ಹೊಳಲ್ಕೆರೆ:
ರೈತ ತಾನು ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ತಾನೇ ಬೆಲೆಯನ್ನು ನಿರ್ಧರಿಸಿ ಮಾರಾಟ ಮಾಡುವಂತಾದರೆ ಮಾತ್ರ ರೈತ ಕೃಷಿಯಲ್ಲಿ ಅಭಿವೃಧ್ದಿಯನ್ನು ಕಾಣಲು ಸಾಧ್ಯ ಎಂದು ಶಾಸಕ ಎಂ.ಚಂದ್ರಪ್ಪ ಪ್ರತಿಪಾದಿಸಿದರು.
ತಾಲ್ಲೂಕು ಸಹಾಯಕ ಕೃಷಿ ಅಧಿಕಾರಿಗಳ ಕಚೇರಿ, ತಾಲ್ಲೂಕು ಕೃಷಿಕ ಸಮಾಜ ಮತ್ತು ಇತರೆ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಕೃಷಿ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರೈತರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದಿ.ಮಾಜಿ ಪ್ರಧಾನಿ ಛೌಧರಿ ಚರಣ್ಸಿಂಗ್ ಜನ್ಮ ದಿನದ ಅಂಗವಾಗಿ ದೇಶಾದ್ಯಾಂತ ಡಿ.23 ರಂದು ರೈತರ ಹೆಸರಿನಲ್ಲಿ ಆಚರಣೆ ಮಾಡಲಾಗುತ್ತಿದೆ. ಚೌಧರಿ ಚರಣ್ಸಿಂಗ್ ಅತ್ಯಂತ ಪ್ರಭಾವಿ ಪ್ರಧಾನಿಯಾಗಿ 1979ರಲ್ಲಿ ಕೃಷಿಕರ ಅಭುದಯಕ್ಕೆ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಂತಹ ಪ್ರಭಾವಿ ಮತ್ಸದ್ದಿ ಆಗಿದ್ದರು ಎಂದು ಶಾಸಕ ಚಂದ್ರಪ್ಪ ಬಣ್ಣಿಸಿದರು.
ನಮ್ಮ ದೇಶ ನೂರಕ್ಕೆ ಎಪ್ಪತ್ತೈದು ಭಾಗ ಕೃಷಿಯನ್ನೇ ಜೀವನಕ್ಕಾಗಿ ಅವಲಂಬಿಸಿದ್ದಾರೆ. ಇಂದಿನ ಪರಿಸ್ಥಿತಿಯಲ್ಲಿ ರೈತ ಬೆಳೆದ ಉತ್ಪನ್ನಗಳ ಬೆಲೆಗಳನ್ನು ಮಾರುಕಟ್ಟೆಯಲ್ಲಿ ನಿರ್ಧರಿಸುವರು ಬಾಂಬೆಯಲ್ಲಿ ಕುಳಿತಿರುವ ಮಾರ್ವಾಡಿಗಳು. ಅವರು ಯಾವ ಬೆಲೆಯನ್ನು ನಿಗದಿಪಡಿಸುತ್ತಾರೆ ಅದೇ ಅಂತಿಮ ಆ ಬೆಲೆಗೆ ರೈತರು ತಮ್ಮ ಬೆಳೆಯನ್ನು ಮಾರಾಟ ಮಾಡುವುದು ಅನಿರ್ವಾಯವಾಗಿದೆ. ಆದ್ದರಿಂದ ರೈತ ಕೃಷಿ ಅಭಿವೃಧ್ದಿಗಾಗಿ ವೆಚ್ಚ ಮಾಡಿದ ಹಣ ಹಿಂದಿರುಗುತ್ತಿಲ್ಲ. ಇದರಿಂದ ರೈತ ಹತಾಶ ಪರಿಸ್ಥಿತಿಯನ್ನು ಅನುಭವಿಸುತ್ತಿದ್ದಾನೆಂದು ಶಾಸಕರು ಮಾರ್ಮಿಕವಾಗಿ ನುಡಿದರು.
ಈ ಕ್ಷೇತ್ರದ ಮತದಾರರು 1.05 ಲಕ್ಷ ಮತಗಳಿಂದ ನನ್ನನ್ನು ಆಯ್ಕೆ ಮಾಡಿದ್ದಾರೆ ಆ ಋಣವನ್ನು ಖಂಡಿತವಾಗಿಯು ತೀರಿಸುತ್ತೇನೆ. ತಾಲ್ಲೂಕಿನ ಎಲ್ಲಾ ಕೆರೆಗಳಿಗೆ ನೀರನ್ನು ಹರಿಸುವ ಬಗ್ಗೆ ಈಗಾಗಲೆ ನಿರ್ಧಾರ ಮಾಡಿದ್ದು ಭದ್ರಾ ಮೇಲ್ದಂಡೆ ಕಾಲುವೆಯಿಂದ ಮತ್ತು ಸಾಸ್ವೆಹಳ್ಳಿ ಏತ ನೀರಾವರಿಯಿಂದ ತಾಲ್ಲೂಕಿನ ಎಲ್ಲಾ ಕೆರೆಗಳಿಗೆ ನೀರನ್ನು ತುಂಬಿಸುವ ಮಹತ್ಕಾರ್ಯವನ್ನು ಈಗಾಗಲೆ ಕೈಗೊಂಡಿದ್ದೇನೆ. ಜೊತೆಗೆ ಎಲ್ಲಾ ಕೆರೆಗಳಲ್ಲಿ ಬೆಳೆದಿರುವ ಸೀಮೆ ಜಾಲಿಗಿಡ ತೆಗೆಸುವುದು ಮತ್ತು ಕೆರೆಯ ಹೂಳನ್ನು ಎತ್ತಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇನೆ.
ರೈತರು ಆರೋಗ್ಯವಂತರಾಗಬೇಕಾದರೆ ತಮ್ಮ ಹೊಲ ತೋಟ ಗದ್ದೆಗಳಲ್ಲಿ ದಿನಕ್ಕೆ ಕನಿಷ್ಠ 2 ಗಂಟೆಗಳ ಕಾಲ ಕೆಲಸ ಮಾಡಿದರೆ ಇದರಿಂದ ಆರೋಗ್ಯ ಸುಧಾರಿಸುವುದಲ್ಲದೆ ಬೇರೆಯವರನ್ನು ಕೆಲಸಕ್ಕಾಗಿ ಅವಲಂಬನೆ ಮಾಡುವುದು ತಪ್ಪುತ್ತದೆ. ಈ ಬಗ್ಗೆ ಎಲ್ಲಾ ರೈತರು ತಮ್ಮ ಇಚ್ಚಾಶಕ್ತಿಯನ್ನು ಬೆಳೆಸಿಕೊಂಡರೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಚಿದು ಶಾಸಕರು ಸಲಹೆ ನೀಡಿದರು.
ಮುಖ್ಯ ಅತಿಥಿಗಳಾಗಿ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಈಚಘಟ್ಟದ ಸಿದ್ದವೀರಪ್ಪ, ಜಿ.ಪಂ. ಸದಸ್ಯರುಗಳಾದ ರಾಮಗಿರಿ ಕ್ಷೇತ್ರದ ಮಹೇಶ್ ಮತ್ತು ಮಲ್ಲಾಡಿಹಳ್ಳಿ ಕ್ಷೇತ್ರದ ತಿಪ್ಪೇಸ್ವಾಮಿ, ಪಿಎಲ್.ಡಿ ಬ್ಯಾಂಕ್ ಅಧ್ಯಕ್ಷ ಕೆ.ಸಿ.ರಮೇಶ್, ಕೃಷಿಕ ಸಮಾಜದ ಅಧ್ಯಕ್ಷ ಎನ್.ಆರ್.ಮಹೇಶ್ವರಪ್ಪ ಮಾತನಾಡಿದರು.
ತಾಲ್ಲೂಕು ರೈತ ಸಂಘದ ಅಧ್ಯಕ್ಷ ಅಪ್ಪರಸನಹಳ್ಳಿ ಬಸವರಾಜಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಹಾಯಕ ಕೃಷಿ ನಿರ್ದೇಶಕಿ ಭಾರತಮ್ಮ ಪ್ರಾಸ್ತಾವಿಕ ನುಡಿಗಳನ್ನಾಡಿದರು. ತಾ.ಪಂ. ಸದಸ್ಯರಾದ ಪರಮೇಶ್ವರಪ್ಪ, ಕೃಷಿ ಸಮಾಜದ ಉಪಧ್ಯಕ್ಷ ಗುರುಮೂರ್ತಿ, ಬಬ್ಬೂರು ಕೃಷಿ ವಿಜ್ಞಾನಿ ಓಂಕಾರಪ್ಪ ಮುಂತಾದವರು ಉಪಸ್ಥಿತರಿದ್ದರು.
ಪ್ರಗತಿ ಪರ ರೈತರಾದ ಹೊಳಲ್ಸೆರೆಯ ಎನ್.ಸಿದ್ದರಾಮಪ್ಪ, ಚನ್ನಪಟ್ಟಣದ ಕೆ.ಜಿ.ಸದಾನಂದಯ್ಯ, ಮತ್ತು ಉಪ್ಪರಿಗೇನಹಳ್ಳಿಯ ದಿನೇಶ್ಕುಮಾರ್ ಇವರಿಗೆ ಸನ್ಮಾನಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ