ಫಾಸ್ಟ್ ಟ್ಯಾಗ್ ಜಾರಿಗೆ ರೈತರ ವಿರೋಧ

ದಾವಣಗೆರೆ:

    ರಾಷ್ಟ್ರೀಯ ಹೆದ್ದಾರಿಗಲ್ಲಿ ಸಂಚರಿಸುವ ವಾಹನಗಳಿಗೆ ಕಡ್ಡಾಯವಾಗಿ ಫಾಸ್ಟ್ ಟ್ಯಾಗ್ ಅಳವಡಿಸಬೇಕೆಂಬ ಅವೈಜ್ಞಾನಿಕ ನೀತಿ ಜಾರಿಗೆ ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ(ಹುಚ್ಚವ್ವನಹಳ್ಳಿ ಮಂಜುನಾಥ್ ಬಣ)ಯ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

    ಇಲ್ಲಿನ ಜಯದೇವ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಹೊರಟ ರೈತ ಸಂಘದ ಪದಾಧಿಕಾರಿಗಳು, ಕಾರ್ಯಕರ್ತರು, ಅವೈಜ್ಞಾನಿಕವಾಗಿ ವಾಹನಗಳಿಗೆ ಫಾಸ್ಟ್ ಟ್ಯಾಗ್ ಅಳವಡಿಕೆ ಕಡ್ಡಾಯಗೊಳಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ, ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಿಲ್ಲಾಡಳಿತ ಭವನಕ್ಕೆ ತೆರಳಿ ಪ್ರಭಾರ ಅಪರ ಜಿಲ್ಲಾಧಿಕಾರಿ ನಜ್ಮಾ ಜಿ ಅವರ ಮುಖಾಂತರ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

   ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್, ರಾಷ್ಟ್ರೀಯ ಹೆದಾರಿಯಲ್ಲಿ ಸಂಚರಿಸುವ ಎಲ್ಲಾ ವಾಹನಗಳಿಗೆ ಕೇಂದ್ರ ಸರ್ಕಾರವು ಡಿ.1ರಿಂದ ಫಾಸ್ಟ್ ಟ್ಯಾಗ್ ಅನ್ನು ಕಡ್ಡಾಯವಾಗಿ ಅಳವಡಿಸಲು ಮುಂದಾಗಿರುವುದರಿಂದ ಸ್ಥಳೀಯರಿಗೆ, ರೈತರಿಗೆ ಹಾಗೂ ವಾಹನ ಮಾಲೀಕರುಗಳಿಗೆ ಸಾಕಷ್ಟು ತೊಂದರೆಯಾಗಲಿದೆ ಎಂದು ಆರೋಪಿಸಿದರು.

    ಮುಖ್ಯವಾಗಿ ದಾವಣಗೆರೆಯಿಂದ ತಾಲೂಕಿನ ಹೆಬ್ಬಾಳ್‍ವರೆಗೆ ಸರ್ವೀಸ್ ರಸ್ತೆಯೇ ಇಲ್ಲ. ಇದರಿಂದ ಸಾರ್ವಜನಿಕರು, ಸ್ಥಳೀಯರು ತಮ್ಮ ವಾಹನಗಳಿಗೆ, ರೈತರ ಟ್ರ್ಯಾಕ್ಟರ್‍ಗಳಿಗೂ ತೊಂದರೆಯಾಗಲಿದೆ. ವಾನಹನಗಳಿಗೆ ಕಡ್ಡಾಯವಾಗಿ ಫಾಸ್ಟ್ ಟ್ಯಾಗ್ ಅನ್ನು ಅಳವಡಿಸುವುದನ್ನು ಜಾರಿಗೆ ತರುವ ಮುನ್ನ ರಾಷ್ಟ್ರೀಯ ಹೆದ್ದಾರಿ-4ರ ಪಕ್ಕದ ಗ್ರಾಮಗಳ ಸ್ಥಳೀಯರ ವಾಹನ ಸಂಚಾರಕ್ಕಾಗಿ ಸೇವಾ(ಸರ್ವೀಸ್) ರಸ್ತೆ ನಿರ್ಮಿಸಬೇಕು. ಅಲ್ಲಿಯ ವರೆಗೂ ವಾಹನಗಳಿಗೆ ಫಾಸ್ಟ್ ಟ್ಯಾಗ್ ಅಳವಡಿಸುವುದನ್ನು ತಡೆ ಹಿಡಿಯಬೇಕು ಎಂದು ಒತ್ತಾಯಿಸಿದರು.

    ಹೆದ್ದಾರಿಗಳಲ್ಲಿ ರಸ್ತೆ ಅಪಘಾತವಾದ ಸಂದರ್ಭದಲ್ಲಿ ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಸಾಗಿಸಲು ಅಂಬ್ಯುಲೆನ್ಸ್ ವ್ಯವಸ್ಥೆ ಇಲ್ಲ. ಹೀಗಾಗಿ ಸಕಾಲದಲ್ಲಿ ಪ್ರಥಮ ಚಿಕಿತ್ಸೆ ದೊರೆಯದೇ ಸಾಕಷ್ಟು ಜನ ಅಸುನೀಗಿರುವ ಉದಾಹರಣೆಗಳಿವೆ. ಹೆದ್ದಾರಿಗಳಲ್ಲಿ ಇಂತಹ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮೊದಲ ಆದ್ಯತೆ ಮೇರೆಗೆ ಮಾಡಬೇಕೆಂದು ಆಗ್ರಹಿಸಿದರು.

    ಈ ಮುಂಚೆ ಒಂದು ಸಲ ಟೋಲ್ ಶುಲ್ಕ ಪಾವತಿಸಿದರೆ 24 ಗಂಟೆ ಕಾಲ ಎಷ್ಟು ಬಾರಿಯಾದರೂ ಸಂಚರಿಸಬಹುದಿತ್ತು. ಆದರೆ, ಈಗ ವಾಹನಗಳಿಗೆ ಫಾಸ್ಟ್ ಟ್ಯಾಗ್ ಅಳವಡಿಕೆಗೆ ಮುಂದಾಗಿರುವುದರಿಂದ ಇನ್ನು ಮುಂದೆ ವಾಹನ ಮಾಲೀಕರು, ಹೆದ್ದಾರಿಗಳಲ್ಲಿನ ಟೋಲ್‍ಗಳಲ್ಲಿ ಪ್ರತಿ ಸಲವೂ ರದ್ತೆ ಬಳಕೆದಾರರ ಶುಲ್ಕ ಪಾವತಿಸಬೇಕಾಗುತ್ತದೆ. ಇದರಿಂದ ವಾಹನ ಮಾಲೀಕರ ಜೇಬಿಗೆ ಕತ್ತರಿ ಬೀಳಲಿದೆ.

     ಅದ್ದರಿಂದ ತಕ್ಷಣವೇ ಕೇಂದ್ರ ಸರ್ಕಾರ ಈ ಅವೈಜ್ಞಾನಿಕ ನಿರ್ಧಾರದಿಂದ ಹಿಂದಕ್ಕೆ ಸರಿಯಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುಮ್ಮನೂರು ಬಸವರಾಜ, ಮುಖಂಡರಾದ ಯಲೋದಹಳ್ಳಿ ರವಿಕುಮಾರ, ಕಾಡಜ್ಜಿ ಪ್ರಕಾಶ, ಪಾಮೇನಹಳ್ಳಿ ಗೌಡ್ರ ಶೇಖರಪ್ಪ, ಚಿಕ್ಕ ಬೂದಿಹಾಳ್ ಭಗತ್ ಸಿಂಹ, ನಿಟುವಳ್ಳಿ ಅಂಜಿನಪ್ಪ ಪೂಜಾರ, ಸೂರ್ಯಪ್ಪ, ಅರಸನಾಳು ಸಿದ್ದಪ್ಪ, ಕೋಲ್ಕುಂಟೆ ಬಸವರಾಜ, ಕುಕ್ಕವಾಡ ಪರಮೇಶ, ಆಲೂರು ಪರಶುರಾಮ, ಚಿರಂಜೀವಿ, ಹುಚ್ಚವ್ವನಹಳ್ಳಿ ಪ್ರಕಾಶ, ಜಗಳೂರು ಸತೀಶ, ಜಿ.ವೀರಣ್ಣ, ಕರಿಲಕ್ಕೇನಹಳ್ಳಿ ನಾಗಪ್ಪ, ಜಿ.ಎಂ.ಕುಬೇಂದ್ರಪ್ಪ, ನಾಗರಾಜ, ಕೋಲ್ಕುಂಟೆ ಉಚ್ಚೆಂಗೆಪ್ಪ, ಕೆ.ಬಿ.ಲೋಕೇಶ ನಾಯ್ಕ, ಶಾಂತಪ್ಪ, ಅಂಜಿನಪ್ಪ, ತಿಪ್ಪೇಸ್ವಾಮಿ ಸೇರಿದಂತೆ ಹಲವರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link