ಸೋನೆ ಮಳೆಗೆ ಬಿತ್ತನೆ ಆರಂಭ

ಹುಳಿಯಾರು

   ಇಷ್ಟರಲ್ಲಾಗಲೆ ಉತ್ತಮ ಮಳೆಯಾಗಿ ರಾಗಿ ಬಿತ್ತನೆ ಮುಗಿಯಬೇಕಿತ್ತು. ಒಳ್ಳೆ ಮಳೆಯಾಗಬಹುದೆಂದು ನಂಬಿ ರೈತ ಕೂಡ ಹೊಲ ಹದ ಮಾಡಿ ಕಾಯುತ್ತಿದ್ದ, ಆದರೆ ಇಲ್ಲಿಯವರೆವಿಗೂ ಉತ್ತಮ ಮಳೆಯಾಗಲಿಲ್ಲ. ಆದರೆ ವಾರದಿಂದ ಸೋನೆ ಮಳೆ ಮಾತ್ರ ಆಗಾಗ ಬಂದೋಗುತ್ತಿದೆ. ಪರಿಣಾಮ ಬಿತ್ತನೆ ಕಾಲ ಮುಗಿದರೆ ಕಷ್ಟವೆಂದು ಹೋಬಳಿಯ ರೈತರು ಬಿತ್ತನೆ ಆರಂಭಿಸಿದ್ದಾರೆ.

    ಈ ಬಾರಿ ಮುಂಗಾರು ಕೈಕೊಟ್ಟ ಕಾರಣ ಪೂರ್ವ ಮುಂಗಾರು ಬಿತ್ತನೆಯ ಹೆಸರು, ತೊಗರಿ, ಎಳ್ಳು ಮತ್ತಿತರ ಬೀಜಗಳ ಬಿತ್ತನೆ ಕಾರ್ಯ ನಡೆಯಲಿಲ್ಲ. ಮುಂಗಾರು ಬಿತ್ತನೆಯ ಅಶ್ವಿನಿ, ಭರಣಿ, ಕೃತಿಕಾ ಮಳೆಗಳು ಸಂಪೂರ್ಣ ನೆಲಕ್ಕೆ ಹನಿಯಿಡಲಿಲ್ಲ. ನಂತರ ರೋಹಿಣಿ ಮಳೆ ಹೋಬಳಿ ವ್ಯಾಪ್ತಿಯ ಕೆಲ ಕಡೆ ಮಾತ್ರ ಬಂದು ರೈತರಲ್ಲಿ ಆಶಾಭಾವ ಮೂಡಿಸಿತ್ತು.

     ಹಾಗಾಗಿಯೇ ರಾಗಿ ಬಿತ್ತನೆಯಾದರೂ ಮಾಡೋಣವೆಂದು ರೈತರು ಹೊಲ ಸಿದ್ಧಪಡಿಸಿಕೊಂಡು ಬಿತ್ತನೆಗೆ ರೈತರು ಆಕಾಶದತ್ತ ಚಿತ್ತ ಮೂಡಿಸಿದ್ದರು. ಆದರೆ ಉತ್ತಮ ಮಳೆ ಬಾರದಿದ್ದರೂ ಕಳೆದ ಎರಡು ದಿನಗಳಿಂದ ಹೋಬಳಿ ವ್ಯಾಪ್ತಿಯ ಕೆಲ ಕಡೆ ತಂತುರು ಮಳೆಯಾಗಿದೆ. ಇದರಿಂದ ಪ್ರೇರೇಪಿತರಾಗಿರುವ ರೈತರು ರಾಗಿ ಬಿತ್ತನೆಗೆ ಮುಂದಾಗಿದ್ದಾರೆ.

     ಕೆಲ ಕಡೆ ವಾರದ ಹಿಂದೆಯೇ ಸೋನೆ ಮಳೆ ಬಿದ್ದ ತಕ್ಷಣ ರಾಗಿ ಬಿತ್ತನೆ ಮಾಡಿದ್ದು ಅದಾಗಾಲೆ ನೆಲದಿಂದ ಕುಡಿ ಹೊರಹೊಮ್ಮಿದೆ. ಇದನ್ನು ನೋಡಿದ ಉಳಿದ ರೈತರು ಸಹ ಒಬ್ಬೊಬ್ಬರಾಗಿ ಅಲ್ಲಲ್ಲಿ ಬಿತ್ತನೆ ಮಾಡುತ್ತಿದ್ದು ಈ ಭಾಗದಲ್ಲಿ ಇದು ಸಾಮಾನ್ಯ ದೃಶ್ಯವಾಗಿದೆ. ಮುಂದಿನ ದಿನದಲ್ಲಾದರೂ ಉತ್ತಮ ಮಳೆಯಾಗಿ ರಾಗಿ ಕೈಹಿಡಿಯಲಿ ಎಂದು ರೈತ ಮಳೆ ಎದುರು ನೋಡುತ್ತಿದ್ದಾನೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap