷ ಜಿಲ್ಲೆಯಲ್ಲಿ 1,50,053 ಎಕರೆ ಪ್ರದೇಶದಲ್ಲಿ ರಾಗಿ ಬಿತ್ತನೆಯಾಗಿತ್ತು, ಈ ಬಾರಿ ಕೇವಲ 1,33,481 ಎಕರೆಯಲ್ಲಿ ರಾಗಿ ಬಿತ್ತನೆ ಮಾಡಲಾಗಿತ್ತು.
ಜುಲೈ ತಿಂಗಳಿನಲ್ಲಿ ಮಳೆ ಬೀಳದ ಕಾರಣ ರೈತರು ರಾಗಿ ಬಿತ್ತನೆ ಮಾಡಲಾಗಲಿಲ್ಲ, ಕೆಲವರು ಹಿಂಗಾರಿನಲ್ಲಿ ಅಲ್ಪಾವಧಿ ತಳಿ ರಾಗಿ ಬಿತ್ತನೆ ಮಾಡಿದರೆ, ಉಳಿದವರು ಕಿರುಧಾನ್ಯ ಬಿತ್ತಿ ಸಮಾಧಾನಗೊಂಡರು. ಹಾಗಾಗಿ ಈ ವರ್ಷ ಅತಿ ಹೆಚ್ಚಿನ ಪ್ರದೇಶದಲ್ಲಿ ರೈತರು ಸಿರಿ ಧಾನ್ಯ ಬೆಳೆದಿದ್ದಾರೆ ಎಂದು ಕೃಷಿ ಅಧಿಕಾರಿಗಳು ಹೇಳಿದ್ದಾರೆ..
ಇಷ್ಟರ ನಡುವೆಯೂ ಈ ಬಾರಿ ಬಿತ್ತನೆ ಮಾಡಿದ ರಾಗಿಯ ಇಳುವರಿ ಆಶಾದಾಯಕವಾಗಿದೆ. ಆದರೆ, ಕಷ್ಟ, ಖರ್ಚಿನಲ್ಲಿ ಬೆಳೆದ ರಾಗಿಗೆ ಯೋಗ್ಯ ಬೆಲೆ ಸಿಗುತ್ತಿಲ್ಲ. ಮುಕ್ತ ಮಾರುಕಟ್ಟೆಯಲ್ಲಿ ರಾಗಿಗೆ ಕನಿಷ್ಠ ಬೆಲೆಯೂ ಸಿಗದೆ ರೈತರು ಕಂಗಾಲಾಗಿದ್ದಾರೆ. ಈಗಾಗಲೆ ಕೆಲವು ಕಡೆ ಕಣಗೆಲಸ ಆರಂಭವಾಗಿದ್ದು ರೈತರು ರಾಗಿ ಒಕ್ಕಣೆಯಲ್ಲಿ ತೊಡಗಿದ್ದಾರೆ.
ತುರ್ತು ಹಣದ ಅಗತ್ಯವಿರುವ ರೈತರು ಒಕ್ಕಣೆ ನಂತರ ರಾಗಿ ಮಾರಾಟ ಮಾಡಿ, ತಮ್ಮ ಸಾಲಸೋಲ ತೀರಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಈ ಸಂದರ್ಭವನ್ನು ಬಳಸಿಕೊಳ್ಳುತ್ತಿರುವ ದಳ್ಳಾಳಿಗಳು ರೈತರ ಮನೆಗಳಿಗೇ ಹೋಗಿ ರಾಗಿ ಖರೀದಿ ಮಾಡುತ್ತಿದ್ದಾರೆ. ಕೆಲವೆಡೆ ದಳ್ಳಾಳಿಗಳು ರೈತರಿಗೆ ಮುಂಗಡವಾಗಿ ಹಣ ನೀಡಿ, ರಾಗಿಯನ್ನು ತಾವೇ ಖರೀದಿಸಲು ಕಾಯ್ದಿರಿಸಿದ್ದಾರೆ. ಹಣದ ತುರ್ತು ಇರುವ ರೈತರು ಅಂತಹವರಿಗೆ ಕಡಿಮೆ ದರಕ್ಕೆ ರಾಗಿ ಮಾರುತ್ತಿದ್ದಾರೆ.
ಮುಕ್ತ ಮಾರುಕಟ್ಟೆಯಲ್ಲಿ ಈಗ ರಾಗಿ ಬೆಲೆ ಕ್ವಿಂಟಾಲಿಗೆ 2400-2800 ರೂ. ಇದೆ. ರಾಗಿ ಬೆಳೆಯಲು ತಗಲುವ ಉತ್ಪಾದನಾ ವೆಚ್ಚಕ್ಕೆ ಹೋಲಿಸಿದರೆ ಈ ದರಕ್ಕೆ ಮಾರಿದರೆ ರೈತರಿಗೆ ನಷ್ಟವೇ ಆಗುತ್ತದೆ. ರೈತರು ತಾವು ನಷ್ಟ ಮಾಡಿಕೊಂಡು ರಾಗಿ ಬೆಳೆದುಕೊಡುವ ಪರಿಸ್ಥಿತಿ ಬಂದಿದೆ. ಜಿಲ್ಲಾಡಳಿತ ತಕ್ಷಣವೇ ರಾಗಿ ಖರೀದಿ ಕೇಂದ್ರಗಳನ್ನು ತೆರೆಯಬೇಕು. ಪ್ರತಿ ಕ್ವಿಂಟಾಲ್ಗೆ ಕನಿಷ್ಠ 4000 ರೂ. ಬೆಂಬಲ ಬೆಲೆ ನಿಗಧಿ ಮಾಡಿ ಸರ್ಕಾರವೇ ಖರೀದಿಸಬೇಕು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಎ. ಗೋವಿಂದರಾಜು ಒತ್ತಾಯಿಸಿದ್ದಾರೆ.
ತಿಂಗಳು ಕಳೆದ ಮೇಲೆ ರಾಗಿ ಖರೀದಿ ಕೇಂದ್ರ ಆರಂಭಿಸಿದರೆ ರೈತರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ, ಆ ವೇಳೆಗೆ ಬಹುತೇಕ ರೈತರು ತಾವು ಬೆಳೆದ ರಾಗಿ ಮಾರಾಟ ಮಾಡಿರುತ್ತಾರೆ. ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇದ್ದರೆ, ಶೋಷಣೆ ತಪ್ಪಿಸಬೇಕು ಎನ್ನುವಂತಿದ್ದರೆ ಕೂಡಲೇ ಖರೀದಿ ಕೇಂದ್ರ ಆರಂಭಿಸಲಿ. ಈಗಿನ ಪರಿಸ್ಥಿತಿ, ದುಬಾರಿ ಉತ್ಪಾದನಾ ವೆಚ್ಚದಿಂದ ರೈತರು ಕಂಗಾಲಾಗಿದ್ದಾರೆ. ಮುಂದಿನ ವರ್ಷಗಳಲ್ಲಿ ಅರ್ಧಕ್ಕರ್ಧ ರೈತರು ರಾಗಿ ಬೆಳೆಯುವುದನ್ನೇ ಬಿಟ್ಟುಬಿಡುತ್ತಾರೆ ಎಂದು ಗೋವಿಂದರಾಜು ಹೇಳಿದರು.
ಜಿಲ್ಲೆಯಲ್ಲಿ ರಾಗಿ ಖರೀದಿ ಕೇಂದ್ರ ತೆರೆಯುವ ಸಂಬಂಧ ಇನ್ನೂ ಯಾವುದೇ ಪ್ರಸ್ತಾಪ ಬಂದಿಲ್ಲ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಉಪ ನಿರ್ದೇಶಕ ದ್ವಾರಕಾಪ್ರಸಾದ್ ತಿಳಿದ್ದಾರೆ. ರೈತರು ಎಪಿಎಂಸಿಗಳಿಗೆ ರಾಗಿ ತಂದು ಮಾರಾಟ ಮಾಡುತ್ತಿದ್ದಾರೆ. ತುಮಕೂರು, ಗು0 ರೂ. ವರೆಗೆ ಧಾರಣೆ ನಿಗಧಿಯಾಗಿತು ಎಂದು ಹೇಳಿದರು.ಬ್ಬಿ, ಶಿರಾ, ಹುಳಿಯಾರು, ಕುಣಿಗಲ್ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಈ ತಿಂಗಳ 17 ರಂದು ಪ್ರತಿ ಕ್ವಿಂಟಾಲ್ ರಾಗಿ ಕನಿಷ್ಟ 1660 ರೂ., ಗರಿಷ್ಠ 280
ಪ್ರತಿ ದಿನ ಮಾರುಕಟ್ಟೆಯಲ್ಲಿ ರಾಗಿ ಬೆಲೆಯಲ್ಲಿ ಏರುಪೇರಾಗುತ್ತದೆ. ಮಾರುಕಟ್ಟೆಗೆ ಬರುವ ಅಂದಿನ ರಾಗಿ ಪ್ರಮಾಣ ಆಧರಿಸಿ ದರ ನಿಗಧಿಯಾಗಿ ದಲ್ಲಾಳಿಗಳು ರೈತರಿಂದ ಖರೀದಿ ಮಾಡುತ್ತಿದ್ದಾರೆ.
ಆರ್ಥಿಕ ಮುಗ್ಗಟ್ಟಿರುವ ರೈತರು ಬಂದಷ್ಟು ಬರಲಿ ಎಂದು ಈಗಾಗಲೆ ವರ್ತಕರಿಗೆ ರಾಗಿ ಮಾರುತ್ತಿದ್ದು, ಕೇಂದ್ರ ತೆರೆಯುವುದು ತಡವಾದಷ್ಟೂ ರೈತರಿಗೆ ನಷ್ಟವಾಗಲಿದೆ. ಊರೆಲ್ಲಾ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎನ್ನುವಂತೆ ರೈತರು ಕಡಿಮೆ ಬೆಲೆಗೆ ಮಾರಿ ನಷ್ಟ ಅನುಭವಿಸುವ ಮುಂಚೆ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ತಕ್ಷಣ ರಾಗಿ ಖರೀದಿ ಕೇಂದ್ರ ಆರಂಭಿಸಲು ಕ್ರಮ ಕೈಗೊಂಡು, ರೈತ ನೋಂದಣಿ ಆರಂಭಿಸಿ ರೈತರ ನೆರವಿಗೆ ಧಾವಿಸಬೇಕು. ಕಳೆದ ವರ್ಷ ಕೇಂದ್ರ ಸರ್ಕಾರ ನಿಗದಿ ಮಾಡಿದ್ದ ಕ್ವಿಂಟಾಲ್ ರಾಗಿ ದರ ರೂ.3150 ಕೂಡಾ ಕಡಿಮೆಯೆ ಆಗಿದೆ. ಹೀಗಾಗಿ ರಾಜ್ಯ ಸರ್ಕಾರ ರೂ. 350 ಸೇರಿಸಿ ಒಟ್ಟು ಕ್ವಿಂಟಾಲ್ಗೆ 3500 ರೂಪಾಯಿ ನಿಗಧಿ ಮಾಡಬೇಕು. ಖರೀದಿ ಕೇಂದ್ರಗಳಲ್ಲಿ ಖರೀದಿಸಿದ ರಾಗಿಗೆ ಕೂಡಲೆ ಹಣ ರೈತರಿಗೆ ಬಿಡುಗಡೆಗೆ ಕ್ರಮ ಕೈಕೊಳ್ಳಬೇಕು ಎಂದು ರೈತ-ಕೃಷಿ ಕಾರ್ಮಿಕರ ಸಂಘಟನೆ ಒತ್ತಾಯಿಸಿದೆ.
ಕಳೆದ ಬಾರಿ ರಾಗಿಗೆ ಪ್ರತಿ ಕ್ವಿಂಟಾಲ್ 2900 ರೂ.ಗಳಷ್ಟಿದ್ದ ಬೆಂಬಲ ಬೆಲೆಯನ್ನು, ಸರ್ಕಾರ ಕಳೆದ ಜೂನ್ನಲ್ಲಿ ರೂ.3150ಕ್ಕೆ ಏರಿಕೆ ಮಾಡಿತ್ತು. ಈಗ ಮಾರುಕಟ್ಟೆ ಬೆಲೆ ಹಾಗೂ ಬೆಂಬಲ ಬೆಲೆಯ ನಡುವೆ ಸಾಕಷ್ಟು ವ್ಯತ್ಯಾಸವಿದೆ. ದಲ್ಲಾಳಿಗಳ ಹಾವಳಿಯಿಂದ ರೈತರಿಗೆ ಪ್ರತಿ ಕ್ವಿಂಟಾಲ್ ಮೇಲೆ ಸಾವಿರ ರೂಪಾಯಿಗೂ ಹೆಚ್ಚು ನಷ್ಟವಾಗುತ್ತಿದೆ. ರಾಗಿ ಮಾರಿದರೆ ಒಂದಷ್ಟು ಹೆಚ್ಚಿಗೆ ಹಣ ಸಿಗಬಹುದೆಂದು ಆಶಿಸಿದ್ದ ರೈತರು ಬೆಲೆ ಕುಸಿತದಿಂದ ಆತಂಕಕ್ಕೊಳಗಾಗಿದ್ದಾರೆ. ಈ ಕೂಡಲೆ ಜಿಲ್ಲಾಡಳಿತ ರಾಗಿ ಖರೀದಿ ಕೇಂದ್ರಗಳನ್ನು ತೆರೆದು, ಬೆಂಬಲ ಬೆಲೆ ಮೂಲಕ ರಾಗಿ ಖರೀದಿಸಬೇಕು ಎಂಬುದು ರೈತರ ಒತ್ತಾಯವಾಗಿದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
